ಹಿರಿಯ ಸಾಹಿತಿ ಎ. ಪಂಕಜ ನಿಧನಕ್ಕೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸಂತಾಪ
Team Udayavani, Dec 14, 2020, 5:15 PM IST
ಬೆಂಗಳೂರು: ಹಿರಿಯ ಸಾಹಿತಿ, ಸಮಾಜ ಸೇವಕಿ ಎ. ಪಂಕಜ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕನ್ನಡದಲ್ಲಿ 50 ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿರುವ ಪಂಕಜ ಅವರು ತೆಲುಗು, ಹಿಂದಿ ಹಾಗೂ ಇಂಗ್ಲಿಷ್ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಸಾಮಾಜಿಕ, ಪೌರಾಣಿಕ, ಪತ್ತೇದಾರಿ ಹೀಗೆ ವಿವಿಧ ಪ್ರಕಾರದ ಕಾದಂಬರಿಗಳ ಮೂಲಕ ಇವರು ಮನೆ ಮಾತಾದವರು ಎಂದು ಮುಖ್ಯಮಂತ್ರಿಗಳು ಸ್ಮರಿಸಿದ್ದಾರೆ.
ಇವರ ನಿಧನದಿಂದ ಬಹುಮುಖಿ ಪ್ರತಿಭೆಯೊಂದನ್ನು ಕಳೆದುಕೊಂಡಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟಂಬದವರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ :ಕೌಟುಂಬಿಕ ಸಮರದಿಂದ ಸಮರ ನೌಕೆಯವರೆಗೆ
ಇನ್ನು ಎ. ಪಂಕಜ ಅವರ ನಿಧನಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರೂ ಕೂಡಾ ಕಂಬನಿ ಮಿಡಿದಿದ್ದು, ಕನ್ನಡ ಕಾದಂಬರಿ ಪ್ರಕಾರದಲ್ಲಿ ಪಂಕಜಾ ಅವರದ್ದು ಬಹುದೊಡ್ಡ ಹೆಸರು. ಸುಮಾರು 50ಕ್ಕೂ ಕಾದಂಬರಿಗಳನ್ನು ರಚಿಸಿ, ಅವುಗಳಲ್ಲಿ ಸ್ತ್ರೀಪರ ಸಂವೇದನೆ, ತಲ್ಲಣ ಹಾಗೂ ಅವರ ಸಾಮಾಜಿಕ ಸ್ಥಿತಿಗತಿಗಳನ್ನು ಚಿತ್ರಿಸಿದ್ದಾರೆ.
ಜತೆಗೆ, ಶಿಕ್ಷಕಿಯಾಗಿ, ಮಹಿಳಾ ಸಹಕಾರಿ ಬ್ಯಾಂಕ್ ಸ್ಥಾಪಕಿಯಾಗಿ ಅವರು ಸಲ್ಲಿಸಿರುವ ಸೇವೆ ಸದಾ ಸ್ಮರಣೀಯ.
ಪಂಕಜಾ ಅವರ ನಿಧನ ಬಹುದೊಡ್ಡ ನಷ್ಟ. ಅವರಿಗೆ ಭಗವಂತ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ಈ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಡಿಸಿಎಂ ಪ್ರಾರ್ಥಿಸಿದ್ದಾರೆ.