Shivamogga: ಸರಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ ಇಬ್ಬರು ಅಧಿಕಾರಿಗಳು ಅಮಾನತು
Team Udayavani, Jun 20, 2023, 7:23 AM IST
ಶಿವಮೊಗ್ಗ: ಜಲಜೀವನ್ ಮಿಷನ್ ಯೋಜನೆಯಲ್ಲಿ ಕಳಪೆ ಕಾಮಗಾರಿ ಹಾಗೂ ಬೋಗಸ್ ಬಿಲ್ ಮಾಡಿ ಸರಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಸ್.ಬಿ.ಕೊಟ್ರೇಶ್ ಹಾಗೂ ಸಹಾಯಕ ಎಂಜಿನಿಯರ್ ಬಿ. ಶೇಖರ್ ನಾಯ್ಕ್ ಅಮಾನತುಗೊಂಡವರು.
ದೂರುಗಳ ಆಧಾರದ ಮೇಲೆ ಶಿವಮೊಗ್ಗ ಗ್ರಾಮಾಂತರ ವ್ಯಾಪ್ತಿಯ ಹುಣಸೋಡು, ಅಬ್ಬಲಗೆರೆ, ಬೆಳಲಕಟ್ಟೆ, ಮೇಲಿನ ಹನಸವಾಡಿ, ಬೇಡರ ಹೊಸಹಳ್ಳಿ, ಹೊಳೆಹಟ್ಟಿ ಗ್ರಾಮಗಳಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ನೇತೃತ್ವದ ತನಿಖಾ ತಂಡ ಪರಿಶೀಲನೆ ನಡೆಸಿದ್ದು ಕಳಪೆ ಕಾಮಗಾರಿ ಮಾಡಿರುವುದು ತಿಳಿದುಬಂದಿದೆ.
ತನಿಖಾ ತಂಡದ ವರದಿ ಆಧಾರದ ಮೇಲೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇಬ್ಬರನ್ನು ಅಮಾನತು ಮಾಡಲಾಗಿದೆ.