ಪೇಜಾವರ ಶ್ರೀ ವಿರುದ್ಧ ಮುತಾಲಿಕ್ ಕಿಡಿ; ಜುಲೈ 2 ರಂದು ಪ್ರತಿಭಟನೆ
Team Udayavani, Jun 29, 2017, 12:33 PM IST
ಹುಬ್ಬಳ್ಳಿ : ಪೇಜಾವರ ಮಠಾಧೀಶರಾದ ವಿಶ್ವೇಶ ತೀರ್ಥ ಶ್ರೀಗಳು ಹಿಂದೂ ಸಮಾಜವನ್ನು ಅವಮಾನಿಸಿದ್ದಾರೆ. ಅವರ ಧೋರಣೆ ಖಂಡಿಸಿ ಜುಲೈ 2 ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುತಾಲಿಕ್ ಶ್ರೀ ಕೃಷ್ಣ ಮಠ ಹಿಂದೂಗಳ ಪವಿತ್ರ ಕ್ಷೇತ್ರವಾಗಿದ್ದು ಅದರ ಪಾವಿತ್ರ್ಯತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪೇಜಾವರ ಶ್ರೀಗಳು ಮಠದಲ್ಲಿ ನಮಾಜ್ ಮಾಡಲು ಅವಕಾಶ ನೀಡಿ ಹಿಂದೂ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಇಫ್ತಾರ್ಕೂಟದ ಕುರಿತು ಸಮರ್ಥನೆ ವೇಳೆ ಹಿಂದೂಗಳೂ ಗೋಮಾಂಸ ಸೇವಿಸುತ್ತಾರೆ ಎಂದು ಶ್ರೀಗಳು ಹೇಳಿಕೆ ನೀಡಿದ್ದು ಆ ಹೇಳಿಕೆ ಹಿಂಪಡೆಯಬೇಕು ಎಂದು ಮುತಾಲಿಕ್ ಆಗ್ರಹಿಸಿದರು.
ಸ್ವಾಮೀಜಿ ಅಂದು ನೀವು ಅಯೋಧ್ಯೆಯಲ್ಲಿ ಕೇವಲ ರಾಮ ಮಂದಿರ ಮಾತ್ರ ನಿರ್ಮಾಣ ಮಾಡಲು ಬಿಡುತ್ತೇವೆ. ಬಾಬ್ರಿ ಮಸೀದಿ ಮರು ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದಿರಿ. ಅಂದು ಇಲ್ಲದ ಸಾಮರಸ್ಯ ,ಸೌಹಾರ್ದತೆ ಈಗ್ಯಾಕೆ ನಿಮಗೆ ನೆನಪಾಯಿತು ಎಂದು ಮುತಾಲಿಕ್ ಕಿಡಿ ಕಾರಿದರು.
ಶ್ರೀಗಳು ರಾಜಕೀಯ ಮಾಡುವುದನ್ನು ನಿಲ್ಲಿಸಲಿ
ಮಂಗಳೂರು : ನಗರದಲ್ಲಿ ಶ್ರೀರಾಮಸೇನೆ ಮತ್ತು ಹಿಂದೂಮಹಾಸಭಾ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ ಪೇಜಾವರ ಶ್ರೀಗಳ ನಡೆಯನ್ನು ತೀವ್ರವಾಗಿ ಖಂಡಿಸಿ ಶ್ರೀಗಳು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ಬಿಡಬೇಕು ಎಂದು ಆಗ್ರಹಿಸಿವೆ.
ಸ್ವಾಮೀಜಿ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಹೋರಾಟ ಮಾಡಿದವರು . ರಾಮ ಮಂದಿರದ ವಿಷಯದಲ್ಲಿ ಅನೇಕ ಗಲಭೆಗಳು ನಡೆದಿವೆ. ಕೆಲ ನಾಯಕರು ಯುವ ಜನರ ಮನಸಿನಲ್ಲಿ ವಿಷ ಬೀಜ ಬಿತ್ತಿ ಅವರ ಬದುಕನ್ನು ಕಸಿದುಕೊಂಡಿದ್ದಾರೆ. ಇದು ನಿಲ್ಲ ಬೇಕು ಎಂದು ಆಗ್ರಹಿಸಿದರು.
ಜುಲೈ 2 ರಂದು ಲಾಲ್ ಬಾಗ್ ಸರ್ಕಲ್ನಲ್ಲಿ ಶ್ರೀಗಳ ಧೋರಣೆ ಖಂಡಿಸಿ ಬೆಳಗ್ಗೆ 11 ಗಂಟೆಗೆ ಜಂಟಿಯಾಗಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.