ಬೆಂಗಳೂರು, ಹಾವೇರಿಯಲ್ಲಿ ಐಟಿ ದಾಳಿ; 2 ಕೋಟಿ ರೂ. ನಗದು ವಶಕ್ಕೆ
Team Udayavani, Mar 15, 2019, 5:58 AM IST
ಬೆಂಗಳೂರು: ಚುನಾವಣಾ ದಿನಾಂಕ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಅಕ್ರಮ ನಗದು ವ್ಯವಹಾರಗಳ ಮೇಲೆ ತೀವ್ರ ನಿಗಾ ಇರಿಸಿರುವ ಆದಾಯ ತೆರಿಗೆ ಇಲಾಖಾ ಅಧಿಕಾರಿಗಳು ರಾಜಕಾರಣಿಗಳ ಮತ್ತು ಅವರ ಆಪ್ತರ ವ್ಯವಹಾರಗಳ ಮೇಲೆ ಹದ್ದಿನ ಕಣ್ಣು ಇರಿಸಿದ್ದಾರೆ. ಶುಕ್ರವಾರ ಬೆಳ್ಳಂಬೆಳಿಗ್ಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಲೆಕ್ಕಪತ್ರ ಸಹಾಯಕ ನಾರಾಯಣ ಗೌಡ ಪಾಟೀಲ ಅವರ ಹಾವೇರಿಯಲ್ಲಿರುವ ಬಾಡಿಗೆ ಮನೆ ಮತ್ತು ಬೆಂಗಳೂರಿನ ರಾಜಮಹಲ್ ಹೊಟೇಲ್ ನಲ್ಲಿ ಅವರು ಉಳಿದುಕೊಂಡಿದ್ದ ಕೊಠಡಿಗೆ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಸುಮಾರು ಎರಡು ಕೋಟಿ ರೂಪಾಯಿಗಳಷ್ಟು ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ. ಕಮಿಷನ್ ರೂಪದಲ್ಲಿ ಸಂಗ್ರಹಿಸಡಲಾಗಿದ್ದ ಹಣ ಇದಾಗಿರಬಹುದೆಂಬ ಶಂಕೆಯೂ ಇದೀಗ ವ್ಯಕ್ತವಾಗುತ್ತಿದ್ದು ಈ ಮೊತ್ತವನ್ನು ಪಾಟೀಲ ಅವರು ಯಾರಿಗೆ ನೀಡಲು ತೆಗೆದಿರಿಸಿದ್ದರು ಎಂಬ ಕುರಿತಾಗಿಯೂ ಇದೀಗ ಅಧಿಕಾರಿಗಳು ತನಿಖೆ ಪ್ರಾರಂಭಿಸಿದ್ದಾರೆ. ದಾಳಿ ವೇಳೆ ಹೊಟೇಲ್ ಕೊಠಡಿಯಿಂದ ನಾರಾಯಣ ಗೌಡ ಪಾಟೀಲ ಅವರು ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ.