ಪಟ್ಟುಬಿಡದ ಪಕ್ಷಗಳು; ವ್ಯರ್ಥವಾದ ಕಲಾಪ
ಯತ್ನಗಳೆಲ್ಲ ವಿಫಲ; ಗದ್ದಲದ ನಡುವೆ 3 ಮಸೂದೆ ಅಂಗೀಕಾರ
Team Udayavani, Feb 22, 2022, 7:05 AM IST
ಬೆಂಗಳೂರು: ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡಿ ದೇಶದ್ರೋಹ ಪ್ರಕರಣ ದಾಖ ಲಿಸಬೇಕೆಂದು ಒತ್ತಾಯಿಸಿ ವಿಪಕ್ಷ ಕಾಂಗ್ರೆಸ್ ಉಭಯ ಸದನಗಳಲ್ಲಿ ನಡೆಸುತ್ತಿರುವ ಪ್ರತಿಭಟನೆ ಸತತ ಆರನೇ ದಿನವಾದ ಸೋಮವಾರವೂ ಮುಂದುವರಿಯಿತು.
ಆಡಳಿತ – ವಿಪಕ್ಷ ನಾಯಕರ ನಡುವೆ ಸುಗಮ ಕಲಾಪಕ್ಕಾಗಿ ಸಭಾಪತಿ ಮತ್ತು ಸ್ಪೀಕರ್ ನಡೆಸಿದ ಪ್ರಯತ್ನ ಫಲ ನೀಡಲಿಲ್ಲ. ಎರಡೂ ಕಡೆ ಕಾಂಗ್ರೆಸ್ ಸದಸ್ಯರ ಪ್ರತಿಭಟನೆ, ಗಲಾಟೆ-ಗದ್ದಲದ ಹಿನ್ನೆಲೆಯಲ್ಲಿ ಕಲಾಪವನ್ನು ಮಂಗಳವಾರಕ್ಕೆ ಮುಂದೂಡುವಂತಾಯಿತು.
ವಿಧಾನಸಭೆಯಲ್ಲಿ ಕಲಾಪ ಆರಂಭ ವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕರು ಸರಕಾರ ಮತ್ತು ಈಶ್ವರಪ್ಪ ವಿರುದ್ಧ ಘೊಷಣೆ ಕೂಗಲಾರಂಭಿಸಿದರು. ಗದ್ದಲದ ನಡುವೆ ಪ್ರಶ್ನೋತ್ತರ ಮುಗಿಸಿ 2011 ಕೆಪಿಎಸ್ಸಿ ಗಜೆಟೆಡ್ ಪ್ರೊಬೆಷನರಿಗಳ ಆಯ್ಕೆ ಸಿಂಧುಗೊಳಿಸುವ ಮಸೂದೆ ಸೇರಿ ಮೂರು ಮಸೂದೆಗಳಿಗೆ ಅಂಗೀಕಾರ ಪಡೆಯಲಾಯಿತು.
ಇದನ್ನೂ ಓದಿ:40 ನೇ ವಯಸ್ಸಿನಲ್ಲಿ ಕಲಾತ್ಮಕ ಪ್ರಯಾಣ ಪ್ರಾರಂಭಿಸಿ ಯಶಸ್ಸು ಕಂಡ ಮೈತ್ರೇಯಿ
ವಿಧಾನಪರಿಷತ್ನಲ್ಲೂ ಅದೇ ಸ್ಥಿತಿ
ವಿಧಾನಪರಿಷತ್ನಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಕಲಾಪ ಆರಂಭವಾಗು ತ್ತಿದ್ದಂತೆ ಹಿರಿಯ ಚಿತ್ರನಟ ರಾಜೇಶ್ ಅವರಿಗೆ ಸಂತಾಪ ಸೂಚಿಸಿದ ಬಳಿಕ ಕಾಂಗ್ರೆಸ್ ಸದಸ್ಯರು ಧರಣಿ ಆರಂಭಿಸಿ ದರು. ಗದ್ದಲದ ನಡುವೆಯೇ ಸಭಾಪತಿ ಪ್ರಶ್ನೋತ್ತರ ಕೈಗೆತ್ತಿಕೊಂಡರು. ಆದರೆ ಕಾಂಗ್ರೆಸ್ ಸದಸ್ಯರು ಈಶ್ವರಪ್ಪ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು. ಪ್ರತಿಯಾಗಿ ಬಿಜೆಪಿ ಸದಸ್ಯರೂ ಘೋಷಣೆ ಕೂಗಿದರು. ಇದರ ನಡುವೆ ಒಂದೆರಡು ಪ್ರಶ್ನೆಗಳಿಗೆ ಸಚಿವರು ಉತ್ತರ ನೀಡಿದರು.
ಬಳಿಕವೂ ಕಾಂಗ್ರೆಸ್ ಪ್ರತಿಭಟನೆ ಮುಂದುವರಿಸಿದ್ದರಿಂದ ವಿಧಾನ ಪರಿಷತ್ ಕಲಾಪವನ್ನು ಅಪರಾಹ್ನಕ್ಕೆ ಮುಂದೂಡಲಾಯಿತು. ಅನಂತರವೂ ಸ್ವಲ್ಪಕಾಲ ಆಡಳಿತ ಪಕ್ಷ ಮತ್ತು ವಿಪಕ್ಷ ಸದಸ್ಯರ ನಡುವೆ ಜಟಾಪಟಿ ನಡೆದು ಮಂಗಳವಾರಕ್ಕೆ ಮುಂದೂಡಲಾಯಿತು. ಎರಡೂ ಕಡೆ ಕಾಂಗ್ರೆಸ್ ಸದಸ್ಯರು ಸೋಮವಾರವೂ ಅಹೋರಾತ್ರಿ ಧರಣಿ ಮುಂದುವರಿಸಿದರು.
ಆರೆಸ್ಸೆಸ್ ವಿರುದ್ಧ ಘೋಷಣೆ: ಸ್ಪೀಕರ್ ಗರಂ
ಪ್ರತಿಭಟನೆ ವೇಳೆ ಆರೆಸ್ಸೆಸ್ ಹೆಸರು ಪ್ರಸ್ತಾವವಾದುದಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಗರಂ ಆದರು. ನಿಮ್ಮ ರಾಜಕೀಯಕ್ಕೆ ಆರೆಸ್ಸೆಸ್ ಹೆಸರು ಯಾಕೆ ಎಳೆದು ತರುತ್ತೀರಿ. ಅದು ಒಂದು ಸೇವಾ ಸಂಘಟನೆ. ಇಲ್ಲಿ ಪದೇ ಪದೆ ಆರೆಸ್ಸೆಸ್ ಹೆಸರು ಪ್ರಸ್ತಾವಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ ಸದಸ್ಯರು, “ಕೈಗೊಂಬೆ ಕೈಗೊಂಬೆ ಆರೆಸ್ಸೆಸ್ ಕೈಗೊಂಬೆ’ ಎಂದು ಘೋಷಣೆ ಕೂಗಿದ್ದು, ಸ್ಪೀಕರ್ ಸಿಟ್ಟಿಗೆ ಕಾರಣವಾಯಿತು.