ಶ್ರೀಧರ್ ಹೆಬ್ಬಾರ್ ಕರ್ಜೆಗೆ ಕಾಳಿಂಗ ನಾವಡ ಪ್ರಶಸ್ತಿ
Team Udayavani, Aug 13, 2019, 3:00 AM IST
ಬೆಂಗಳೂರು: ನಗರದ ಕಲಾಕದಂಬ ಆರ್ಟ್ ಸೆಂಟರ್ ನೀಡುವ ಈ ಸಾಲಿನ “ಕಾಳಿಂಗ ನಾವಡ ಪ್ರಶಸ್ತಿ’ಗೆ ಹೆಸರಾಂತ ಯಕ್ಷಗಾನ ಕಲಾವಿದ ಎಂ.ಶ್ರೀಧರ ಹೆಬ್ಬಾರ್ ಕರ್ಜೆ ಆಯ್ಕೆಯಾಗಿದ್ದಾರೆ. ಆ.25 ರಂದು ಚಾಮರಾಜಪೇಟೆಯ ಉದಯಭಾನು ಕಲಾ ಸಂಘದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಇದೇ ವೇಳೆ ಪ್ರೊ.ಎಂ.ಎ.ಹೆಗಡೆ ವಿರಚಿತ “ಖಾಂಡವ ದಹನ’ ಯಕ್ಷಗಾನ ಪ್ರದರ್ಶನ ಮತ್ತು ಸೃಷ್ಠಿ ಕಲಾ ವಿದ್ಯಾಲಯ ಹಾಗೂ ಕಲಾಕದಂಬ ವಿದ್ಯಾರ್ಥಿಗಳಿಂದ ನೃತ್ಯರೂಪಕ, ಗಾನ ವೈವಿಧ್ಯ ಸೇರಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಯಕ್ಷಗಾನದ ಭಾಗವತಿಕೆಯ ಮೇರು ಶಕ್ತಿ ಕಾಳಿಂಗ ನಾವಡರ ಹೆಸರಿನಲ್ಲಿ ಬೆಂಗಳೂರಿನ ಕಲಾಕದಂಬ ಆರ್ಟ್ ಸೆಂಟರ್, ಕಳೆದ 9 ವರ್ಷಗಳಿಂದ ಯಕ್ಷಗಾನ ಲೋಕದ ಹಿಮ್ಮೇಳದ ಕಲಾವಿದರಿಗೆ ಈ ಪ್ರಶಸ್ತಿ ನೀಡುತ್ತಾ ಬಂದಿದೆ.
ಎಂ.ಶ್ರೀಧರ ಹೆಬ್ಬಾರ್ ಕರ್ಜೆ ಅವರು ಯಕ್ಷಗಾನದ ತೆಂಕು, ಬಡಗು ಎರಡೂ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು, ಆ ಹಿನ್ನೆಲೆಯಲ್ಲಿ ಈ ಆಯ್ಕೆ ಮಾಡಲಾಗಿದೆ. ಅಲ್ಲದೆ ಸ್ತ್ರೀ ಹಾಗೂ ಪುರುಷ ವೇಷಧಾರಿಯಾಗಿಯೂ ದೇಶ-ವಿದೇಶಗಳಲ್ಲಿ ಹೆಸರು ವಾಸಿಯಾಗಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9886066732, 9845663646 ಅನ್ನು ಸಂಪರ್ಕಿಸಬಹುದು.