ಮೇ 26ರಿಂದ ರಾಜ್ಯದ 50 ದೇವಸ್ಥಾನಗಳಲ್ಲಿ ಆನ್ ಲೈನ್ ಪೂಜೆಗೆ ಅವಕಾಶ
Team Udayavani, May 21, 2020, 3:45 PM IST
ಬೆಂಗಳೂರು: ಕೋವಿಡ್-19 ಲಾಕ್ ಡೌನ್ ಕಾರಣದಿಂದ ರಾಜ್ಯದ ದೇವಾಲಯಗಳಲ್ಲಿ ಧಾರ್ಮಿಕ ಚಟುವಟಿಕೆಗಳು ಸ್ಥಗಿತವಾಗಿದೆ. ಲಾಕ್ ಡೌನ್ ಕಾರಣದಿಂದ ಭಕ್ತರು ದೇವಾಲಯಗಳಲ್ಲಿ ಪೂಜೆ, ಸೇವಾಗಳಲ್ಲಿ ಭಾಗವಹಿಸಲು ಅವಕಾಶ ಸಿಕಿರಲಿಲ್ಲ. ಆದರೆ ಲಾಕ್ ಡೌನ್ ನಾಲ್ಕನೇ ಹಂತದಲ್ಲಿರುವ ಈ ಸಮಯದಲ್ಲಿ ಕೆಲವು ದೇವಸ್ಥಾನಗಳಲ್ಲಿ ಆನ್ ಲೈನ್ ಪೂಜೆ ನೀಡಲು ಭಕ್ತರಿಗೆ ಅವಕಾಶ ನೀಡಲು ಸರಕಾರ ಚಿಂತನೆ ನಡೆಸಿದೆ.
ಈ ಕುರಿತು ಮಾಹಿತಿ ನೀಡಿದ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ದೇವಾಲಯಗಳಲ್ಲಿ ಆನ್ ಲೈನ್ ಪೂಜೆಗೆ ಅವಕಾಶ ನೀಡಲು ನಿರ್ಧಾರಿಸಲಾಗಿದೆ. ಮೇ 26ರಿಂದ ಅವಕಾಶ ನೀಡಲಾಗುವುದು ಎಂದರು.
ರಾಜ್ಯದ ಪ್ರಮುಖ ದೇವಸ್ಥಾನಗಳಾದ ಕುಕ್ಕೆ ಸುಬ್ರಹ್ಮಣ್ಯ, ಚಾಮುಂಡೇಶ್ವರಿ, ಕಟೀಲು ದುರ್ಗಾಪರಮೇಶ್ವರಿ, ಬನಶಂಕರಿ ಸೇರಿದಂತೆ 50 ದೇವಾಲಯಗಳಲ್ಲಿ ಅವಕಾಶ ನೀಡಲಾಗುವುದು ಎಂದರು.
ಭಕ್ತರು ಆನ್ ಲೈನ್ ಮೂಲಕ ಹಣ ಪಾವತಿಸಿ ತಮ್ಮ ಹೆಸರಿನಲ್ಲಿ 20 ಸೇವೆ ಪೂಜೆ ಮಾಡಿಸಬಹುದು. ಈ ಕುರಿತು ಸರಕಾರ ಮುಂದಿನ ದಿನಗಳಲ್ಲಿ ಆದೇಶ ಹೊರಡಿಸುವ ನಿರೀಕ್ಷೆ ಇದೆ.