ಕೈದಿ ಮಗುವಿಗೆ ಜೈಲಲ್ಲೇ ನಾಮಕರಣ
Team Udayavani, Jul 20, 2018, 3:07 PM IST
ರಾಯಚೂರು: ಜೈಲೆಂದರೆ ಶಿಕ್ಷೆ ಅನುಭವಿಸುವ ತಾಣ ಎಂದೇ ಎಲ್ಲರ ಅಭಿಪ್ರಾಯ. ಅದರೆ, ರಾಯಚೂರಿನ ಜಿಲ್ಲಾ ಕಾರಾಗೃಹದಲ್ಲಿ ಮಗುವಿನ ನಾಮಕರಣ ಕಾರ್ಯಕ್ರಮ ಕುತೂಹಲ ಮೂಡಿಸಿದೆ.
ನಗರದ ಜಿಲ್ಲಾ ಕಾರಾಗೃಹದಲ್ಲಿ ಗುರುವಾರ ಹೆಣ್ಣು ಮಗುವಿಗೆ ನಾಮಕರಣ ಮಾಡಲಾಯಿತು.ಅದು ವಿಚಾರಣಾಧೀನ ಕೈದಿಗೆ ಜನಿಸಿದ ಮಗು ಎನ್ನುವುದು ವಿಶೇಷ. ಮಾನ್ವಿ ಬಳಿ ನಡೆದ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪದಡಿ ಶಿಷಾಬಾಯಿ ಜೈಲು ಪಾಲಾದಾಗ ಮೂರು ತಿಂಗಳ ಗರ್ಭಿಣಿಯಾಗಿದ್ದರು. ನ್ಯಾಯಾಲಯ 2017ರ ಅಕ್ಟೋಬರ್ನಲ್ಲಿ ಅವರನ್ನು ಸೆರೆವಾಸಕ್ಕೆ ಕಳುಹಿಸಿತ್ತು.ಗರ್ಭಿಣಿಯಾಗಿದ್ದ ಅವರು 2018ರ ಏಪ್ರಿಲ್ ಮೊದಲನೇ ವಾರ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಇದರಿಂದ ಜೈಲಿನಲ್ಲಿಯೇ ಶಾಸ್ತ್ರೋಕ್ತವಾಗಿ ಮಗುವಿಗೆ ನಾಮಕರಣ ಕಾರ್ಯಕ್ರಮ ನಡೆಯಿತು. ತಾಯಿಗೆ ಉಡಿ ತುಂಬಿ ಹರಸಲಾಯಿತು. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬೈಲೂರು ಶಂಕರರಾಮ ಮಗುವಿಗೆ ಕೃಷ್ಣವೇಣಿ ಎಂದು ನಾಮಕರಣ ಮಾಡಿದರು. ನ್ಯಾಯಾಧೀಶರು, ಜೈಲರ್ ಮತ್ತಿತರರು ಸಾಕ್ಷಿಯಾದರು