ಕೇಂದ್ರ ಬರ ತಂಡದಿಂದ ದಿಢೀರ್ ಅಧ್ಯಯನ
Team Udayavani, Feb 28, 2019, 12:15 AM IST
ರಾಯಚೂರು: ಯಾವುದೇ ಮಾಹಿತಿ ನೀಡದೆ ಆಗಮಿಸಿದ್ದ ಕೇಂದ್ರಬರ ಅಧ್ಯಯನ ತಂಡ ತರಾತುರಿಯಲ್ಲಿ ಬರ ಅಧ್ಯಯನ ನಡೆಸಿದ್ದು, ರೈತರ ಆಕ್ರೋಶಕ್ಕೆ ಗುರಿಯಾಯಿತು.
ಬುಧವಾರ ತಾಲೂಕಿನ ಕುಕನೂರು, ಮನ್ಸಲಾಪುರ, ಮುರಾನ್ ಪುರ ಸೇರಿ ವಿವಿಧ ಗ್ರಾಮಗಳಲ್ಲಿ ಬರ ಅಧ್ಯಯನ ನಡೆಸಿದೆ. ಈ ಬಾರಿ ಹಿಂಗಾರು ಕೂಡ ಸಂಪೂರ್ಣ ಕೈಕೊಟ್ಟ ಹಿನ್ನೆಲೆಯಲ್ಲಿ ಜೋಳ, ಕಡಲೆ ಬೆಳೆಯೂ ಕೈ ಹಿಡಿದಿಲ್ಲ. ಅಧಿ ಕಾರಿಗಳೆದುರು ನೋವು ತೋಡಿಕೊಳ್ಳಬೇಕು ಎಂಬ ರೈತರ ಆಸೆಗೆ ಅಧಿ ಕಾರಿಗಳೇ ತಣ್ಣೀರೆರಚಿದಂತಾಯಿತು.
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಡಾ| ಸುಪರ್ಣಾ ಪಚೌರಿ ನೇತೃತ್ವದ ತಂಡ ಜಿಲ್ಲೆಯ ಬರ ಪರಿಸ್ಥಿತಿ ಅವಲೋಕನಕ್ಕೆ ಆಗಮಿಸಿತ್ತು. ಸಮೀಪದ ಯರಮರಸ್ ಸರ್ಕಿಟ್ ಹೌಸ್ನಲ್ಲಿ ಜಿಲ್ಲಾ ಧಿಕಾರಿ, ಜಿ.ಪಂ. ಅಧಿ ಕಾರಿಗಳೊಂದಿಗೆ ಸಭೆ ನಡೆಸಿ, ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಮಾಹಿತಿ ಪಡೆದರು. ಸಭೆ ನಂತರ ಕುಕನೂರು, ಮನ್ಸಲಾಪುರು, ಹುಣಸಿಹಾಳ ಹುಡಾ, ಮುರಾನ್ಪುರ ಗ್ರಾಮಗಳಿಗೆ ಭೇಟಿ ನೀಡಿದ ತಂಡ ನರೇಗಾ ಯೋಜನೆ ಕುರಿತು ಮಾಹಿತಿ ಪಡೆಯಿತು.
ದೇವದುರ್ಗ ತಾಲೂಕಿನ ಹೊಲಗಳಿಗೆ ಭೇಟಿ ನೀಡಿ ಅಲ್ಲಿಯ ಸ್ಥಿತಿಗತಿ ಪರಿಶೀಲಿಸಿದ ನಂತರ ತಂಡವು ಯಾದಗಿರಿ ಜಿಲ್ಲೆಗೆ ಪ್ರಯಾಣ ಬೆಳೆಸಿತು. ಬಿ.ಕೆ. ಶ್ರೀವಾಸ್ತವ್ ನೇತೃತ್ವದ ಕೇಂದ್ರ ಬರ ಅಧ್ಯಯನ ತಂಡ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮತ್ತು ಚಳ್ಳಕೆರೆ ತಾಲೂಕಿನ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಬಾಗಲಕೋಟೆಯಲ್ಲೂ ಅಧಿಕಾರಿಗಳ ತಂಡ ಬರಪರಿಶೀಲನೆ ನಡೆಸಿತು.