ಶ್ರೀರಂಗಪಟ್ಟಣ: ನಾಲೆಗೆ ಕಾರು ಉರುಳಿ 4 ಮಂದಿ ಜಲಸಮಾಧಿ
ಡ್ರೈವರ್ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು
Team Udayavani, Jul 29, 2023, 10:52 PM IST
ಶ್ರೀರಂಗಪಟ್ಟಣ: ಗಾಮನಹಳ್ಳಿ ಬಳಿ ವಿಸಿ ನಾಲೆಗೆ ಕಾರು ಉರುಳಿ ಬಾಲಕಿ ಸೇರಿ ನಾಲ್ಕು ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಶನಿವಾರ ರಾತ್ರಿ ಸಂಭವಿಸಿದೆ.
ಶ್ರೀರಂಗಪಟ್ಟಣದ ಗಡಿ ಭಾಗ ಗಾಮನಹಳ್ಳಿ ಬಳಿ ಯ ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಗಾಮನಹಳ್ಳಿಯಿಂದ ಬನ್ನೂರು ಮಾರ್ಗವಾಗಿ ವಿಸಿ ನಾಲೆ ಏರಿ ಮೇಲೆ ಹೋಗುವಾಗ ಕಾರು ನಾಲೆಗೆ ಉರುಳಿದೆ. ಕಾರಿನಲ್ಲಿದ್ದ ಓರ್ವ ಬಾಲಕಿ ಸೇರಿ ಮೂವರು ಮಹಿಳೆಯರು ನೀರಿನಲ್ಲಿ ಮೃತ ಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಸ್ಥಳಕ್ಕೆ ಅರೆಕೆರೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮೃತ ದುರ್ದೈವಿಗಳು ಮಳವಳ್ಳಿ ತಾಲೂಕಿನ ಡೋರನಹಳ್ಳಿ ಗ್ರಾಮದ ಮಹದೇವಮ್ಮ ರೇಖಾ, ಸಂಜನಾ, ಮಮತಾ ಎಂದು ತಿಳಿದು ಬಂದಿದೆ. ಕಾರು ಡ್ರೈವರ್ ಮನೋಜ್ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೊನ್ನೆಯಷ್ಟೆ ವಿ.ಸಿ ನಾಲೆಗೆ ಕಾರು ಬಿದ್ದು ಓರ್ವ ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ದುರಂತ ನಡೆದಿದೆ. ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.