ನೀರಾವರಿ ತಜ್ಞ ಡಿ.ಎನ್.ದೇಸಾಯಿ ನಿಧನ
Team Udayavani, Dec 9, 2019, 3:03 AM IST
ಬೆಂಗಳೂರು: ಲೋಕೋಪಯೋಗಿ ಇಲಾಖೆ ನಿವೃತ್ತ ಕಾರ್ಯದರ್ಶಿಗಳಾಗಿದ್ದ ನೀರಾವರಿ ತಜ್ಞ ಡಿ.ಎನ್.ದೇಸಾಯಿ (88) ಅವರು ಭಾನುವಾರ ಮಧ್ಯಾಹ್ನ ನಗರದ ಬಸವೇಶ್ವರನಗರದ ನಿವಾಸದಲ್ಲಿ ನಿಧನರಾದರು. ಮೃತರ ಅಂತ್ಯಕ್ರಿಯೆ ಸೋಮವಾರ ಬೆಳಗ್ಗೆ ಚಾಮರಾಜ ಪೇಟೆಯ ವೀರಶೈವ ರುದ್ರಭೂಮಿ ಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸರ್ಕಾರಿ ಸೇವೆಯಿಂದ ನಿವೃತ್ತರಾದ ಬಳಿಕ ಸುಮಾರು 30 ವರ್ಷಗಳ ಕಾಲ ನೀರಾವರಿ ಕ್ಷೇತ್ರದಲ್ಲಿ ನಾನಾ ಹಂತದ ಜವಾಬ್ದಾರಿ ನಿರ್ವಹಿ ಸಿದ್ದರು. ಮುಖ್ಯವಾಗಿ ನೀರಾವರಿ ಯೋಜನೆಗಳಿಗೆ ಸಂಬಂಧಪಟ್ಟ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರಾಗಿ ಹಾಗೂ ಕೃಷ್ಣಾ, ಮಹದಾಯಿ ಸೇರಿ ಹಲವು ಅಂತಾರಾಜ್ಯ ಜಲವಿವಾದಗಳಿಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರಕ್ಕೆ ಪ್ರಧಾನ ಸಲಹೆಗಾರರಾಗಿ ಮಹತ್ವದ ಸೇವೆ ಸಲ್ಲಿಸಿದ್ದಾರೆ.
ಕೃಷ್ಣಾ ಭಾಗ್ಯ ಜಲ ನಿಗಮ, ಕರ್ನಾಟಕ ನೀರಾ ವರಿ ನಿಗಮ, ವಿಶ್ವೇಶ್ವರಯ್ಯ ಜಲ ನಿಗಮದ ನಿರ್ದೇಶಕ ಮಂಡಳಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದ ಅವರು, ಈ ಮೂರು ನಿಗಮಗಳ ತಾಂತ್ರಿಕ ಉಪ ಸಮಿತಿ ಅಧ್ಯಕ್ಷರಾಗಿದ್ದರು.
ಸಂತಾಪ: ಡಿ.ಎನ್.ದೇಸಾಯಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.