ಖಾಸಗೀಕರಣದತ್ತ ಲಲಿತ್ಮಹಲ್ ಹೋಟೆಲ್?; 14ರಂದು ನಡೆಯುವ ಸಂಪುಟ ಸಭೆಯಲ್ಲಿ ನಿರ್ಣಯ ಸಾಧ್ಯತೆ
ತಾಜ್ ಹೋಟೆಲ್ಸ್ ಗ್ರೂಪ್ಗೆ ಗುತ್ತಿಗೆ ನೀಡಲು ಚಿಂತನೆ ನಡೆಸಿದ ಪ್ರವಾಸೋದ್ಯಮ ಇಲಾಖೆ
Team Udayavani, Jun 13, 2022, 11:31 AM IST
ಮೈಸೂರು: ಶತಮಾನೋತ್ಸವ ಆಚರಣೆಯ ಹೊಸ್ತಿಲಲ್ಲಿರುವ ಮೈಸೂರಿನ 2ನೇ ಅತಿ ದೊಡ್ಡ ಅರಮನೆ ಎಂದೇ ಹೇಳಲಾಗುವ ಲಲಿತ್ ಮಹಲ್ ಪ್ಯಾಲೇಸ್ (ಹೋಟೆಲ್)ನ್ನು ಮತ್ತೆ ಖಾಸಗೀಕರಣಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಸಾಂಸ್ಕೃತಿಕ ನಗರಿ ಮೈಸೂರಿನ ಹೆಗ್ಗುರುತಾದ ಈ ಅರಮನೆ ರಾಜಾತಿಥ್ಯಕ್ಕೆ ಹೆಸರುವಾಸಿ. ಲಲಿತ್ ಮಹಲ್ ಹೋಟೆಲ್ ದೇಶ-ವಿದೇಶದ ಪ್ರವಾಸಿಗ ರಲ್ಲದೇ ರಾಜಕಾರಣಿಗಳು, ಸಿನಿಮಾ ಕಲಾವಿದರು ಸೇರಿ ರಾಜ್ಯದ ವಿವಿಧ ಭಾಗಗಳ ಗಣ್ಯರು ವಾಸ್ತವ್ಯಕ್ಕಾಗಿ ಇಲ್ಲಿಗೆ ಆಗಮಿಸುವುದು ವಾಡಿಕೆ. ಸದ್ಯಕ್ಕೆ ಅರಮನೆಯನ್ನು ಅರಣ್ಯ ವಸತಿ ಮತ್ತು ವಿಹಾರ ಧಾಮದಿಂದ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಾಗುತ್ತಿದೆ.
ಖಾಸಗೀಕರಣಕ್ಕೆ ಯತ್ನ: ಮೈಸೂರು ನಗರದ 53 ಎಕರೆ ಪ್ರದೇಶದಲ್ಲಿ 3 ಎಕರೆ ವಿಸ್ತೀರ್ಣದಲ್ಲಿ ಈ ಅರಮನೆಯನ್ನು ಅಂದಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ 1921ರಲ್ಲಿ ನಿರ್ಮಾಣ ಮಾಡಿ ದ್ದರು. ಸ್ವಾತಂತ್ರ್ಯ ನಂತರ ಸರ್ಕಾ ರದ ಅಧೀನಕ್ಕೆ ಒಳಪಟ್ಟಿದ್ದ ಈ ಅರ ಮನೆ 1974ರಲ್ಲಿ ಭಾರತ ಪ್ರವಾಸೋ ದ್ಯಮ ಅಭಿವೃದ್ಧಿ ಸಂಸ್ಥೆ ತನ್ನ ಸುಪರ್ದಿಗೆ ಪಡೆದುಕೊಂಡಿತ್ತು. ನಂತರದ ವರ್ಷಗಳಲ್ಲಿ ತಾಜ್ ಹೋಟೆಲ್ಸ್ ಗ್ರೂಪ್ಗೆ ಗುತ್ತಿಗೆ ನೀಡಿತ್ತು.
ಬಳಿಕ ತಾಜ್ ಹೋಟೆಲ್ಸ್ ಗ್ರೂಪ್ ಅರಮನೆಯನ್ನು ಪಾರಂಪರಿಕ ಹೋಟೆಲ್ ಆಗಿ ಮಾರ್ಪಾಡು ಮಾಡಿ 2018ರವರೆಗೆ ನಿರ್ವಹಣೆ ಮಾಡಿತ್ತು. ನಂತರ ಭಾರತ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆಯಿಂದ ರಾಜ್ಯ ಸರ್ಕಾರ ತನ್ನ ಸುಪರ್ದಿಗೆ ಪಡೆದುಕೊಂಡಿತ್ತು. 2018ರಿಂದ ಕರ್ನಾಟಕ ರಾಜ್ಯ ಅರಣ್ಯ ವಸತಿ ಮತ್ತು ವಿಹಾರ ಧಾಮ ಸಂಸ್ಥೆ ಈ ಅರಮನೆಯನ್ನು ನಿರ್ವಹಣೆ ಮಾಡುತ್ತಿದ್ದು, ಪ್ರತಿ ವರ್ಷ ಒಂದೂವರೆಯಿಂದ 2 ಕೊಟಿ ರೂ. ಆದಾಯ ಗಳಿಸುತ್ತಿದೆ.
ಹೀಗಿದ್ದರೂ ಪ್ರವಾಸೋದ್ಯಮ ಇಲಾಖೆ ನಿರ್ವಹಣೆ ನೆಪವೊಡ್ಡಿ ಪಾರಂಪರಿಕ ಹೋಟೆಲ್ (ಲಲಿತ್ ಮಹಲ್ ಪ್ಯಾಲೆಸ್)ನ್ನು ಖಾಸಗಿಕರಣ ಮಾಡಲು ಮುಂದಾಗಿದೆ. ಈಗಾಗಲೇ ಮುಖ್ಯ ಮಂತ್ರಿ ನೇತೃತ್ವದಲ್ಲಿ ಮೊದಲ ಸುತ್ತಿನ ಮಾತುಕತೆ ನಡೆದಿದ್ದು, ತಾಜ್ ಹೋಟೆಲ್ಸ್ ಗ್ರೂಪ್ಗೆ ಗುತ್ತಿಗೆ ನೀಡಲು ಚಿಂತನೆ ನಡೆದಿದೆ. ಈ ಬಗ್ಗೆ ಜೂ.14 ರಂದು (ಮಂಗಳವಾರ) ಮತ್ತೆ ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಲಲಿತ್ ಮಹಲ್ ಹೋಟೆಲ್ನ್ನು ತಾಜ್ ಹೋಟೆಲ್ಸ್ ಗ್ರೂಪ್ಗೆ ನೀಡುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ಮೂಲಗಳು ತಿಳಿಸಿವೆ.
ಖಾಸಗೀಕರಣಕ್ಕೆ ವಿರೋಧ: ನೂರು ವರ್ಷ ಪೂರೈಸಿರುವ ಈ ಅರಮನೆಯ ಶತಮಾನೋತ್ಸವ ಆಚರಣೆಯನ್ನು ಅಕ್ಟೋಬರ್ನಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಶತಮಾನೋತ್ಸವ ಆಚರಣೆಗೂ ಮುನ್ನವೇ ಸರ್ಕಾರ ಖಾಸಗೀಕರಣ ಮಾಡಲು ಮುಂದಾಗಿರುವುದಕ್ಕೆ ಮೈಸೂರಿ ಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಉದ್ಯೋಗಿಗಳಿಗೆ ಅಭದ್ರತೆ ಭೀತಿ: ಪ್ರಸ್ತುತ ಲಲಿತ್ಮಹಲ್ ಅರಮನೆಯಲ್ಲಿ 500ಕ್ಕೂ ಹೆಚ್ಚು ಮಂದಿ ವಿವಿಧ ಸ್ತರದಲ್ಲಿ ಕಾರ್ಯನಿರ್ವಹಿಸು ತ್ತಿದ್ದಾರೆ. ಒಂದು ವೇಳೆ ಈ ಹೋಟೆಲ್ಅನ್ನು ಖಾಸಗೀಕರಣಗೊಳಿಸಿದರೆ, ಅಲ್ಲಿರುವ ಸಿಬ್ಬಂದಿ ಯನ್ನು ಮುಂದುವರಿಸುವುದು ಅನುಮಾನ. ಜತೆಗೆ ಅರಮನೆ ಸುತ್ತಲಿರುವ 53 ಎಕರೆ ಪ್ರದೇಶವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವ ಅಪಾಯವೂ ಇದೆ ಎಂದು ಜನಪ್ರತಿನಿಧಿ ಯೊಬ್ಬರು ಉದಯವಾಣಿಗೆ ತಿಳಿಸಿದ್ದಾರೆ.
ಒಂದು ವೇಳೆ ಲಲಿತ್ ಮಹಲ್ ಪ್ಯಾಲೇಸ್ ತಾಜ್ ಹೋಟೆಲ್ಸ್ ಗ್ರೂಪ್ ತೆಕ್ಕೆಗೆ ಸಿಕ್ಕರೆ 7 ಸ್ಟಾರ್ ಹೋಟೆಲ್ ಆಗಿ ಮಾರ್ಪಡು ಮಾಡಿದರೆ ಜನ ಸಾಮಾನ್ಯರು ಲಲಿತ್ ಮಹಲ್ ನೋಡುವುದು ಕಷ್ಟ ಸಾಧ್ಯ. ಹಾಗಾಗಿ ಹೋಟೆಲನ್ನು ಅರಣ್ಯ ವಸತಿ ಮತ್ತು ವಿಹಾರ ಧಾಮ ಸಂಸ್ಥೆಯೇ ಮುಂದುವರಿಸಿಕೊಂಡು ಹೋಗುವುದೇ ಸೂಕ್ತ ಎಂದು ಕೈಗಾರಿಕೋದ್ಯಮಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲಲಿತ್ ಮಹಲ್ ವಿಶೇಷತೆ ಏನು?: ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ರಾಜ ಅತಿಥಿಗಳಿಗಾಗಿ ಆತಿಥ್ಯ ನೀಡಲು ಲಲಿತ್ ಮಹಲ್ ಅರಮನೆಯನ್ನು 1921ರಲ್ಲಿ 13 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದ್ದರು.
ಕಟ್ಟಡವು ಲಂಡನ್ನ ಸೇಂಟ್ ಪಾಲ್ಸ್ ಕ್ಯಾಥೆಡ್ರಲ್ ವಾಸ್ತುಶಿಲ್ಪದ ಮಾದರಿಯಲ್ಲಿ ನಿರ್ಮಾಣವಾಗಿದ್ದು, ಇದನ್ನು ಡಬ್ಲ್ಯೂಫ್ರಿಚ್ಲೆ ಎಂಬುವವರು ವಿನ್ಯಾಸಗೊಳಿಸಿದ್ದರು. ಹೊರ ಭಾಗದಿಂದ ನೋಡಲು ಬಿಳಿ ಬಣ್ಣದಿಂದ ವೈಭವೋಪೇತವಾಗಿ ಕಾಣುವ ಈ ಅರಮನೆ, ಒಳಾಂಗಣದಲ್ಲಿಯೂ ವೈಭವಯುತವಾಗಿದೆ. ಗೋಲಾಕಾರದ ಗುಮ್ಮಟಗಳು, ಪ್ರವೇಶ ಮಂಟಪಕ್ಕಿಂತ ಮೇಲಿರುವ ಕೇಂದ್ರ ಗುಮ್ಮಟ ಪ್ರಧಾನವಾಗಿದ್ದು, ಹಲವು ಚಿತ್ರಗಳ ಚಿತ್ರೀಕರಣ ಈ ಅರಮನೆಯಲ್ಲಿ ನಡೆದಿರುವುದು ವಿಶೇಷ.
ಅರಮನೆಯ ಪ್ರಮುಖ ಭಾಗದಲ್ಲಿ ವೈಸ್ರಾಯ್ ಸೂಟ್, ವೈಸರೀನ್ ಸೂಟ್, ಡ್ಯುಪ್ಲೆಕ್ಸ್ ಸೂಟ್, ಹೆರಿಟೇಜ್ ಸೂಟ್ ಮತ್ತು ಟಾರೆಟ್ ರೂಮ್ ಸೇರಿ 22 ಕೊಠಡಿಗಳಿದ್ದರೆ, ಅನೆಕ್ಸ್ನಲ್ಲಿ 32 ಸುಂದರ ಕೊಠಡಿಗಳಿವೆ.
-ಸತೀಶ್ ದೇಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ
ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು