Karnataka ;ಮೂರು ಡಿಸಿಎಂ ಹುದ್ದೆಗೆ ಪಟ್ಟು ಬಿಡದ ಸಚಿವ ಸತೀಶ ಜಾರಕಿಹೊಳಿ
Team Udayavani, Jan 9, 2024, 10:23 PM IST
ಬೆಂಗಳೂರು: ರಾಜ್ಯದಲ್ಲಿ ಮೂರು ಉಪ ಮುಖ್ಯಮಂತ್ರಿಗಳ ಹುದ್ದೆ ಸೃಷ್ಟಿಸಬೇಕೆಂಬ ವಿಚಾರದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ಪಟ್ಟು ಸಡಿಲಿಸಿದಂತೆ ಕಾಣುತ್ತಿಲ್ಲ.
ದಿಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಈ ವಿಷಯದಲ್ಲಿ ಸಾಕಷ್ಟು ಒತ್ತಡ ಹೇರುತ್ತಿರುವ ಸಚಿವ ಜಾರಕಿಹೊಳಿ ಅವರು ಲೋಕಸಭಾ ಚುನಾವಣೆ ದೃಷ್ಟಿಯಿಂದ ಲಿಂಗಾಯತರು, ಪ.ಜಾತಿ ಹಾಗೂ ಪಂಗಡದವರಿಗೆ ಮೂರು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಬೇಕೆಂದು ಪ್ರತಿಪಾದಿಸುತ್ತ ಬಂದಿದ್ದಾರೆ. ಸೋಮವಾರ ರಾತ್ರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುಜೇìವಾಲ ಅವರನ್ನು ಭೇಟಿಯಾದ ಸಂದರ್ಭದಲ್ಲೂ ಡಿಸಿಎಂ ಹುದ್ದೆ ಸೃಷ್ಟಿಯ ಅನಿವಾರ್ಯತೆಯನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ.
ಈ ಸಂಬಂಧ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಸತೀಶ್ ಜಾರಕಿಹೊಳಿ, “ನಮ್ಮ ವಿಚಾರಗಳನ್ನು ಪ್ರಧಾನ ಕಾರ್ಯದರ್ಶಿಗಳಿಗೆ ಹೇಳಿದ್ದೇವೆ. ಜ. 10ಕ್ಕೆ (ಬುಧವಾರ) ಬೆಂಗಳೂರಿನಲ್ಲಿ ಸಭೆ ಇದೆ. ಮಾರನೇ ದಿನ ಅಂದರೆ ಗುರುವಾರ (ಜ. 11ಕ್ಕೆ) ದೆಹಲಿಯಲ್ಲಿ ಸಭೆ ನಡೆಯಲಿದೆ. ಸೋಮವಾರ ಸುಜೇìವಾಲ ಅವರ ಭೇಟಿ ವೇಳೆಯೂ ಡಿಸಿಎಂ ಹುದ್ದೆ ಬಗ್ಗೆ ಪ್ರಸ್ತಾಪಿಸಿದ್ದೇವೆ. ಸುಮಾರು ಪ್ರಬಲ ಜಾತಿಗಳು “ಕೈ’ ಜತೆ ಗುರುತಿಸಿಕೊಂಡಿವೆ. ಅವುಗಳಿಗೆ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಗಮನಕ್ಕೆ ತರುವಂತೆ ಮನವಿ ಮಾಡಿದ್ದೇವೆ’ ಎಂದು ಹೇಳಿದರು.
ನಮಗೆ ಅಧಿಕಾರ ಮುಖ್ಯವಲ್ಲ. ಸಂಘಟನೆ ಮುಖ್ಯ. ವೈಯಕ್ತಿಕವಾಗಿ ನಾನಂತೂ ಉಪಮುಖ್ಯಮಂತ್ರಿ ಹುದ್ದೆ ಕೇಳಿಲ್ಲ. ಜನಪರ ಆಡಳಿತ ಕೊಡುತ್ತಿದ್ದೇವೆ, ಅದರ ಆಧಾರದ ಮೇಲೆ ಲೋಕಸಭೆ ಚುನಾವಣೆ ಗೆಲ್ಲುತ್ತೇವೆ.
-ಈಶ್ವರ್ ಖಂಡ್ರೆ, ಅರಣ್ಯ ಸಚಿವ