ರಾಜ್ಯ ಪೊಲೀಸರಿಗೆ ತಮಿಳುನಾಡು ಮಾದರಿ ಇಡಿ ಅಧಿಕಾರ: ಪಾಟೀಲ
Team Udayavani, Jun 30, 2019, 3:05 AM IST
ವಿಜಯಪುರ: ರಾಜ್ಯದಲ್ಲಿ ಆರ್ಥಿಕ ಅಪರಾಧಗಳ ಸಂದರ್ಭದಲ್ಲಿ ಆಸ್ತಿ ವಶಕ್ಕೆ ಪಡೆಯಲು ತಮಿಳುನಾಡು ರಾಜ್ಯದಲ್ಲಿ ಇರುವಂತೆ ನಮ್ಮ ಪೊಲೀಸರಿಗೆ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರ ಇಲ್ಲ. ಹೀಗಾಗಿ ರಾಜ್ಯದ ಪೊಲೀಸರಿಗೂ ಈ ಅಧಿಕಾರ ನೀಡಲು ಬರುವ ಅಧಿವೇಶನದಲ್ಲಿ ವಿಧೇಯಕಕ್ಕೆ ತಿದ್ದುಪಡಿ ತರಲಾಗುವುದು ಎಂದು ಗೃಹ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಜಮೀರ್ ಅಹ್ಮದ್ ಅವರಿಗೆ ಇಡಿ ನೋಟಿಸ್ ನೀಡಿದ್ದರಲ್ಲಿ ತಪ್ಪಿಲ್ಲ. ಐಎಂಎ ಸಂಸ್ಥೆಗೆ ನನ್ನ ಆಸ್ತಿಯನ್ನು ಮಾರಾಟ ಮಾಡಿದ್ದು, ಆದಾಯ ತೆರಿಗೆ ಇಲಾಖೆಗೂ ಮಾಹಿತಿ ನೀಡಿದ್ದಾಗಿ ಸ್ವಯಂ ಸಚಿವ ಜಮೀರ್ ಅಹ್ಮದ್ ಅವರೇ ಸ್ಪಷ್ಟಪಡಿಸಿದ್ದಾರೆ. ನಾನೇ ಖುದ್ದಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದು, ಎಲ್ಲವನ್ನೂ ಮಾಧ್ಯಮಗಳ ಮುಂದೆ ಹೇಳಲಾಗದು ಎಂದರು.
ಐಎಂಎ ಪ್ರಕರಣ ಭಾರೀ ಪ್ರಮಾಣದ ಹಗರಣವಾಗಿದ್ದು, ಭಯೋತ್ಪಾದಕರ ಸಂಪರ್ಕ ಇದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಸಂಸತ್ನಲ್ಲಿ ಆರೋಪಿಸಿ, ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿರುವುದು ಸರಿಯಾದ ಕ್ರಮವಲ್ಲ. ಯಾವ ರೀತಿ ಸಂಪರ್ಕ ಇದೆ ಎಂಬುದರ ಮಾಹಿತಿ ಬಹಿರಂಗ ಪಡಿಸಲಿ ಎಂದು ಹೇಳಿದರು.
ರಾಜ್ಯದ ಪೊಲೀಸರು ಹಾಗೂ ಎಸ್ಐಟಿ ಎಂಥದ್ದೇ ಪ್ರಕರಣವನ್ನು ಪತ್ತೆ ಮಾಡುವಷ್ಟು ಸಮರ್ಥರಿದ್ದು, ಸಿಬಿಐ ಸಂಸ್ಥೆಗೆ ವಹಿಸುವ ಪ್ರಶ್ನೆಯೇ ಇಲ್ಲ. ಹಿಂದೆಲ್ಲ ಸಿಬಿಐ ತನಿಖಾ ಸಂಸ್ಥೆಯಲ್ಲಿ ಕಾಂಗ್ರೆಸ್ ಸಂಸ್ಥೆ ಎಂದೆಲ್ಲ ಹಗುರವಾಗಿ ಮಾತನಾಡಿದ್ದ ಬಿಜೆಪಿ ಸಂಸದರಿಗೆ ಈಗೇಕೆ ಸಿಬಿಐ ಸ್ವತಂತ್ರ ಸಂಸ್ಥೆಯಾಗಿ ಕಂಡಿದೆ ಎಂದರು.