ಅಸ್ತಿತ್ವಕ್ಕಾಗಿ ಸಿದ್ದು ವಿರುದ್ಧ ಜೆಡಿಎಸ್ ಆರೋಪ
Team Udayavani, Aug 26, 2019, 3:06 AM IST
ಬೆಂಗಳೂರು: ದೇವೇಗೌಡರ ಕುಟುಂಬದವರು ಹಳೇ ಮೈಸೂರು ಭಾಗದಲ್ಲಿ ರಾಜಕೀಯ ಅಸ್ತಿತ್ವಕ್ಕಾಗಿ ಸಿದ್ದರಾಮಯ್ಯ ಅವರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ದೇವೇಗೌಡರು ಯಾವುದೇ ಒಕ್ಕಲಿಗ ನಾಯಕರನ್ನೂ ಬೆಳೆಸಿಲ್ಲ ಎಂದು ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಆರೋಪಿಸಿದ್ದಾರೆ.
ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ಗೆ ಕರಾವಳಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಏನೂ ಪ್ರಯೋಜನ ಆಗುವುದಿಲ್ಲ. ಹಳೇ ಮೈಸೂರು ಭಾಗದಲ್ಲಿ ಮಾತ್ರ ಅದರ ಅಸ್ತಿತ್ವ ಇರುವುದು. ಈ ಭಾಗದಲ್ಲಿ ಕಾಂಗ್ರೆಸ್ ಮಾತ್ರ ಅವರಿಗೆ ನೇರ ಪ್ರತಿಸ್ಪರ್ಧಿ ಆಗಿರುವುದರಿಂದ, ಅಸ್ತಿತ್ವ ಉಳಿಸಿಕೊಳ್ಳಲು ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯ ದೇವೇಗೌಡರ ಕುಟುಂಬಕ್ಕೆ ಗೌರವ ಕೊಟ್ಟಿದೆ. ಆದರೆ, ದೇವೇಗೌಡರ ಕುಟುಂಬ ಒಬ್ಬ ಒಕ್ಕಲಿಗ ವ್ಯಕ್ತಿಯನ್ನಾದರೂ ಬೆಳೆಸಿದೆಯೇ ಎಂದು ಪ್ರಶ್ನಿಸಿದರು. ಜೆಡಿಎಸ್ ಜೊತೆ ಕಾಂಗ್ರೆಸ್ ಸರ್ಕಾರ ನಡೆಸಿರುವುದರಿಂದ ಕಾಂಗ್ರೆಸ್ಗೆ ಅನ್ಯಾಯವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವಾಗಿ ಮಾತನಾಡುವ ವ್ಯಕ್ತಿ. ಯಾರಿಗೂ ಬೆನ್ನ ಹಿಂದೆ ಚೂರಿ ಹಾಕುವ ವ್ಯಕ್ತಿಯಲ್ಲ. ಏನಾದರೂ ಮಾಡಿ ಅಸ್ತಿತ್ವ ಉಳಿಸಿಕೊಳ್ಳಲು ಜೆಡಿಎಸ್ ನಾಯಕರು ಕಾಂಗ್ರೆಸ್ ಬಗ್ಗೆ ಅನಗತ್ಯ ಆರೋಪ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಒಬ್ಬರೇ ಮಾತನಾಡಿದರೇ ಸಾಲದು. ಸಿದ್ದರಾಮಯ್ಯ ತಮ್ಮ ವೈರಿ ಅಂತ ಗೊತ್ತಿದ್ದರೆ, ಮೊದಲೇ ಕಾಂಗ್ರೆಸ್ ಜೊತೆಗೆ ಸರ್ಕಾರ ಬೇಡ ಎಂದು ಹೇಳಬಹುದಿತ್ತು. ಚುನಾವಣೆ ಸಂದರ್ಭದಲ್ಲಿ ಯಾರ ಬಳಿ ಹಣ ಪಡೆದು ಚುನಾವಣೆ ಎದುರಿಸಿದ್ದಾರೆ ಎನ್ನುವುದು ಗೊತ್ತಿದೆ. ಈಗ ಆ ಬಗ್ಗೆ ಚರ್ಚೆ ಬೇಡ. ಹಳೆ ಮೈಸೂರು ಭಾಗದಲ್ಲಿ 25 ಕ್ಷೇತ್ರಗಳಿಗೆ ಡಮ್ಮಿ ಅಭ್ಯರ್ಥಿಗಳನ್ನು ಹಾಕಿಸಿಕೊಂಡು ಗೆಲುವು ಸಾಧಿಸಿ, ಆ ಮೇಲೆ ಕಾಂಗ್ರೆಸ್ ಜೊತೆ ಸರ್ಕಾರ ರಚನೆ ಮಾಡಿದ್ದು, ಬಿಜೆಪಿಗೆ ಮಾಡಿದ ಮೋಸ ಅಲ್ವಾ ಎಂದು ಪ್ರಶ್ನಿಸಿದರು.
ದೇವೇಗೌಡ, ಮಕ್ಕಳಿಂದಲೇ ಸರ್ಕಾರ ಪತನ: ತಿಮ್ಮಾಪುರ
ಮುಧೋಳ: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂದು ದೇವೇಗೌಡ ಹಾಗೂ ಕುಮಾರಸ್ವಾಮಿ ಹೇಳುತ್ತಿರುವುದು ಶುದ್ಧ ಸುಳ್ಳು. ಸರ್ಕಾರ ಪತನಕ್ಕೆ ದೇವೇಗೌಡ ಮತ್ತು ಅವರ ಮಕ್ಕಳೇ ಕಾರಣ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಪಾಲನೆ ಮಾಡದೆ ತಮ್ಮ ಮನಸ್ಸಿಗೆ ಬಂದಂತೆ ಸರ್ಕಾರ ನಡೆಸುವ ಮೂಲಕ ಸಾರ್ವಭೌಮತ್ವ ಸಾ ಧಿಸಿ, ಕಾಂಗ್ರೆಸ್ ಮೇಲೆ ಗೂಬೆ ಕೂರಿಸಲು ಹೊರಟಿರುವುದು ಸರಿಯಲ್ಲ. ಸರ್ಕಾರದ ಪತನಕ್ಕೆ ಸಿದ್ದರಾಮಯ್ಯನವರೇ ಕಾರಣ ಎನ್ನುವ ಆರೋಪ ಸರಿಯಲ್ಲ. ಎಐಸಿಸಿ ಹಾಗೂ ದೇವೇಗೌಡರು ಸೇರಿ ಸರ್ಕಾರ ರಚನೆ ಮಾಡಿದ್ದರು. ಮುಂದೆ ಎಐಸಿಸಿ ನಿರ್ದೇಶನದಂತೆ ಸಿದ್ದರಾಮಯ್ಯ ಕಾರ್ಯ ನಿರ್ವಹಿಸಿದ್ದಾರೆ ಎಂದರು.
ಹಳೇ ಮೈಸೂರು ಭಾಗದಲ್ಲಿ ಪಕ್ಷವನ್ನು ಬಲಪಡಿಸಲು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂ ರಾವ್ ತಕ್ಷಣ ಹಿರಿಯ ನಾಯ ಕರ ಸಭೆ ಕರೆದು ಚರ್ಚಿಸಬೇಕು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು.
-ಎನ್.ಚಲುವರಾಯಸ್ವಾಮಿ, ಮಾಜಿ ಸಚಿವ