ಅಬಕಾರಿ ಪಿಎಸ್ಐ ಆತ್ಮಹತ್ಯೆ
Team Udayavani, Feb 24, 2020, 3:03 AM IST
ಬೀದರ: ಬಸವಕಲ್ಯಾಣ ಅಬಕಾರಿ ಇಲಾಖೆ ಪ್ರೊಬೇಷನರಿ ಪಿಎಸ್ಐ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ. ರೇಖಾ ಕರಣಕುಮಾರ ಕೋರಿ (29) ಆತ್ಮಹತ್ಯೆಗೆ ಶರಣಾದ ಪಿಎಸ್ಐ.
ಆಳಂದ ತಾಲೂಕಿನ ಕಡಗಂಚಿ ಗ್ರಾಮದ ರೇಖಾ ಅವರು ಬಸವಕಲ್ಯಾಣದ ಶಿವಪೂರ ರಸ್ತೆಯಲ್ಲಿರುವ ಸಂಜುಕುಮಾರ ನಾಗರಾಳೆ ಅವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಭಾನುವಾರ ಮಧ್ಯಾಹ್ನ ಮನೆಯಲ್ಲಿ ಫ್ಯಾನ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ರೇಖಾಗೆ ಪತಿ ಕರಣಕುಮಾರ, ಏಳು ವರ್ಷದ ಕೌಶಿಕ ಮತ್ತು ಒಂದೂವರೆ ವರ್ಷದ ಕರಿಧಾಂತ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.
ಎಂಟು ತಿಂಗಳಿನಿಂದ ಬಸವಕಲ್ಯಾಣ ಅಬಕಾರಿ ಇಲಾಖೆಯಲ್ಲಿ ಪ್ರೊಬೇಷನರಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರೇಖಾ ಅವರು, ಈ ಹಿಂದೆ ಕಲಬುರಗಿಯಲ್ಲಿ ಮಹಿಳಾ ಪೇದೆಯಾಗಿದ್ದರು. ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದ್ದು, ಬಸವಕಲ್ಯಾಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.