ಕುಮಾರಸ್ವಾಮಿ ಹೇಳಿಕೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ: ಖರ್ಗೆ
Team Udayavani, May 18, 2019, 3:03 AM IST
ಕಲಬುರಗಿ: “ನಾನು ಮುಖ್ಯಮಂತ್ರಿ ಆಗಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಆಗಲಿ, ರಾಜ್ಯ ನಾಯಕರಾಗಲಿ ನನಗೆ ಹೇಳಿಲ್ಲ. ನಾನು ಎಂದೋ ಮುಖ್ಯಮಂತ್ರಿ ಆಗಬೇಕಿತ್ತು ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ’ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಕುಮಾರಸ್ವಾಮಿ ಯಾವುದೋ ಒಂದು ಸಂದರ್ಭದಲ್ಲಿ ನಾನು ಸಿಎಂ ಆಗಬೇಕಿತ್ತು ಎಂದು ಹೇಳಿದ್ದಾರೆ. ಅವರ ಹೇಳಿಕೆಗೆ ಪ್ರತಿಯೊಬ್ಬರೂ ಪ್ರತಿಕ್ರಿಯಿಸುವುದು ಸೂಕ್ತವಲ್ಲ. ಎಲ್ಲರೂ ಹೇಳಿಕೆ ಕೊಡುವುದರಿಂದ ಪಕ್ಷದಲ್ಲಿ ಒಡಕು, ವೈಮನಸ್ಸು ಉಂಟಾಗುತ್ತಿದೆ. ಹೈಕಮಾಂಡ್ ತೀರ್ಮಾನದಂತೆ ನಾವು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೇವೆ ಎಂದರು.
ಕೇಂದ್ರ ಸರ್ಕಾರ ರಚನೆ ಬಗ್ಗೆ ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಸಂಖ್ಯಾಬಲದ ಮೇಲೆ ಮುಂದಿನ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಫಲಿತಾಂಶದ ನಂತರವಷ್ಟೇ ಪ್ರಧಾನಿ ಅಭ್ಯರ್ಥಿ ಬಗ್ಗೆಯೂ ನಿರ್ಧಾರ ಮಾಡುತ್ತೇವೆ. ಸೋನಿಯಾ ಗಾಂಧಿ ಕಾಂಗ್ರೆಸ್ನೊಂದಿಗೆ ಗುರುತಿಸಿಕೊಂಡಿರುವ ಪಕ್ಷಗಳ ಮುಖಂಡರನ್ನು ಕರೆದು ಚರ್ಚೆ ಮಾಡುತ್ತಾರೆ. ನಮ್ಮ ಪಕ್ಷದವರೇ ಪ್ರಧಾನಿ ಆಗಬೇಕು ಎಂದಾದರೆ ಬೇರೆ ಪಕ್ಷಗಳ ನಿಲುವು ಹೇಗಿರುತ್ತದೋ ನೋಡಬೇಕು ಎಂದರು.