ಮೊಯ್ಲಿ ಹೇಳಿಕೆಯನ್ನು ಅರಗಿಸಿಕೊಳ್ಳುವ ತಾಕತ್ತು ಡಿಕೆಶಿ, ಸಿದ್ದರಾಮಯ್ಯ ಅವರಿಗಿದೆಯೇ: ಬಿಜೆಪಿ
Team Udayavani, May 20, 2021, 4:58 PM IST
ಬೆಂಗಳೂರು: ಪಂಚ ರಾಜ್ಯ ಚುನಾವಣೆ ಫಲಿತಾಂಶಗಳ ಬಳಿಕ ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ಅವರ ಸ್ವಪಕ್ಷದ ನಾಯಕತ್ವದ ವಿರುದ್ಧ ಅಪಸ್ವರ ಎತ್ತಿದ್ದರು. ಇದೀಗ ರಾಜ್ಯ ಬಿಜೆಪಿಯು ಮೊಯ್ಲಿ ಹೇಳಿಕೆಯನ್ನು ಬಳಸಿಕೊಂಡು ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ಮಾಡಿದೆ.
ಬಂಗಾಳ ಫಲಿತಾಂಶದ ಬಳಿಕ ಕಾಂಗ್ರೆಸ್ ಸಾಧನೆಯನ್ನು ಮೌಲ್ಯಮಾಪನದ ಬದಲಾಗಿ ಬಿಜೆಪಿ ಟೀಕಿಸಿದ್ದ ರಾಹುಲ್ ಗಾಂಧಿ ಪಟಾಲಂಗೆ ವೀರಪ್ಪ ಮೊಯ್ಲಿ ಹೇಳಿಕೆ ಕಪಾಳ ಮೋಕ್ಷವಾಗಿದೆ. ದುರ್ಬಲ ನಾಯಕತ್ವವನ್ನು ಸ್ವಪಕ್ಷೀಯ ರಾಷ್ಟ್ರೀಯ ನಾಯಕರೇ ಟೀಕಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಮೊಯ್ಲಿ ಅವರೇ, ನಿಮಗೂ ನೋಟೀಸ್ ಕಾದಿದೆ ಎಂದು ಬಿಜೆಪಿ ಟೀಕೆ ಮಾಡಿದೆ.
ಇದನ್ನೂ ಓದಿ:ಯಾಸ್ ಚಂಡಮಾರುತ : ಅಗತ್ಯ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಿ : ಅಧಿಕಾರಿಗಳಿಗೆ ದೀದಿ ಸೂಚನೆ
ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿಗೆ ಸ್ಥಳೀಯ ಹಾಗೂ ರಾಷ್ಟ್ರೀಯ ಮಟ್ಟದ ದುರ್ಬಲ ನಾಯಕತ್ವವೇ ಕಾರಣ ಎಂದು ಮೊಯ್ಲಿ ಹೇಳಿದ್ದಾರೆ. ರಾಹುಲ್ ನಾಯಕತ್ವಕ್ಕೆ ಭವಿಷ್ಯವಿಲ್ಲ ಎಂದು ಮೊಯ್ಲಿ ಷರಾ ಬರೆದ ಮೊಯ್ಲಿ ಹೇಳಿಕೆಯನ್ನು ಅರಗಿಸಿಕೊಳ್ಳುವ ತಾಕತ್ತು ಡಿಕೆಶಿ, ಸಿದ್ದರಾಮಯ್ಯ ಅವರಿಗಿದೆಯೇ ಎಂದು ಬಿಜೆಪಿ ಪ್ರಶ್ನಿಸಿದೆ.
ಎಐಸಿಸಿ ಅಧ್ಯಕ್ಷರ ಆಯ್ಕೆ ಪ್ರಹಸನ ಕಳೆದ ಒಂದು ವರ್ಷದಿಂದ ನಡೆಯುತ್ತಿದೆ. ಹಂಗಾಮಿ ವ್ಯವಸ್ಥೆ ದುರ್ಬಲವಾಗಿದೆ ಎಂದು ಮೊಯ್ಲಿ ಹೇಳಿದ್ದಾರೆ. ರಾಹುಲ್ ಗಾಂಧಿ ಎದುರು ಕೈ ಕಟ್ಟಿ ನಿಂತು ಗುಲಾಮಗಿರಿಯಲ್ಲೇ ಪರಮಸುಖ ಕಾಣುವ ಸಿದ್ದರಾಮಯ್ಯ, ಡಿಕೆಶಿ ಅವರೇ ಹಂಗಾಮಿ ನಾಯಕತ್ವದ ಕುರಿತು ಮಾತನಾಡುವ ಧೈರ್ಯ ತೋರುವಿರಾ ಎಂದು ಬಿಜೆಪಿ ಟ್ವೀಟ್ ನಲ್ಲಿ ಪ್ರಶ್ನಿಸಿದೆ.