ನಾನು ಭಂಡತನ ಪ್ರದರ್ಶನ ಮಾಡಿಲ್ಲ, ಕ್ಷಮೆ ಕೇಳಿದ್ದೇನೆ: ರೇಣುಕಾಚಾರ್ಯ
Team Udayavani, Jan 11, 2022, 10:45 PM IST
ಬೆಂಗಳೂರು: ಡಿ.ಕೆ.ಶಿವಕುಮಾರ್ ಅವರಂತೆ ನಾನು ಭಂಡತನದ ಪರಮಾವಧಿ ಪ್ರದರ್ಶನ ಮಾಡಿಲ್ಲ. ಹೋರಿ ಬೆದರಿಸುವ ಜಾತ್ರೆಯಲ್ಲಿ ಯಾರಿಗೂ ಕೊರೊನಾ ಹರಡಿಲ್ಲ ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಲಿಖಿತವಾಗಿ ಬರೆದುಕೊಡುತ್ತೇನೆ. ನಾನು ಪಾಲ್ಗೊಂಡ ಕಾರ್ಯಕ್ರಮಕ್ಕೆ ಸರ್ಕಾರ, ಸಂಘಟನೆ ಯಾರೂ ಹೊಣೆ ಅಲ್ಲ. ನಾನೇ ವೈಯಕ್ತಿಕವಾಗಿ ಹೋಗಿದ್ದೆ ಎಂದು ತಿಳಿಸಿದರು.
ಕ್ಷೇತ್ರದ ಜನ ಹೇಳಿದರೆ ನಾನು ಬಾವಿಗೆ ಬೀಳ್ಳೋದಕ್ಕೂ ರೆಡಿ, ರಾಜಕಾರಣ ಮಾಡೋ ಸಂದರ್ಭದಲ್ಲಿ ನಾನೂ ರಾಜಕಾರಣ ಮಾಡುತ್ತೇನೆ. ಮಾಧ್ಯಮಗಳಿಗೂ ವೀಡಿಯೋ ಕೊಟ್ಟಿದ್ದು ನಮ್ಮ ಮಿತ್ರರೇ ನಾನು ರಾಜಕೀಯ ಲಾಭಕ್ಕೋಸ್ಕರ ಕಾರ್ಯಕ್ರಮದಲ್ಲಿ ಭಾಗಿ ಆಗಲಿಲ್ಲ ಎಂದು ಹೇಳಿದರು.
ಶಿವಕುಮಾರಣ್ಣ, ನೀವು ಅಧಿಕಾರದಲ್ಲಿದ್ದಾಗ ಎಷ್ಟು ಸಲ ನಮ್ಮ ಮೇಲೆ ಕೇಸ್ ಹಾಕಿಲ್ಲ ಹೇಳಿ. ಹಿಂದೆ ನೀವು ಅಧಿಕಾರದಲ್ಲಿ ಇದ್ದಾಗ ನನ್ನ ಬೆಂಕಿ ಹಚ್ಚಿ ಸುಡೋಕೇ ಬಂದಿದ್ದರು. ಅಧಿಕಾರದಲ್ಲಿದ್ದ ನೀವೇನು ಮಾಡಿದಿರಿ ನೋಡಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ:ಬೀದಿ ಬದಿ ವ್ಯಾಪಾರಿಗಳು ಕಾಂಗ್ರೆಸ್ಗೆ ಉಗಿತಾ ಇದ್ದಾರೆ : ಜ್ಞಾನೇಂದ್ರ
ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವಿನ ಕಂದಕ ಮರೆಮಾಚೋದಕ್ಕೆ ಅಧಿಕಾರಕ್ಕಾಗಿ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿದೆ. ಡಿ.ಕೆ.ಶಿವಕುಮಾರ್ ವೀರಾವೇಶ ಪೌರುಷದ ಮಾತನಾಡುತ್ತೀರಿಲ್ಲ, ನೀವೂ ನನ್ನ ತರಹ ಕ್ಷಮೆ ಕೇಳಿ. ನನ್ನ ಹೊನ್ನಾಳಿ ಕೋಟೆ ಬೇಧಿಸೋದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಸವಾಲು ಹಾಕಿದರು.
ಜಾತ್ರೆಯಲ್ಲಿ ಭಾಗಿಯಾಗಿದ್ದಕ್ಕೆ ನಾನು ನಾಡಿನ ಸಮಸ್ತ ಜನತೆಗೆ ಬಹಿರಂಗ ಕ್ಷಮೆ ಯಾಚಿಸಿದ್ದೇನೆ ನನಗೂ ಮುಜುಗರ ಆಯ್ತು. ಈ ಕಾರ್ಯಕ್ರಮ ದಿಢೀರ್ ಆಗಿದ್ದಲ್ಲ, 20 ದಿನಗಳ ಹಿಂದೆ ಆಯೋಜನೆ ಮಾಡಿದ್ದು, ಕಾರ್ಯಕ್ರಮ ಮುಂದೂಡಿ ಅಂತ ನಾನು ಹೇಳಿದ್ದೆ,ಯುವಕರು ಕೇಳಲಿಲ್ಲ ನನ್ನ ತಪ್ಪಿನ ಅರಿವು ಆಗಿ ಕ್ಷಮೆ ಕೇಳಿದ್ದೇನೆ ಎಂದು ಹೇಳಿದರು.
ನನ್ನ ಮೇಲೆ ಕೇಸ್ ಹಾಕಿ ಅಂತ ಅಧಿಕಾರಿಗಳಿಗೆ ಹೇಳಿದ್ದೇನೆ, ಹೊನ್ನಾಳಿ ಜನ ನನ್ನ ಹೊನ್ನಾಳಿ ಹುಲಿ ಅಂತ ಕರೆಯುತ್ತಾರೆ. ಪಕ್ಷಕ್ಕೂ ಸರ್ಕಾರಕ್ಕೂ ಮುಜುಗರ ಆಗೋದು ಬೇಡ, ನನ್ನ ಮೇಲೆ ಗೃಹ ಸಚಿವರು ಕೇಸ್ ಹಾಕಿಸಲಿ ಎಂದು ತಿಳಿಸಿದರು.