ಹಿಂದುತ್ವ ಜನರ ಹೊಟ್ಟೆ ತುಂಬಿಸುತ್ತಾ?;ಮಾಜಿ ಸಿಎಂ ಸಿದ್ದರಾಮಯ್ಯ
Team Udayavani, Oct 25, 2018, 3:36 PM IST
ಬೈಂದೂರು: ಹಿಂದುತ್ವ ಎನ್ನುವುದು ಜನರ ಹೊಟ್ಟೆ ತುಂಬಿಸುತ್ತದಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದ್ದಾರೆ.
ಅವರು ಗುರುವಾರ ನಾಗೂರಿನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣಾ ಪ್ರಚಾರ ಸಭೆಯಲ್ಲಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಬಿಜೆಪಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದಾರೆ.
ಹಿಂದುತ್ವ ಜನರ ಹೊಟ್ಟೆ ತುಂಬಿಸುತ್ತದಾ? ಜನರನ್ನ ಪ್ರಚೋದನೆ ಮಾಡಿ ದಾರಿ ತಪ್ಪಿಸಿದುವುದರಿಂದ ಹೊಟ್ಟೆ ತುಂಬುತ್ತದಾ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರಿದರು.
ಪ್ರಧಾನಿ ಮೋದಿ ಅವರು ಯಾವಗಲೂ ಮನ್ ಕೀ ಬಾತ್ , ಮನ್ ಕೀ ಬಾತ್ ಎನ್ನುತ್ತಾರೆ ಆದರೆ ಕಾಮ್ ಕೀ ಬಾತ್ ಮಾತನಾಡುವುದೇ ಇಲ್ಲ ಎಂದರು.
ಯಡಿಯೂರಪ್ಪನವರು ಹಸಿರು ಶಾಲು ಹಾಕಿ ಡೋಂಗಿತನದಲ್ಲಿ ನಾನು ಮಣ್ಣಿನ ಮಗ ಅನ್ನುತ್ತಾರೆ. ನಾವ್ಯಾರು ಮಣ್ಣಿನ ಮಕ್ಕಳಲ್ವಾ ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಅವರು 4 ವರ್ಷ ಲೋಕಸಭಾ ಸದಸ್ಯರಾಗಿದ್ದ ವೇಳೆ ಒಂದು ದಿನ ವಾದರೂ ಸಾಲ ಮನ್ನಾ ಮಾಡುವ ಕುರಿತು ಪ್ರಧಾನಿ ಬಳಿ ಬಾಯಿ ಬಿಟ್ಟಿದ್ದರಾ ಎಂದು ಪ್ರಶ್ನಿಸಿದರು.