ಸಚಿವ ಸ್ಥಾನಕ್ಕಿಂತ ಮೊದಲು ಸಂತ್ರಸ್ತರಿಗೆ ನೆರವಾಗಲಿ
Team Udayavani, Aug 2, 2021, 6:50 AM IST
ಹುಬ್ಬಳ್ಳಿ: ರಾಜ್ಯದಲ್ಲಿ ಪ್ರವಾಹವುಂಟಾಗಿ ಜನರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭ ಅವರಿಗೆ ಸ್ಪಂದಿಸುವ ಬದಲು ಬಿಜೆಪಿ ಶಾಸಕರು ತಮ್ಮ ಕ್ಷೇತ್ರ ಮರೆತು ಸಚಿವ ಸ್ಥಾನಕ್ಕಾಗಿ ಬೆಂಗಳೂರಿನಲ್ಲಿ ಕುಳಿತು ಕಚ್ಚಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹದ ಈ ತುರ್ತು ಸಂದರ್ಭ ಮುಖ್ಯಮಂತ್ರಿಯೊಬ್ಬರೇ ಎಲ್ಲವನ್ನು ನಿಭಾಯಿಸಲು ಸಾಧ್ಯವಿಲ್ಲ. ಸರಕಾರ ಆದಷ್ಟು ಜಾಗೃತಿ ವಹಿಸಬೇಕು. ಕೂಡಲೇ ಸಚಿವ ಸಂಪುಟ ರಚನೆ ಮಾಡಬೇಕು. ಇಲ್ಲವಾದರೆ ಎಲ್ಲ ಕೆಲಸಕ್ಕೆ ಸಮಸ್ಯೆಯಾಗುತ್ತದೆ. ಸಂಪುಟ ವಿಸ್ತರಣೆಯಾದರೆ ಭಿನ್ನಮತ ಹೆಚ್ಚಾಗುವ ಲಕ್ಷಣಗಳು ಕಾಣುತ್ತಿವೆ ಎಂದರು.
ಕೋವಿಡ್ ಮೊದಲ ಹಾಗೂ ಎರಡನೇ ಅಲೆ ನಿಯಂತ್ರಿಸುವಲ್ಲೂ ಬಿಜೆಪಿ ವಿಫಲವಾಗಿದೆ. ಬಿಜೆಪಿ ಎಂದರೆ ಎಲ್ಲೆಡೆ ವಿಫಲವಾದ ಪಕ್ಷವಾಗಿದೆ. ಇದೀಗ ಮೂರನೇ ಅಲೆ ಭೀತಿ ಆವರಿಸಿದೆ. ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದನ್ನು ನಿಯಂತ್ರಿಸಲು ಅಲ್ಲಿಂದ ಬರುವವರನ್ನು ರಾಜ್ಯದ ಗಡಿಯಲ್ಲಿ ಸೂಕ್ತ ತಪಾಸಣೆ ಮಾಡಿ, ಕೋವಿಡ್ ಪಾಸಿಟಿವ್ ಇಲ್ಲದವರಿಗೆ ಪ್ರವೇಶಕ್ಕೆ ಅವಕಾಶ ಮಾಡಬೇಕು. ಕೆಲವರು ತಪ್ಪಿಸಿಕೊಂಡು ರಾಜ್ಯಕ್ಕೆ ಬರುತ್ತಿದ್ದಾರೆ. ಆದ್ದರಿಂದ ಅಗತ್ಯ ಮುಂಜಾಗ್ರತ ಬಿಗಿ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ರಾಜ್ಯಕ್ಕೆ 3ನೇ ಅಲೆ ಬರಬಹುದು. ಮುಂಬರುವ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಗೊತ್ತಾದ ತತ್ಕ್ಷಣ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚಾಗುತ್ತಿದೆ ವಿನಃ ಯಾವುದೇ ರೀತಿ ಕಚ್ಚಾಟ ಇಲ್ಲ ಎಂದರು.