ಸಿದ್ದು-ಎಚ್ಡಿಕೆ ಟ್ವೀಟಾಟೋಪ
Team Udayavani, Nov 6, 2019, 3:04 AM IST
ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಮತ್ತೆ ಟ್ವೀಟ್ ಸಮರ ಆರಂಭವಾಗಿದೆ. ಶಿವಮೊಗ್ಗದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಿದ್ದರಾಮಯ್ಯ, “ಎಚ್.ಡಿ.ಕುಮಾರಸ್ವಾಮಿಯವರು ಬಿಜೆಪಿ ಸರ್ಕಾರ ಪತನವಾಗಲ್ಲ ಬಿಡಲ್ಲ, ಸರ್ಕಾರ ಉಳಿಸುತ್ತೇನೆ ಎಂದು ಹೇಳುತ್ತಾರೆ. ಜೆಡಿಎಸ್ನಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ? ನಾವು ಕೈ ಜೋಡಿಸಿದ್ದು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಾರದು, ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರಬಾರದು ಎಂದು. ನಾವು 80 ಜನ ಇದ್ದರೂ ಅವರು 37 ಜನ ಇದ್ದರೂ ಸಿಎಂ ಸ್ಥಾನ ಕೊಟ್ಟಿದ್ದು ಆ ಕಾರಣಕ್ಕೆ’
“ಶಾಂತಿವನದಲ್ಲಿ ನನ್ನ ಅಭಿಮಾನಿ ಒಬ್ಬ ಬಂದು ಏನ್ ಸಾರ್ ನೀವು 80 ಜನ ಎಂಎಲ್ಗಳು ಇದ್ದರೂ ಸಿಎಂ ಸ್ಥಾನ ಜೆಡಿಎಸ್ಗೆ ಬಿಟ್ಟು ಕೊಟ್ರಲ್ಲ ಎಂದ. ಆಗ ನಾನು ನೋಡಪ್ಪಾ, ಪಾರ್ಲಿಮೆಂಟ್ ಎಲೆಕ್ಷನ್ವರೆಗೂ ಸ್ವಲ್ಪ ತಾಳ್ಮೆಯಿಂದ ಇರು, ಆ ನಂತರ ಕುಳಿತು ಮಾತಾಡೋಣ ಎಂದು ಹೇಳಿದ್ದೆ. ನಾನು ಮಾತನಾಡಿದ್ದರಲ್ಲಿ ತಪ್ಪೇನಿದೆ? ಆಗ ನಾನು ಹೇಳಿದ್ದನ್ನು ಈಗಲೂ ಒಪ್ಪಿಕೊಳ್ಳುತ್ತೇನೆ’ ಎಂದಿದ್ದಾರಲ್ಲದೆ, ಯಡಿಯೂರಪ್ಪ ಬಿಜೆಪಿ ಅಧಿಕೃತ ಸಭೆಯಲ್ಲಿ ನಡೆದ ಮಾತುಕತೆ ಸಮರ್ಥಿಸಿಕೊಳ್ಳುತ್ತಾರಾ ಎಂದು ಪ್ರಶ್ನಿಸಿದ್ದಾರೆ. ಜತೆಗೆ ಈ ಬಗ್ಗೆ ಟ್ವೀಟ್ ಸಹ ಮಾಡಿದ್ದಾರೆ.
ಎಚ್ಡಿಕೆ ಟ್ವೀಟ್: ಇದಕ್ಕೆ ಲಂಡನ್ನಿಂದಲೇ ಟ್ವೀಟ್ ಮಾಡಿರುವ ಎಚ್.ಡಿ.ಕುಮಾರಸ್ವಾಮಿ “ಕೆಲವರು ತಾವು ಮುಖ್ಯಮಂತ್ರಿ ಆಗಲೇಬೇಕು ಎಂಬ ಸ್ವಾರ್ಥದ ದುರಾಸೆಯಿಂದ ಜನರ ಹಣ ಪೋಲಾದರೂ ಪರವಾಗಿಲ್ಲ ಎಂದು ಸರ್ಕಾರ ಬೀಳಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಪಕ್ಷ ಬಿಟ್ಟು ಹೋದ ಶಾಸಕರನ್ನು ಬಹುತೇಕರು ನಿಮ್ಮ ಪಕ್ಷದವರೇ ಎಂಬುದನ್ನು ಮರೆಯಬಾರದು. ಪಕ್ಷದ ಮನೆಯ ಒಲೆ ಆರಿಸಲು ಬರುವ ಮುನ್ನ ಹೊತ್ತಿ ಉರಿಯುತ್ತಿರುವ ತಮ್ಮ ಮನೆಯ ಬೆಂಕಿ ನಂದಿಸಿಕೊಳ್ಳಿ’ ಎಂದು ಟಾಂಗ್ ನೀಡಿದ್ದಾರೆ.