ಕೆಪಿಎಸ್ಸಿ ನೇಮಕಕ್ಕೆ ಗ್ರಹಣ
Team Udayavani, Feb 13, 2022, 7:40 AM IST
ಬೆಂಗಳೂರು: ಅಕ್ರಮ, ಅವ್ಯವಹಾರ, ಆರೋಪಗಳನ್ನು ಮೈತುಂಬ ಮೆತ್ತಿಕೊಂಡಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ವು ನೇಮಕಾತಿ ಪ್ರಕ್ರಿಯೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಲ್ಲೂ ಭಾರೀ ಮೈ ಮರೆವು ಪ್ರದರ್ಶಿಸುತ್ತಿದೆ.
2016ರಿಂದ 2020ರ ವರೆಗೆ ಹೊರಡಿಸಲಾದ ಅಧಿಸೂಚನೆಗಳ ಪ್ರಕಾರ ವಿವಿಧ ಇಲಾಖೆಗಳಲ್ಲಿ ಸುಮಾರು 7 ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ.
ಪ್ರಕರಣ ಕೋರ್ಟ್ನಲ್ಲಿದೆ, ತಾತ್ಕಾಲಿಕ ಪಟ್ಟಿ ಪ್ರಕಟಿಸಲಾಗಿದೆ, ಆಕ್ಷೇಪಣೆಗಳನ್ನು ಪರಿಶೀಲಿಸಲಾಗು ತ್ತಿದೆ, ಪರೀಕ್ಷೋತ್ತರ ಕೆಲಸಗಳು ನಡೆದಿವೆ, ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ, ಅಂತಿಮ ಪಟ್ಟಿ ಪ್ರಕಟ
ನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ, ಒಂದು ವರ್ಷದಿಂದ ನೇಮಕಾತಿ ಪ್ರಕ್ರಿಯೆ “ಯಥಾಸ್ಥಿತಿ’ಯಲ್ಲಿದೆ -ಹೀಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಅನ್ನುವುದಕ್ಕಿಂತ ಆಗಿಲ್ಲ ಎಂಬುದಕ್ಕೆ ಸಬೂಬುಗಳ ದೊಡ್ಡ ಪಟ್ಟಿಯೇ ಆಯೋಗದ ಬಳಿ ಇದೆ. ಬಹುತೇಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆ “ಒಂದಿಂಚು’ ಕೂಡ ಮುಂದೆ ಹೋಗಿಲ್ಲ.
ಇದರಿಂದ ಸಾವಿರಾರು ಮಂದಿ ಉದ್ಯೋಗಾ ಕಾಂಕ್ಷಿಗಳ ಕನಸುಗಳಿಗೆ ತಣ್ಣೀರು ಬೀಳುತ್ತಿದೆ. ಅತ್ತ ಹಿಂದಿನ ನೇಮಕಾತಿ ಪ್ರಕ್ರಿಯೆಗಳೂ ವರ್ಷಗಟ್ಟಲೆ ನನೆಗುದಿಗೆ ಬಿದ್ದಿವೆ. ಹೊಸ ನೇಮಕಾತಿ ಅಧಿಸೂಚನೆ ಗಳು ಹೊರಬೀಳುತ್ತಿಲ್ಲ.
ಮುಖ್ಯವಾಗಿ 2019-20ನೇ ಸಾಲಿನ ರಾಜ್ಯದ ವಿವಿಧ ಇಲಾಖೆಗಳ 1,136 ಸಹಾಯಕ/ಪ್ರಥಮ ದರ್ಜೆ ಸಹಾಯಕರ ಹುದ್ದೆಗಳು, ಕಿರಿಯ ಸಹಾ ಯಕ/ದ್ವಿತೀಯ ದರ್ಜೆ ಸಹಾಯಕರ 1,323 ಹುದ್ದೆಗಳು, ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ಗಳ 660, ಕಿರಿಯ ಎಂಜಿನಿಯರ್ಗಳ 330, ಉದ್ಯೋಗ ಮತ್ತು ತರಬೇತಿ ಇಲಾಖೆಯ 1,400ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ವರ್ಷಗಳಿಂದ “ಗ್ರಹಣ’ ಹಿಡಿದಿದೆ. ಕೆಪಿಎಸ್ಸಿಯ 2021ರ ಪ್ರತೀ ತಿಂಗಳ ನೇಮಕಾತಿ ವಸ್ತುಸ್ಥಿತಿ ಮಾಹಿತಿಯಿಂದ ಇದು ತಿಳಿದುಬರುತ್ತದೆ.
ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕರ 150 ಹುದ್ದೆಗಳ ನೇಮಕಾತಿಗೆ 2016ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು.
ಸದ್ಯ ಈ ನೇಮಕಾತಿ ಸಂಬಂಧ ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣಗಳು ಬಾಕಿ ಇವೆ. ಅದೇ ರೀತಿ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ಬರುವ ಮೊರಾರ್ಜಿ ದೇಸಾಯಿ, ಕಿತ್ತೂರುರಾಣಿ ಚೆನ್ನಮ್ಮ ಮತ್ತಿತರ ವಸತಿ ಶಾಲೆಗಳಲ್ಲಿ 460 ಕಲಾ ಶಿಕ್ಷಕರ ಹುದ್ದೆಗಳಿಗೆ 2016ರಲ್ಲೇ ಅಧಿಸೂಚನೆ ಹೊರಡಿಸಲಾಗಿದ್ದರೂ 2021 ಅಕ್ಟೋಬರ್, ನವೆಂಬರ್ನಲ್ಲಿ ತಾತ್ಕಾಲಿಕ ಪಟ್ಟಿ ಪ್ರಕಟಿಸಲಾಗಿದೆ. ಹಿಂದುಳಿದ ವರ್ಗಗಳ ಇಲಾಖೆಯ 201 ನಿಲಯ ಮೇಲ್ವಿಚಾರಕರ ನೇಮ ಕಾತಿಗೂ 2017ರಿಂದ ಮುಕ್ತಿ ಸಿಕ್ಕಿಲ್ಲ.
ಕೊರೊನಾ ಕಾರಣ:
ಕೊರೊನಾ ಕಾರಣದಿಂದ 2020ರಲ್ಲಿ ಆರ್ಥಿಕ ಮಿತವ್ಯಯ ಘೋಷಿಸಿದ್ದರಿಂದ ನೇಮಕಾತಿ ಪ್ರಕ್ರಿಯೆಗಳನ್ನು ಸರಕಾರ ಸ್ಥಗಿತಗೊಳಿಸಿತ್ತು. ಇದ ರಿಂದ ಕೆಲವುಗಳಿಗೆ ವಿನಾಯಿತಿ ನೀಡಿದ ಬಳಿಕ ನೇಮಕಾತಿ ಪ್ರಕ್ರಿಯೆ ಪುನಃ ಆರಂಭಿಸಲಾಗಿದೆ. ಈ ಮಧ್ಯೆ ನ್ಯಾಯಾಲಯದ ಪ್ರಕರಣ ಗಳಿಂದಾಗಿಯೂ ವಿಳಂಬವಾಗಿದೆ. ದೊಡ್ಡ ಸಂಖ್ಯೆಯ ಹುದ್ದೆಗಳಿದ್ದಾಗ ಆಕ್ಷೇಪಣೆ ಹಾಗೂ ದಾಖಲೆಗಳು ಹೆಚ್ಚಾಗಿರುತ್ತವೆ. ಅವುಗಳ ಪರಿಶೀಲನೆಗೆ ಸಮಯ ಹಿಡಿಯುತ್ತದೆ ಎಂದು ಕೆಪಿಎಸ್ಸಿ ಸಮಜಾಯಿಷಿ ನೀಡುತ್ತಿದೆ.
ಹಲವು ವರ್ಷಗಳಿಂದ ಕೆಪಿಎಸ್ಸಿಯಿಂದ ಯಾವ ನೇಮ ಕಾತಿಯೂ ಕಾಲಮಿತಿಯೊಳಗೆ ಆಗುತ್ತಿಲ್ಲ. ಕೆಲವಕ್ಕೆ ಇರುವ ಕಾನೂನು ತೊಡಕುಗಳನ್ನೇ ಮುಂದಿಟ್ಟು ಎಲ್ಲ ನೇಮಕಾತಿ ಗಳನ್ನು ವಿಳಂಬ ಮಾಡಲಾಗುತ್ತಿದೆ. ಉದ್ಯೋಗಾ ಕಾಂಕ್ಷಿಗಳು ವಯೋಮಿತಿ ಮೀರುವ ಆತಂಕ ಎದುರಿಸುವಂತಾಗಿದೆ. ಸರ ಕಾರ ತತ್ಕ್ಷಣ ಗಮನಹರಿಸಬೇಕು .– ಎನ್. ಸಂತೋಷ್ ಕುಮಾರ್, ನೊಂದ ಅಭ್ಯರ್ಥಿ
-ರಫೀಕ್ ಅಹ್ಮದ್