ಎನ್ಪಿಎಸ್ ಪಿಂಚಣಿ ಬಗ್ಗೆ ಪರಿಶೀಲನೆ: ಸಿಎಂ
Team Udayavani, Feb 7, 2018, 6:35 AM IST
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಎನ್ಪಿಎಸ್ ಪಿಂಚಣಿ ಯೋಜನೆ ರದ್ದುಪಡಿಸಿ ಈ ಮೊದಲಿದ್ದಂತೆ ಹಳೆಯ ಪೆನ್ಶನ್ ಯೋಜನೆ ಜಾರಿಗೆ ತರುವ ಬಗ್ಗೆ ಪರಿಶೀಲನೆ ನಡೆಸಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆಗೆ ತಿಳಿಸಿದ್ದಾರೆ.
ಮಂಗಳವಾರ ಸದನದಲ್ಲಿ ರಾಯಭಾಗ ಶಾಸಕ ಐಹೋಳೆ ಮಹಾಲಿಂಗಪ್ಪನವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು 6ನೇ ವೇತನ ಆಯೋಗವು ನೂತನ ಪಿಂಚಣಿ ಯೋಜನೆ ಕುರಿತಂತೆ ಕೆಲವು ಶಿಫಾರಸುಗಳನ್ನು ಮಾಡಿದೆ. ಅವುಗಳ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು. ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಮಧ್ಯಪ್ರವೇಶಿಸಿ, ಎನ್ಪಿಎಸ್ ಯೋಜನೆ ಕುರಿತು ಸರ್ಕಾರಿ ನೌಕರರ ಸಂಘಗಳು ಸರ್ಕಾರಕ್ಕೆ ಮನವಿ ಮಾಡಿ ಹಳೆಯ ಪಿಂಚಣಿ ಪದ್ದತಿ ಮುಂದುವರಿಸಲು ವಿನಂತಿ ಸಿವೆ. 6ನೇ ವೇತನ ಆಯೋಗವು ಈ ಸಂಬಂಧ ಶಿಫಾರಸು ಮಾಡಿದೆ ಎಂದು ಹೇಳಲಾಗುತ್ತಿದೆ. 2006 ರ ಮೊದಲು ನಿವೃತ್ತಿಯಾದ ನೌಕರರಿಗೆ ಉತ್ತಮ ಪಿಂಚಣಿ ಸೌಲಭ್ಯ
ದೊರೆಯುತ್ತಿಲ್ಲವೆನ್ನುವ ದೂರುಗಳಿವೆ. ಹೀಗಾಗಿ ಹಳೇ ಪಿಂಚಣಿ ಯೋಜನೆ ಜಾರಿಗೆ ತರುವಂತೆ ಆಗ್ರಹಿಸಿದರು.