ಪ್ರವಾಹ ಸಮೀಕ್ಷೆಗೆ ಅಂತರ್ ಸಚಿವಾಲಯ ತಂಡ
Team Udayavani, Aug 24, 2019, 3:05 AM IST
ಬೆಂಗಳೂರು: ಪ್ರವಾಹ ಪೀಡಿತ ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಪರಿಹಾರ ಧನ ಬಿಡುಗಡೆಯಾಗಿಲ್ಲ ಎಂಬ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಮಧ್ಯೆಯೇ ಕೇಂದ್ರ ಸರ್ಕಾರದ ಅಂತರ್ ಸಚಿವಾಲಯದ ತಂಡವೊಂದು ರಾಜ್ಯಕ್ಕೆ ಭೇಟಿ ನೀಡಿ, ಪ್ರವಾಹದ ಹಾನಿಯ ತೀವ್ರತೆಯನ್ನು ಪರಿಶೀಲಿಸಲಿದೆ. ಶನಿವಾರ ಆಗಮಿಸಲಿರುವ ತಂಡ ನಾಲ್ಕು ದಿನಗಳವರೆಗೆ ಅಂದರೆ ಆಗಸ್ಟ್ 27ರ ವರೆಗೆ ರಾಜ್ಯದಲ್ಲಿ ಅವಲೋಕನ ನಡೆಸಲಿದೆ.
ಕೃಷಿ, ಹಣಕಾಸು, ರಸ್ತೆ ಸಾರಿಗೆ, ಗ್ರಾಮೀಣಾಭಿವೃದ್ಧಿ ಹಾಗೂ ಜಲ ಶಕ್ತಿ ಸಚಿವಾಲಯದ ಅಧಿಕಾರಿಗಳು ತಂಡದಲ್ಲಿ ಇರಲಿದ್ದಾರೆ. ಆಗಸ್ಟ್ 19 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ, ತಕ್ಷಣವೇ ಸಮಿತಿ ರಚನೆ ಮಾಡಿ, 11 ರಾಜ್ಯಗಳಲ್ಲಿ ಪ್ರವಾಹದಿಂದ ಉಂಟಾದ ಹಾನಿ ಪರಿಶೀಲನೆ ಮಾಡಲು ನಿರ್ಧರಿಸಿತ್ತು. ಇದರಂತೆ ಅಸ್ಸಾಂ, ಮೇಘಾಲಯ, ತ್ರಿಪುರಾ, ಬಿಹಾರ, ಉತ್ತರಾಖಂಡ, ಹಿಮಾಚಲ ಪ್ರದೇಶ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ಕರ್ನಾಟಕ ಮತ್ತು ಕೇರಳಕ್ಕೂ ತಂಡ ತೆರಳಲಿದೆ.
ಸೂಕ್ತ ಮಾಹಿತಿ ನೀಡಲು ಸೂಚನೆ: ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳ ಅಧ್ಯಯನಕ್ಕಾಗಿ ಆಗಮಿಸುತ್ತಿರುವ ಕೇಂದ್ರ ತಂಡಕ್ಕೆ ಆಯಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಜತೆಯಲ್ಲಿದ್ದ ವಾಸ್ತವಾಂಶದ ಮಾಹಿತಿ ನೀಡುವಂತೆ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಸೂಚಿಸಿದ್ದಾರೆ.
ಕೇಂದ್ರ ಅಧ್ಯಯನ ತಂಡವು ಆಗಸ್ಟ್ 28ರವರೆಗೆ ರಾಜ್ಯದಲ್ಲಿ ಪ್ರವಾಸ ಮಾಡಲಿದ್ದು, ಆಯಾ ಜಿಲ್ಲೆಗಳಿಗೆ ಬಂದ ಸಂದರ್ಭದಲ್ಲಿ ಪ್ರವಾಹದಿಂದ ನಷ್ಟವಾಗಿರುವ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾಗೂ ರಸ್ತೆ ಸೇರಿದಂತೆ ಮೂಲಸೌಕರ್ಯಗಳ ನಷ್ಟದ ಬಗ್ಗೆ ಸಮರ್ಪಕ ಮಾಹಿತಿ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ.