ಗೋಹತ್ಯೆ ನಿಷೇಧ ಮಸೂದೆಯಿಂದ ಸಮಾಜದಲ್ಲಿ ಅಶಾಂತಿ: ದೇವೇಗೌಡ
Team Udayavani, Dec 15, 2020, 9:06 PM IST
ಬೆಂಗಳೂರು: ಗೋಹತ್ಯೆ ನಿಷೇಧ ಮಸೂದೆಯ ಮೂಲಕ ಬಿಜೆಪಿ ಸರಕಾರ ಸಮಾಜದಲ್ಲಿ ಅಶಾಂತಿ ಮತ್ತು ಜನರ ಬಾಳು ಅಲ್ಲೋಲ ಕಲ್ಲೋಲ ಮಾಡಲು ಹೊರಟಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಆರೋಪಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಗೋಹತ್ಯೆ ನಿಷೇಧ ಮಸೂದೆಯನ್ನು ಜೆಡಿಎಸ್ ಸಂಪೂರ್ಣವಾಗಿ ವಿರೋಧಿಸುತ್ತದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಗೋಹತ್ಯೆ ನಿಷೇಧದ ಬಗ್ಗೆ 1964ರ ಕಾಯ್ದೆ ಜಾರಿಯಲ್ಲಿದೆ. ಅದರಲ್ಲಿ ನಿಯಮ ಉಲ್ಲಂ ಸಿದವರ ಮೇಲೆ ದಂಡ ವಿಧಿಸಲು ಅವಕಾಶವಿದೆ. 2010ರಲ್ಲಿ ಬಿಜೆಪಿ ಸರಕಾರ ತಂದ ಕಾಯ್ದೆಯಲ್ಲಿ ಸಮಾಜದ ಕೆಲವೊಂದು ಸಮುದಾಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ದಂಡ ಏಳು ಪಟ್ಟು ಹೆಚ್ಚಿಸಿ ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಿತ್ತು. ಆಗ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಧರಣಿ ನಡೆಸಿದರೂ ಮಸೂದೆಯನ್ನು ಅಂಗೀಕರಿಸಲಾಗಿತ್ತು. ಆ ಬಳಿಕ ನಮ್ಮ ನಿಯೋಗವು ರಾಜ್ಯಪಾಲರು ಮತ್ತು ರಾಷ್ಟ್ರಪತಿಯವರನ್ನು ಭೇಟಿ ಮಾಡಿ ಅಂಗೀಕಾರ ನೀಡಬಾರದೆಂದು ಮನವಿ ಮಾಡಿತ್ತು. ಹೀಗಾಗಿ ಮಸೂದೆಯನ್ನು ವಾಪಸ್ ಪಡೆಯಲಾಗಿತ್ತು. ಇದೀಗ ಬಿಜೆಪಿ ಸರಕಾರ ಮತ್ತೆ ಕಾಯ್ದೆ ಮಂಡಿಸಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದವರು ದೂರಿದ್ದಾರೆ.