ಮೇಲ್ಮನೆ ಪ್ರತಿಪಕ್ಷ ನಾಯಕ ಸ್ಥಾನದ ಆಕಾಂಕ್ಷಿಯಲ್ಲ: ಸಲೀಂ ಅಹ್ಮದ್
Team Udayavani, Dec 20, 2021, 10:30 PM IST
ಬೆಂಗಳೂರು: ವಿಧಾನಪರಿಷತ್ಗೆ ಅಯ್ಕೆಯಾಗಿರುವುದಕ್ಕೆ ನನಗೆ ಸಂತೋಷವಿದ್ದು, ಬೇರೆ ಯಾವುದೇ ಆಕಾಂಕ್ಷೆ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಪರಿಷತ್ ವಿರೋಧ ಪಕ್ಷದ ನಾಯಕತ್ವ ಸ್ಥಾನದ ಆಕಾಕ್ಷಿಯೇ ಎಂಬ ಪ್ರಶ್ನೆಗೆ ಉತ್ತರಿಸಿ, “ನಾನು ಈಗಾಗಲೇ ಕೆಪಿಸಿಸಿ ಕಾರ್ಯಾಧ್ಯಕ್ಷನಾಗಿದ್ದು, ನಾನು ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ಇದರಲ್ಲಿ ನನಗೆ ಸಂತೋಷವಿದ್ದು, ಬೇರೆ ಯಾವುದೇ ಆಕಾಂಕ್ಷೆ ಇಲ್ಲ’ ಎಂದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ನನ್ನನ್ನು ಅತಿ ಹೆಚ್ಚಿನ ಮತಗಳಿಂದ ಗೆಲ್ಲಿಸಿದ ಚುನಾಯಿತ ಪ್ರತಿನಿಧಿಗಳು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ. ಈ ಗೆಲುವು ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಗೆಲುವು, ಪಕ್ಷದ ಕಾರ್ಯಕರ್ತರ ಗೆಲವು, ಇದು ಬಿಜೆಪಿ ವೈಫಲ್ಯ, ಭ್ರಷ್ಟ ಸರ್ಕಾರದ ವಿರುದ್ಧ ಜನರ ಆಕ್ರೋಶದ ಗೆಲುವು. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಗೆಲುವಾಗಿದೆ. ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸೇರಿದಂತೆ ಎಲ್ಲ ಹಿರಿಯ ಮುಖಂಡರ ಆಶೀರ್ವಾದದಿಂದ ಈ ಗೆಲವು ಸಾಧಿಸಲಾಗಿದೆ.
ಇದನ್ನೂ ಓದಿ:ನಾನು ಅಶ್ಲೀಲ ಚಿತ್ರ ನಿರ್ಮಾಣ ಮಾಡಿಲ್ಲ: ರಾಜ್ ಕುಂದ್ರಾ
ಕಾಂಗ್ರೆಸ್ ಬಿಟ್ಟು ಹೋದವರು ಪಕ್ಷಕ್ಕೆ ಮರಳಲು ಮುಂದಾಗಿರುವವರ ಸಂಖ್ಯೆ ನಿಮ್ಮ ಊಹೆಗೂ ಮೀರಿದೆ. ಪಕ್ಷದ ಸಿದ್ಧಾಂತ, ನಾಯಕತ್ವವನ್ನು ಒಪ್ಪಿ, ಯಾವುದೇ ಷರತ್ತು ಇಲ್ಲದೆ ಪಕ್ಷ ಸೇರಲು ಬಯಸುವವರು ಅಧ್ಯಕ್ಷರಾದ ಡಿ.ಕೆ. ಶಿವಕುರ್ಮಾ ಅವರಿಗೆ ಮನವಿ ನೀಡಬೇಕು. ಅದನ್ನು ಹೀರಿಯ ನಾಯಕರಾದ ಅಲ್ಲಂ ವಿರಭದ್ರಪ್ಪ ಅವರ ನೇತೃತ್ವದ ಸಮಿತಿಗೆ ಕಳುಹಿಸಲಾಗುತ್ತದೆ. ಆ ಸಮಿತಿ ಪರಿಶೀಲನೆ ನಡೆಸಿ ನಂತರ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಲಬೇಕೇ ಎಂಬುದರ ಬಗ್ಗೆ ತಾರ್ಮಾನ ಕೈಗೊಳ್ಳಲಿದೆ. ಪಕ್ಷ ಸಂಘಟನೆಗೆ ಅಡ್ಡಿಯಾಗುವವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ’ ಎಂದರು.