ಹೊಸ ವರ್ಷಾಚರಣೆ: ಪ್ರವೇಶ ನಿಷೇಧ
Team Udayavani, Dec 31, 2019, 3:00 AM IST
ಮಂಡ್ಯ/ಮೈಸೂರು/ಚಿಕ್ಕಬಳ್ಳಾಪುರ: ಹೊಸ ವರ್ಷದ ಹಿನ್ನೆಲೆಯಲ್ಲಿ ಪ್ರಸಿದ್ಧ ಪ್ರವಾಸಿ ತಾಣಗಳಾದ ಮೈಸೂರಿನ ಚಾಮುಂಡಿಬೆಟ್ಟ, ಚಿಕ್ಕಬಳ್ಳಾಪುರದ ನಂದಿ ಬೆಟ್ಟ ಹಾಗೂ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮುತ್ತತ್ತಿಗೆ ಎರಡು ದಿನಗಳ ಕಾಲ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.
ಮುತ್ತತ್ತಿಯ ನಿಸರ್ಗದ ಮಡಿಲಲ್ಲಿ ಮೋಜು ಮಸ್ತಿ ನಡೆಸುತ್ತಾ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಸಾಕಷ್ಟು ನಿದರ್ಶನಗಳಿವೆ. ಅಲ್ಲದೆ ಹೊಸ ವರ್ಷಾಚರಣೆ ಹೆಸರಿನಲ್ಲಿ ಬರುವ ಪುಂಡರಿಗೆ ಕಡಿವಾಣ ಹಾಕಬೇಕೆಂಬ ಉದ್ದೇಶದಿಂದ ನಿಷೇಧಾಜ್ಞೆ ಜಾರಿಗೊಳಿಸಿದೆ. ಡಿ.31ರ ಬೆಳಗ್ಗೆ 6 ಗಂಟೆಯಿಂದ 2020 ಜ.2ರ ಮುಂಜಾನೆ 6 ಗಂಟೆವರೆಗೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ.
ಡಿ.31ರ ರಾತ್ರಿ 7ರಿಂದ ಜ.1ರ ಬೆಳಗ್ಗೆ 6ಗಂಟೆವರೆಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಿ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅಧಿಸೂಚನೆ ಹೊರಡಿಸಿದ್ದಾರೆ. ಇನ್ನು, ಡಿ.31ರ ಸಂಜೆಯಿಂದ ಜನವರಿ 1ರ ಬೆಳಗ್ಗೆ 8 ಗಂಟೆವರೆಗೂ ನಂದಿಗಿರಿಧಾಮ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ.