ಯಡಿಯೂರಪ್ಪ ಡೋಂಗಿ ರೈತ ನಾಯಕ: ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ
Team Udayavani, Sep 28, 2020, 2:56 PM IST
ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಡೋಂಗಿ ರೈತ ನಾಯಕ. ಪ್ರಮಾಣ ವಚನ ತೆಗೆದುಕೊಳ್ಳುವಾಗ ರೈತನ ಮಗ ಎಂದು ರೈತರ ಹೆಸರು ಹೇಳುತ್ತಾರೆ. ಅವರು ನಿಜವಾಗಲೂ ರೈತನ ಮಗ ಆಗಿದ್ದರೆ, ಭೂ ಸುಧಾರಣೆ, ಎಪಿಎಂಸಿ, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತರುತ್ತಿರಲಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಏಕೀಕರಣಕ್ಕೂ ಮೊದಲು ಟೆನೆನ್ಸಿ ಕಾಯ್ದೆ ಇತ್ತು. 1961 ರಲ್ಲಿ ಭೂ ಸುಧಾರಣೆ ಕಾಯ್ದೆ ತಂದರು. ಮುಂದೆ ದೇವರಾಜ್ ಅರಸು ಮುಖ್ಯಮಂತ್ರಿ ಯಾಗಿದ್ದಾಗ ಉಳುವವನೆ ಭೂ ಒಡೆಯ ಕಾಯ್ದೆ ಜಾರಿಗೆ ತಂದರು. 1974 ರಿಂದ ಜಾರಿಗೆ ಬಂದಿದೆ. ಬಸವಣ್ಣ ಕೂಡ ಕಾಯಕ ಮತ್ತು ದಾಸೊಹ ಅಂತ ಹೇಳಿದ್ದರು. ಒಬ್ಬರು ಒಂದೆ ವೃತ್ತಿ ಮಾಡಬಹುದು. 79 ಎ ಯಲ್ಲಿ 25 ಲಕ್ಷ ಕ್ಕೂ ಹೆಚ್ಚು ಆದಾಯ ಹೊಂದಿದ್ದರೆ ಅವರಿಗೆ ಕೃಷಿ ಭೂಮಿ ಖರೀದಿಸಲು ಅವಕಾಶ ಇರಲಿಲ್ಲ. ಈ ಕಾಯ್ದೆ ತಿದ್ದುಪಡಿ ಮಾಡಿರುವುದರಿಂದ ರೈತರು ಹಣದಾಸೆಗೆ ಜಮೀನು ಮಾರಿ ನಗರ ಪ್ರದೇಶಗಳಿಗೆ ಕೂಲಿಗೆ ಬರುತ್ತಾರೆ. ಇದರಿಂದ ನಗರ ಪ್ರದೇಶದಲ್ಲಿ ಸ್ಲಮ್ ಗಳು ಹೆಚ್ಚಾಗುತ್ತವೆ ಎಂದರು.
ಇದನ್ನೂ ಓದಿ:ರೈತರಿಗೆ ಅನ್ಯಾಯವಾದರೆ ಅಧಿಕಾರಕ್ಕೆ ಅಂಟಿಕೊಂಡು ಕೂರಲ್ಲ: ಬಿ ಎಸ್ ಯಡಿಯೂರಪ್ಪ
ಹಸಿರು ಶಾಲ್ ಹಾಕಿದ ತಕ್ಷಣ ರೈತರಾಗಲು ಸಾಧ್ಯವಿಲ್ಲ. ಯಡಿಯೂರಪ್ಪ ಡೋಂಗಿ ಅಲ್ಲದೇ ಬೇರೆ ಇನ್ನೇನು. ಕಾಂಗ್ರೆಸ್ ರೈತರ ಪರವಾಗಿ ಮೊದಲಿನಿಂದಲೂ ಹೋರಾಟ ಮಾಡುತ್ತ ಬಂದಿದೆ. ಮುಂದೆಯೂ ರೈತರ ಪರವಾಗಿ ಹೋರಾಟ ಮಾಡುತ್ತೇವೆ ಎಂದರು.
ಬೆಂಗಳೂರು ಸುತ್ತಮುತ್ತ ಸುಮಾರು 5 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇದ್ದವು ಅವುಗಳನ್ನು ಈ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ರದ್ದು ಪಡಿಸಿದ್ದಾರೆ. ಅದನ್ನೂ ದುಡ್ಡಿಗಾಗಿ ಮಾಡಿದ್ದಾರೆ. ಯಡಿಯೂರಪ್ಪನವರೇ ಎಷ್ಟು ಲೂಟಿ ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಅಗತ್ಯ ಇದ್ದರೆ ಮಾತ್ರ ಸುಗ್ರೀವಾಜ್ಞೆ ತರುತ್ತಾರೆ. ಕೋವಿಡ್-19 ಸಂದರ್ಭದಲ್ಲಿ ಲೂಟಿ ಮಾಡಲು ಈ ಕಾಯ್ದೆ ತಿದ್ದುಪಡಿ ಮಾಡಿದ್ದಾರೆ. ಪಿಪಿಇ ಕಿಟ್ ಖರಿದಿಯಲ್ಲೂ ಹೊಡೆದಿದ್ದಾರೆ. ಬಿಡಿಎ ಹಗರಣದಲ್ಲಿ ಬಿಎಸ್ ವೈ ಮಗ, ಅಳಿಯ, ಮೊಮ್ಮಗ ಹಣ ಪಡೆದಿದ್ದಾರೆ. ಮೊಮ್ಮಗ ಶಶಿಧರ ಮರಡಿ ಅಕೌಂಟ್ ಗೆ ಆರ್ ಟಿ.ಜಿಎಸ್ ಮೂಲಕ 7.4 ಕೋಟಿ ಹಣ ವರ್ಗಾವಣೆಯಾಗಿದೆ ಎಂದು ಆರೋಪಿಸಿದರು.
ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡುವಂತೆ ಅಮಿತ್ ಶಾ ಒತ್ತಡ ಹೇರಿದ್ದಾರೆ. ಇದು ರಾಜ್ಯದ ವಿಷಯ ಈ.ಮೂಲಕ ರಾಜ್ಯದ ಗುಲಾಮರನ್ನಾಗಿ ಮಾಡಲು ಹೊರಟಿದ್ದಾರೆ. ನಾವೇನು ಇವರ ಗುಲಾಮರ? ಕಾಂಗ್ರೆಸ್ ಹೋರಾಟಕ್ಕಾಗಿ ಹುಟ್ಟಿರುವ ಪಕ್ಷ. ದುರ್ಬಲರ ಪರವಾಗಿರುವ ಪಕ್ಷ. ಬಿಜೆಪಿಯವರಂತಹ ನಯ ವಂಚಕರು ಎಲ್ಲಿಯೂ ಸಿಗುವುದಿಲ್ಲ ಸಿದ್ದರಾಮಯ್ಯ ಕಿಡಿಕಾರಿದರು.