ಮನೆಗೆ ಶ್ರೀಕೃಷ್ಣ ಮಠ, ಶ್ರೀ ಚಾಮುಂಡೇಶ್ವರಿ ಪ್ರಸಾದ
Team Udayavani, Apr 23, 2021, 6:34 AM IST
ಬೆಂಗಳೂರು: ಕೋವಿಡ್ ಕಾಲದಲ್ಲಿ ಭಾರತೀಯ ಅಂಚೆ ಇಲಾಖೆ ಭಿನ್ನ ಸೇವೆಗೆ ಕೈ ಹಾಕಿದೆ. ಈಗಾಗಲೇ ಮಾವಿನ ಹಣ್ಣನ್ನು ಅಂಚೆಯ ಮೂಲಕ ತಲುಪಿಸುವಲ್ಲಿ ಯಶಸ್ವಿ ಆಗಿರುವ ಅದು, ಈಗ ಉಡುಪಿಯ ಶ್ರೀಕೃಷ್ಣ ಮಠ ಮತ್ತು ಮೈಸೂರಿನ ಶ್ರೀಚಾಮುಂಡೇಶ್ವರಿ ದೇವಸ್ಥಾನಗಳ ಪ್ರಸಾದವನ್ನು ಭಕ್ತರ ಮನೆ ಬಾಗಿಲಿಗೆ ತಲುಪಿಸುವ ಯೋಜನೆ ರೂಪಿಸಿದೆ.
ಕೊರೊನಾ ಸೋಂಕು ಹೆಚ್ಚಿರುವ ಈ ಸಮಯದಲ್ಲಿ ಭಕ್ತರಿಗೆ ದೇವಸ್ಥಾನಗಳಿಗೆ ಭೇಟಿ ನೀಡಲು ಆಗುತ್ತಿಲ್ಲ. ಅಂತಹವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಭಾರತೀಯ ಅಂಚೆ ಇಲಾಖೆಯ ಕರ್ನಾಟಕ ವೃತ್ತ ಈ ಕಾರ್ಯಕ್ಕೆ ಮುಂದಾಗಿದೆ.
ಇಲಾಖೆಯ ಕರ್ನಾಟಕ ವಿಭಾಗದ ಹಿರಿಯ ಅಧಿಕಾರಿಗಳು ಉಡುಪಿ ಶ್ರೀಕೃಷ್ಣ ಮಠ ಮತ್ತು ಮೈಸೂರಿನ ಶ್ರೀಚಾಮುಂಡೇಶ್ವರಿ ದೇವಾಲಯದ ಆಡಳಿತ ಮಂಡಳಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಶೀಘ್ರದಲ್ಲೇ ಈ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯುವ ಸಾಧ್ಯತೆಯಿದೆ ಎಂದು ಕರ್ನಾಟಕ ವೃತ್ತದ ಸಹಾಯಕ ಪೋಸ್ಟ್ ಮಾಸ್ಟರ್ ಜನರಲ್ ವಿ. ತಾರಾ ಹೇಳಿದ್ದಾರೆ.
16,346 ಬಾಟಲಿ ಗಂಗಾಜಲ ವಿತರಣೆ :
ಅಂಚೆ ಇಲಾಖೆಯ ಕರ್ನಾಟಕ ವೃತ್ತ ಈಗಾಗಲೇ ಗಂಗಾಜಲ ವಿತರಣೆ ಸೇವೆಯನ್ನೂ ಆರಂಭಿಸಿದೆ. ಇದಕ್ಕಾಗಿ ಸುಮಾರು 337 ಅಂಚೆ ಕಚೇರಿಗಳನ್ನು ಮೀಸಲಿರಿಸಿದೆ. ಈ ಆರ್ಥಿಕ ವರ್ಷದಲ್ಲಿ 250 ಮಿ.ಲೀ.ನ 16,346 ಬಾಟಲಿ ಗಂಗಾಜಲವನ್ನು ಭಕ್ತರ ಮನೆಗೆ ತಲುಪಿಸಲಾಗಿದೆ.
ಇಸ್ಕಾನ್ ಜತೆಗೂ ಮಾತುಕತೆ :
ಅಂಚೆ ಇಲಾಖೆ ಈಗಾಗಲೇ ಉ.ಪ್ರದೇಶದ ಕಾಶಿ ವಿಶ್ವನಾಥ ದೇಗುಲದ ಪ್ರಸಾದ ಮತ್ತು ಶಬರಿಮಲೆ ದೇಗುಲದ ಪ್ರಸಾದವನ್ನು ಅಂಚೆ ಮೂಲಕ ಕರ್ನಾಟಕದ ಭಕ್ತರಿಗೆ ತಲುಪಿ ಸುವಲ್ಲಿ ಯಶಸ್ವಿ ಆಗಿದೆ. ಇಸ್ಕಾನ್ ಮತ್ತು ತಮಿಳುನಾಡಿನ ಪಳನಿ ಮುರುಗನ್ ಸ್ವಾಮಿ ದೇವಾಲಯಗಳ ಪ್ರಸಾದವನ್ನು ತಲುಪಿಸುವ ನಿಟ್ಟಿನಲ್ಲಿಯೂ ಮಾತುಕತೆ ನಡೆಯುತ್ತಿದೆ.
ಅಂಚೆ ಇಲಾಖೆ ಎಲ್ಲ ರೀತಿಯ ಸೇವೆಗಳನ್ನು ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುತ್ತಿದೆ. ಜನರು ಬಯಸಿದ ದೇವಾಲಯಗಳ ಪ್ರಸಾದವನ್ನು ಅವರ ಮನೆಬಾಗಿಲಿಗೆ ತಲುಪಿಸಲಾಗುವುದು. -ಶಾರದಾ ಸಂಪತ್, ಕರ್ನಾಟಕ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್