ರಮೇಶ್ ಭಾವನಾತ್ಮಕವಾಗಿ ಮಾತನಾಡಿದ್ದಾರೆ: ಶೆಟ್ಟರ್
Team Udayavani, Feb 24, 2020, 3:03 AM IST
ಮೈಸೂರು: ಶಾಸಕ ಮಹೇಶ್ ಕುಮಟಳ್ಳಿಗೆ ಅನ್ಯಾಯವಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಬೃಹತ್ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಭಾನುವಾರ ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮಹೇಶ್ ಕುಮಟಳ್ಳಿಯವರನ್ನು ನಾನು ಕರೆದುಕೊಂಡು ಬಂದಿದ್ದೆ. ಅವರಿಗೆ ಸರಿಯಾದ ಸ್ಥಾನಮಾನ ನೀಡಬೇಕೆಂದು ರಮೇಶ್ ಜಾರಕಿಹೊಳಿ ಕೇಳಿದ್ದಾರೆ ಅಷ್ಟೆ. ಈ ವಿಚಾರದಲ್ಲಿ ಭಾವನಾತ್ಮಕ ವಾಗಿ ಮಾತನಾಡಿದ್ದಾರೆ.
ಅದು ಕೇವಲ ಪಾಸಿಂಗ್ ರಿಮಾರ್ಕ್. ಹೀಗಾಗಿ ಅದನ್ನು ತೀರಾ ಗಂಭೀರವಾಗಿ ಪರಿಗಣಿಸುವುದು ಬೇಡ. ಸದ್ಯ ನಮ್ಮ ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲ, ಎಲ್ಲವೂ ಬಗೆಹರಿದಿದೆ. ಯಾವುದೇ ಭಿನ್ನಮತೀಯ ಶಾಸಕರು ಮನೆಗೆ ಬಂದಿಲ್ಲ. ಯಾವುದೇ ಸಭೆ, ಚರ್ಚೆ ಕೂಡ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.