ರಾಷ್ಟ್ರಪತಿ ಚುನಾವಣೆಗೆ ಸಿದ್ಧತೆ
Team Udayavani, Jul 16, 2017, 4:00 AM IST
ಬೆಂಗಳೂರು: ಸೋಮವಾರ (ಜುಲೈ 17) ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಮತದಾನ ನಡೆಸಲು ರಾಜ್ಯದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಧಾನಸೌಧದ ಮೊದಲನೇ ಮಹಡಿಯ ಕೊಠಡಿ ಸಂಖ್ಯೆ 106 ರಲ್ಲಿ ಮತದಾನ ನಡೆಯಲಿದ್ದು, ಮತದಾನಕ್ಕೆ ಎರಡು ಕಡೆ ಪ್ರತ್ಯೇಕ ಸ್ಥಳ ನಿಗದಿ ಮಾಡಲಾಗಿದೆ. ಸಹಾಯಕ ಚುನಾವಣಾಧಿಕಾರಿಯಾಗಿರುವ ವಿಧಾನಸಭಾ ಕಾರ್ಯದರ್ಶಿ ಎಸ್. ಮೂರ್ತಿ ಕೇಂದ್ರ ಚುನಾವಣಾ ಆಯೋಗದ ಜಂಟಿ ಕಾರ್ಯದರ್ಶಿ ಅರುಣ್ ಸಿಂಘಾಲ್ ಜತೆಗೂಡಿ ಶನಿವಾರ ಸಿದ್ಧತೆಗಳನ್ನು ಪರಿಶೀಲಿಸಿದರು. ನಂತರ ಸುದ್ದಿಗಾರರ ಜತೆ
ಮಾತನಾಡಿದ ಮೂರ್ತಿ, ಈಗಾಗಲೇ 224 ಶಾಸಕರಿಗೂ ಪ್ರತ್ಯೇಕವಾಗಿ ಪತ್ರ ಬರೆದು ಮತದಾನ ಮಾಡುವಂತೆ ಮನವಿ ಮಾಡಲಾಗಿದೆ. ಅಲ್ಲದೇ ಮೂರು ಪಕ್ಷಗಳ ಮುಖ್ಯ ಸಚೇತಕರಿಗೂ ಪತ್ರ ಬರೆದು ಶಾಸಕರು ಮತದಾನದಲ್ಲಿ
ಪಾಲ್ಗೊಳ್ಳುವಂತೆ ಮಾಡಲು ಕೋರಲಾಗಿದೆ. ಸಂಸದರ ಪೈಕಿ ಚಿಕ್ಕೋಡಿ ಕ್ಷೇತ್ರದ ಪ್ರಕಾಶ್ ಹುಕ್ಕೇರಿ ಮಾತ್ರ ಬೆಂಗಳೂರಿನಲ್ಲಿ ಮತ ಹಾಕಲು ಅನುಮತಿ ಪಡೆದುಕೊಂಡಿದ್ದಾರೆ ಎಂದು ಹೇಳಿದರು. ಕೇಂದ್ರ ಚುನಾವಣಾ ಆಯೋಗ
ಮತ ಪೆಟ್ಟಿಗೆಗಳನ್ನು ಕಳುಹಿಸಿ ಕೊಟ್ಟಿದ್ದು ವೀಕ್ಷಕರಾಗಿ ಚುನಾವಣಾ ಆಯೋಗದ ಜಂಟಿ ಕಾರ್ಯದರ್ಶಿ ಅರುಣ್ ಸಿಂಘಾಲ್ ಅವರನ್ನು ನೇಮಿಸಿದೆ. ಅವರ ಮೇಲುಸ್ತುವಾರಿಯಲ್ಲಿ ಚುನಾವಣೆ ನಡೆಯಲಿದೆ. ಮತದಾನ ನಡೆಯುವ
ಕೊಠಡಿ ಮುಂಭಾಗ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಪತ್ರಕರ್ತರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.