ನಾಗಾಸಾಧು ಆಶೀರ್ವಾದ ಪಡೆದ ಶಾಸಕ ಜೆ.ಎನ್.ಗಣೇಶ ಕುಟುಂಬ
Team Udayavani, Apr 29, 2019, 3:02 AM IST
ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕು ಜೋಗ ಗ್ರಾಮ ಬಳಿಯಿರುವ ದೇವರಕೊಳ್ಳ ಗುಡ್ಡದ ಅನ್ನಪೂರ್ಣೇಶ್ವರಿ ಮಠದ ನಾಗಾಸಾಧು ದಿಗಂಬರ ರಾಜಭಾರತಿ ಸ್ವಾಮೀಜಿ ಅವರನ್ನು ಕಂಪ್ಲಿ ಶಾಸಕ ಜೆ.ಎನ್.ಗಣೇಶ ಹಾಗೂ ಮತ್ತವರ ಕುಟುಂಬ ಸದಸ್ಯರು ಭಾನುವಾರ ಭೇಟಿ ಮಾಡಿ, ಆಶೀರ್ವಾದ ಪಡೆದರು.
ಈ ಮೊದಲು ಸಂಸಾರಿಯಾಗಿ ಸನ್ಯಾಸಿಯಾದ ರಾಜಭಾರತಿ ಸ್ವಾಮೀಜಿ ಹೊಸಪೇಟೆ, ಸಂಡೂರು ತಾಲೂಕಿನಲ್ಲಿ ಅನ್ನಪೂರ್ಣೇಶ್ವರಿ ಮಠ ಹೊಂದಿದ್ದಾರೆ. ನಾಗಾಸಾಧುಗಳಾದ ಇವರನ್ನು ಈಗಾಗಲೇ ಚುನಾವಣಾ ಪೂರ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ, ಹಾಲಿ ಸಂಸದ ವಿ.ಎಸ್.ಉಗ್ರಪ್ಪ, ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಸೇರಿ ಅನೇಕ ರಾಜಕಾರಣಿಗಳು, ಗಣ್ಯರು ಭೇಟಿ ಮಾಡಿ ದರ್ಶನ ಪಡೆದಿದ್ದಾರೆ.
ವರ್ಷದ ಆರು ತಿಂಗಳ ಕಾಲ ಮೌನ ವ್ರತಾಚರಣೆ ಕೈಗೊಳ್ಳುವ ಇವರು, ಮುಂದಿನ ಆರು ತಿಂಗಳ ಕಾಲ ಮಾತನಾಡುವರು. ಮೌನ ವ್ರತಾಚರಣೆಯಲ್ಲಿ ಇರುವಾಗ ಸ್ಲೇಟ್ನಲ್ಲಿ ಬರೆದು ಉತ್ತರಿಸುತ್ತಾರೆ. ಈಗ ಮೌನ ವ್ರತಾಚರಣೆಯಲ್ಲಿರುವುದರಿಂದ ಅವರ ಎದುರು ಶಾಸಕ ಗಣೇಶ ತಮಗೆ ಎದುರಾದ ಸಂಕಷ್ಟ ಹೇಳಿಕೊಂಡರು.
“ಎಲ್ಲವೂ ಒಳ್ಳೆಯದಾಗುತ್ತದೆ’ ಎಂದು ಅವರು ಆಶೀರ್ವದಿಸಿದ್ದಾರೆ. ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಶಾಸಕರು, “ಇಲ್ಲಿಗೆ ಭೇಟಿ ನೀಡಿದ ಬಳಿಕ ನನ್ನ ಮನಸ್ಸಿಗೆ ಅಲ್ಪಮಟ್ಟಿಗೆ ಸಮಾಧಾನ ಉಂಟಾಗಿದೆ. ಎಲ್ಲ ಸಂಕಷ್ಟದಿಂದ ಹೊರ ಬರುವ ಆಶಯವಿದೆ’ ಎಂದರು.