ನಾಳೆ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ
Team Udayavani, Jun 24, 2022, 9:00 PM IST
ಬೆಂಗಳೂರು: “ನಮ್ಮ ಮೆಟ್ರೋ’ ನೇರಳೆ ಮಾರ್ಗದಲ್ಲಿ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ಶನಿವಾರ (ಜೂನ್ 25) ವಾಣಿಜ್ಯ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಅಂದು ಒಂದೂವರೆ ಗಂಟೆ ಮುಂಚಿತವಾಗಿ ಅಂದರೆ ರಾತ್ರಿ 9.30ರಿಂದ ಎಂ.ಜಿ. ರಸ್ತೆಯಿಂದ ಬೈಯಪ್ಪನಹಳ್ಳಿ ನಡುವೆ ಮೆಟ್ರೋ ಸೇವೆ ಸ್ಥಗಿತಗೊಳ್ಳಲಿದ್ದು, ಉಳಿದಂತೆ ಎಂ.ಜಿ. ರಸ್ತೆಯಿಂದ ಕೆಂಗೇರಿ ಮತ್ತು ನಾಗಸಂದ್ರದಿಂದ ರಾಷ್ಟ್ರೀಯ ರೇಷ್ಮೆ ಸಂಸ್ಥೆ ಮಧ್ಯೆ ರಾತ್ರಿ 11ರವರೆಗೆ ವೇಳಾಪಟ್ಟಿ ಪ್ರಕಾರ ಸೇವೆ ಲಭ್ಯ ಇರಲಿದೆ.
ಎಂ.ಜಿ. ರಸ್ತೆ ಮತ್ತು ಟ್ರಿನಿಟಿ ಮೆಟ್ರೋ ನಿಲ್ದಾಣಗಳ ನಡುವೆ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಆದ್ದರಿಂದ ಕೊನೆಯ ರೈಲು ಸೇವೆಯು ಕೆಂಗೇರಿ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿ ಕಡೆಗೆ ರಾತ್ರಿ 8.40ಕ್ಕೆ ಹೊರಡಲಿದೆ. ಅದೇ ರೀತಿ,
ಬೈಯಪ್ಪನಹಳ್ಳಿಯಿಂದ ಕೆಂಗೇರಿ ಕಡೆಗೆ ಕೊನೆಯ ರೈಲು 9.30ಕ್ಕೆ ನಿರ್ಗಮಿಸಲಿದೆ.
ಇನ್ನು ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಬೈಯಪ್ಪನಹಳ್ಳಿ ನಿಲ್ದಾಣಕ್ಕೆ ಹೋಗುವ ಕೊನೆಯ ರೈಲು ಸೇವೆ ರಾತ್ರಿ 9.10ಕ್ಕೆ ಲಭ್ಯ ಇರಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಸಿಎಲ್) ಪ್ರಕಟಣೆಯಲ್ಲಿ ತಿಳಿಸಿದೆ.
ಹಸಿರು ಮಾರ್ಗದ ಸೇವೆಯಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಇನ್ನು ಭಾನುವಾರ ಎಂದಿನಂತೆ ಬೆಳಿಗ್ಗೆ 7ರಿಂದ ನೇರಳೆ ಮಾರ್ಗದಲ್ಲಿ ಪೂರ್ಣವಾಗಿ ಸೇವೆ ಇರಲಿದೆ ಎಂದೂ ನಿಗಮ ಸ್ಪಷ್ಟಪಡಿಸಿದೆ.