21 ಸಾವಿರ ಮಕ್ಕಳಿಗೆ ವಸತಿ ಸೌಲಭ್ಯ: ಸಚಿವ ಕೋಟ ಶ್ರೀನಿವಾಸ ಪೂಜಾರಿ
Team Udayavani, Aug 9, 2022, 8:30 PM IST
ಹರಪನಹಳ್ಳಿ: ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ 24 ಸಾವಿರ ಹಾಸ್ಟೆಲ್ಗಳಿದ್ದು, ಇನ್ನೂ 1.20 ಲಕ್ಷ ಮಕ್ಕಳು ಹೊರಗಡೆ ಇದ್ದಾರೆ. ಅದರಲ್ಲಿ ಸದ್ಯ ಸ್ಥಳದ ಲಭ್ಯತೆಗನುಗುಣವಾಗಿ 21 ಸಾವಿರ ಮಕ್ಕಳಿಗೆ ವಸತಿ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಪಟ್ಟಣದ ಹೊರವಲಯದಲ್ಲಿರುವ ಸಮತ ರೆಸಾರ್ಟ್ನಲ್ಲಿ ನಡೆಯುತ್ತಿರುವ ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಪ್ರಶಿಕ್ಷಣ ವರ್ಗಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಜುಕೇಶನ್ ಹಬ್ನಂತಿರುವ ಮಂಗಳೂರು, ಬೆಂಗಳೂರು, ಮೈಸೂರು, ಕಲುºರ್ಗಿ, ಬೆಳಗಾವಿ ಸೇರಿದಂತೆ ಇತರೆಡೆ ದೀನದಯಾಳ್ ಹೆಸರಿನಲ್ಲಿ ಒಂದು ಸಾವಿರ ಮಕ್ಕಳಿಗೆ ಅವಕಾಶವಿರುವ ವಿದ್ಯಾರ್ಥಿ ನಿಲಯಗಳನ್ನು ಸಹ ಮಂಜೂರು ಮಾಡಲು ಕ್ರಮ ಕೈಗೊಂಡಿದ್ದೇವೆ. ಜತೆಗೆ 50 ಕನಕದಾಸ ಹಾಸ್ಟೆಲ್, 100 ಬಾಬಾಸಾಹೇಬ್ ಅಂಬೇಡ್ಕರ ಹಾಸ್ಟೆಲ್ ಮಂಜೂರು ಮಾಡಿದ್ದೇವೆ. ಬಿಸಿಎಂ ಹಾಸ್ಟೆಲ್ನಿಂದ ಹೊರಗುಳಿದ ವಿದ್ಯಾರ್ಥಿಗಳಿಗೆ ವಿದ್ಯಾಶ್ರೀ ಯೋಜನೆ ಜಾರಿ ಇದೆ.
ಹಂತಹಂತವಾಗಿ ಹೊರಗುಳಿದ ಎಲ್ಲ ವಿದ್ಯಾರ್ಥಿಗಳನ್ನು ಬಿಸಿಎಂ ಹಾಸ್ಟೆಲ್ ಒಳಗೆ ಅವಕಾಶ ಕಲ್ಪಿಸಲಾಗುವುದು ಎಂದರು.
ನೇರವಾಗಿ ರೈತರ ಖಾತೆಗೆ ಜಮಾ
ಗಂಗಾ ಕಲ್ಯಾಣ ಯೋಜನೆಯಲ್ಲಿ 2015ರಿಂದ 2017ರವರೆಗೆ 14 ಸಾವಿರ ಕೊಳವೆ ಬಾವಿಗಳನ್ನು ಕೊರೆಸಬೇಕಾಗಿತ್ತು. ಈ ಬಗ್ಗೆ ತನಿಖೆ ವರದಿ ಬಂದಾಗ 5 ಸಾವಿರ ಕೊಳವೆ ಬಾವಿ ಕೊರೆಸಲಾಗಿದೆ. 1 ಸಾವಿರ ಕೊಳವೆ ಬಾವಿಗಳ ಟೆಂಡರ್ನಲ್ಲಿ ಮಾತ್ರ ಲೋಪವಾಗಿತ್ತು. ಬೋರ್ವೆಲ್ಗಳನ್ನು ಕೊರೆಸುವ ಪ್ರಕ್ರಿಯೆ ನಡೆದಿದೆ. ಪ್ರತೀ ವಿಧಾನಸಭಾ ಕ್ಷೇತ್ರದಿಂದ 60 ಫಲಾನುಭವಿಗಳ ಆಯ್ಕೆಗೆ ಹಿಂದುಳಿದ ವರ್ಗಗಳ ಇಲಾಖೆಯಿಂದ ಅವಕಾಶವಿದ್ದು, ಗಂಗಾಕಲ್ಯಾಣ ಯೋಜನೆಗೆ ಆಯ್ಕೆಯಾದ ಅರ್ಹ ರೈತ ಫಲಾನುಭವಿಗಳಿಗೆ ನೇರವಾಗಿ ಅವರ ಖಾತೆಗೆ ಹಣ ಜಮಾ ಮಾಡಲಾಗುವುದು. ಅವರು ಬೇಕಾದ ಮಾನ್ಯತೆ ಪಡೆದ ಏಜೆನ್ಸಿಯಿಂದ ಕೊಳವೆ ಬಾವಿ ಕೊರೆಸಿಕೊಳ್ಳಬಹುದಾಗಿದೆ ಎಂದರು.