ರಾಮನಗರದಲ್ಲಿ ರಾಮಮಂದಿರ ನಿರ್ಮಾಣಕ್ಕೆ ತಯಾರಿ
19 ಎಕರೆಗೆ ನೀಲನಕ್ಷೆ, ಸದ್ಯಕ್ಕೆ 50 ಕೋಟಿ ಮಾರ್ಚ್ನಲ್ಲಿ ಶಂಕುಸ್ಥಾಪನೆ ಮೋದಿ, ಆದಿತ್ಯನಾಥ್ಗೆ ಆಹ್ವಾನ
Team Udayavani, Feb 23, 2023, 6:20 AM IST
ಬೆಂಗಳೂರು: ರಾಜ್ಯ ಸರಕಾರ ಬಜೆಟ್ನಲ್ಲಿ ಘೋಷಿಸಿರುವ ರಾಮನಗರದ ರಾಮದೇವರ ಬೆಟ್ಟದಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣಕ್ಕೆ ಸಮಗ್ರ ಯೋಜನ ವರದಿ ಸಿದ್ಧವಾಗುತ್ತಿದೆ.
ಅಯೋಧ್ಯೆಯ ಮಾದರಿಯಲ್ಲೇ 19 ಎಕರೆ ಪ್ರದೇಶದಲ್ಲಿ ರಾಮಮಂದಿರ ನಿರ್ಮಾಣಕ್ಕೆ ನೀಲನಕ್ಷೆ ರೂಪಿಸಲಾಗಿದ್ದು ಮೊದಲ ಹಂತದಲ್ಲಿ 50 ಕೋಟಿ ರೂ. ವೆಚ್ಚ ಮಾಡಲು ತೀರ್ಮಾನಿಸಲಾಗಿದೆ.
ರಾಮದೇವರ ಬೆಟ್ಟ ವ್ಯಾಪ್ತಿಯಲ್ಲಿ 19 ಎಕರೆ ಪ್ರದೇಶದಲ್ಲಿ ನಿರ್ಮಾಣ ಕಾಮಗಾರಿಗೆ ಅವಕಾಶವಿದ್ದು ಅದರಂತೆ ಎಸ್ತೆಟಿಕ್ ಆರ್ಕಿಟೆಕ್ಸ್ನ ಖ್ಯಾತ ವಾಸ್ತುಶಿಲ್ಪಿ ಯಶಸ್ವಿನಿ ಶರ್ಮಾ ನೇತೃತ್ವದ ತಂಡ ರಾಮಮಂದಿರದ ವಿನ್ಯಾಸ ಸಿದ್ಧಪಡಿಸುತ್ತಿದೆ. ರಾಮಮಂದಿರ ನಿರ್ಮಾಣಕ್ಕೆ 50 ಕೋಟಿ ರೂ. ಅನುದಾನ ಸಂಬಂಧ ಹಣಕಾಸು ಇಲಾಖೆಗೆ ಪ್ರಸ್ತಾವನೆಯೂ ಸಿದ್ಧಗೊಂಡಿದ್ದು, ಮುಖ್ಯಮಂತ್ರಿಯವರ ಅನುಮತಿಯಷ್ಟೇ ಬಾಕಿಯಿದೆ ಎಂದು ಮೂಲಗಳು ತಿಳಿಸಿವೆ.
ಮೂರು ಸುತ್ತಿನ ಸಭೆ
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಿದಂತೆ ತೀವ್ರಗತಿಯಲ್ಲಿ ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ| ಸಿ.ಎನ್.ಅಶ್ವತ್ಥನಾರಾಯಣ ಈ ಸಂಬಂಧ ಅಧಿಕಾರಿಗಳೊಂದಿಗೆ ಮೂರು ಸುತ್ತಿನ ಸಭೆ ನಡೆಸಿದ್ದಾರೆ. ರಾಮಮಂದಿರ ನಿರ್ಮಾಣಕ್ಕೆ ಸಾರ್ವಜನಿಕರಿಂದಲೂ ದೇಣಿಗೆ ಅಥವಾ ಅಗತ್ಯ ಸಾಮಗ್ರಿ ಸಂಗ್ರಹದ ಬಗ್ಗೆಯೂ ಚರ್ಚೆ ನಡೆದಿದೆ.
ರಾಮದೇವರ ಬೆಟ್ಟದಲ್ಲಿ ಪ್ರಕೃತಿಗೆ ಧಕ್ಕೆಯಾಗದಂತೆ ಮಂದಿರದ ವಿನ್ಯಾಸ ಮಾಡಲಾಗುತ್ತಿದೆ. ಇತಿಹಾಸ ತಜ್ಞರು, ದೇಗುಲ ವಾಸ್ತುಶಿಲ್ಪಿ ಪರಿಣಿತರು, ಪರಿಸರ ಮತ್ತು ವನ್ಯಜೀವಿ ತಜ್ಞರು ಸಹ ವಿನ್ಯಾಸದ ತಂಡದಲ್ಲಿದ್ದಾರೆ. ಸಚಿವ ಅಶ್ವತ್ಥನಾರಾಯಣ ಅವರು ನಮ್ಮ ತಂಡದೊಂದಿಗೆ ನಾಲ್ಕೈದು ಸಭೆ ನಡೆಸಿದ್ದಾರೆ ಎಂದು ಯಶಸ್ವಿನಿ ಶರ್ಮಾ ಹೇಳುತ್ತಾರೆ.
ಬೃಹತ್ ಹಿಂದೂ ಸಮಾವೇಶ?
ಹಳೇ ಮೈಸೂರು ಭಾಗದಲ್ಲಿ ಹಿಂದುತ್ವ ಪ್ರತಿಪಾದಿಸಿ ಮತಬ್ಯಾಂಕ್ ಸೃಷ್ಟಿಗೆ ರಾಮಮಂದಿರ ಘೋಷಣೆ ಅನುಕೂಲವಾಗಲಿದೆ ಎಂಬ ಹಿನ್ನೆಲೆಯಲ್ಲಿ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ಪ್ರಕಟಕ್ಕೆ ಮುನ್ನ ಮಾರ್ಚ್ ಎರಡನೇ ಅಥವಾ ಮೂರನೇ ವಾರದಲ್ಲಿ ರಾಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವ ಬಗ್ಗೆಯೂ ಚರ್ಚೆ ನಡೆದಿದೆ. ರಾಮಮಂದಿರ ನಿರ್ಮಾಣದ ಶಂಕುಸ್ಥಾಪನೆಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಥವಾ ಪ್ರಧಾನಿ ನರೇಂದ್ರ ಮೋದಿ ಕರೆಸುವ ಬಗ್ಗೆಯೂ ಚಿಂತನೆಯಿದ್ದು, ಅದೇ ಸಂದರ್ಭದಲ್ಲಿ ಬೃಹತ್ ಹಿಂದೂ ಸಮಾವೇಶಕ್ಕೂ ಯೋಜನೆ ರೂಪಿಸಲಾಗಿದೆ ಎಂದು ತಿಳಿದು ಬಂದಿದೆ.
ರಾಮಮಂದಿರ ನಿರ್ಮಾಣಕ್ಕೆ ವಿರೋಧಿಸುವವರಿಗೆ ತಿರುಗೇಟು ನೀಡಲು ರಾಮದೇವರ ಬೆಟ್ಟದಲ್ಲಿ ಸುಗ್ರೀವ ಪಟ್ಟಾಭಿರಾಮನ ವಿಗ್ರಹ ಸ್ಥಾಪಿಸಿದ್ದು, ನಾಡಪ್ರಭು ಕೆಂಪೇಗೌಡರು ಮಂಟಪ ನಿರ್ಮಿಸಿದ್ದು ಸೇರಿದಂತೆ ಅಲ್ಲಿನ ಸ್ಥಳಪುರಾಣ ಹಾಗೂ ಐತಿಹಾಸಿಕ ಸಂಗತಿಗಳನ್ನೂ ಕಲೆ ಹಾಕಲಾಗುತ್ತಿದ್ದು, ಪುರಾತತ್ವ ಇಲಾಖೆಯಲ್ಲಿ ದಾಖಲಾಗಿರುವ 18 ನೇ ಶತಮಾನದ ಶಿಲಾಶಾಸನದ ಮಾಹಿತಿ ಸಹ ಸಂಗ್ರಹಿಸಲಾಗಿದೆ ಎಂದು ಹೇಳಲಾಗಿದೆ.
ಪ್ರವಾಸಿ ಸರ್ಕಿಟ್
ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣದ ಬಳಿ ಪ್ರವಾಸಿ ಸರ್ಕಿಟ್ಗೂ ಯೋಜನೆ ರೂಪಿಸಲಾಗಿದೆ. ಕನಕಪುರ-ರಾಮನಗರ-ಚನ್ನಪಟ್ಟಣ- ಮಾಗಡಿ-ದೇವನಹಳ್ಳಿ-ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಪ್ರವಾಸಿ ಸರ್ಕಿಟ್ ಬರಲಿದೆ. ರಾಮದೇವರ ಬೆಟ್ಟದ ರಾಮಮಂದಿರದಿಂದ ಸಾವನದುರ್ಗದ ಲಕ್ಷ್ಮಿ ನರಸಿಂಹ ದೇವಾಲಯ, ಮಾಗಡಿಯಲ್ಲಿ ಕೆಂಪೇಗೌಡರ ಜನ್ಮಸ್ಥಳ, ಕೆಂಪೇಗೌಡರ ಪ್ರತಿಮೆ, ನಂದಿ ಬೆಟ್ಟ ಪ್ರವಾಸಿ ಸರ್ಕಿಟ್ಗೆ ಸೇರ್ಪಡೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಗುಲದ ಜತೆ ರಾಮಪಥ ಮ್ಯೂಸಿಯಂ
ಈಗಿನ ಪ್ರಕಾರ ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ್ದ ಮಂಟಪ ಸಹಿತ ಈಗಿರುವ ದೇವಾಲಯ ಪುನಶ್ಚೇತನದೊಂದಿಗೆ ಭವ್ಯ ರಾಮಮಂದಿರ ನಿರ್ಮಾಣ ಮಾಡುವುದು. ಇದರ ಜತೆಗೆ ಶ್ರೀರಾಮ ದ್ವಾರಾ, ರಾಮಮಂದಿರ ಪೆವಿಲಿಯನ್, ಅಶೋಕವನ, ಶ್ರೀರಾಮ ಪಥ ಮ್ಯೂಸಿಯಂ, ಜಟಾಯು ಗ್ಯಾಲರಿ ನಿರ್ಮಾಣ ಯೋಜನೆಯಲ್ಲಿ ಸೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ