ಯುವ ಜನಾಂಗ ದೇಶದ ಭವಿಷ್ಯ, ಅವರಿಗೆ ದ್ವೇಷ ಬೇಕಾಗಿಲ್ಲ: ರಾಹುಲ್ ಗಾಂಧಿ
ಕೋಮು ವಿಭಜನೆ ಬೇಡ : ಬ್ಯಾನರ್ ಹಿಡಿದ ಯುವ ತಂಡ ಯಾತ್ರೆಯಲ್ಲಿ ಭಾಗಿ
Team Udayavani, Oct 9, 2022, 7:39 PM IST
ತುಮಕೂರು :ಕೆಲವು ರಾಜಕೀಯ ಪಕ್ಷಗಳು ಯುವಕರನ್ನು ದಾರಿ ತಪ್ಪಿಸುವ ಮೂಲಕ ದೇಶದಲ್ಲಿ ದ್ವೇಷವನ್ನು ಹರಡಲು ಪ್ರಯತ್ನಿಸುತ್ತಿವೆ. ಯುವ ಜನರ ಸಮಸ್ಯೆಗಳತ್ತ ಗಮನಹರಿಸಲಾಗುತ್ತಿದೆ ಎಂದು ಭಾನುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ನಿರುದ್ಯೋಗ ಮತ್ತು ಕೋಮು ವಿಭಜನೆಯ ವಿರುದ್ಧ ಬ್ಯಾನರ್ ಹಿಡಿದ ಯುವಕ, ಯುವತಿಯರ ತಂಡ ಭಾನುವಾರ ”ಭಾರತ್ ಜೋಡೋ’ 32 ನೇ ದಿನದ ಯಾತ್ರೆಯಲ್ಲಿ ಸೇರಿಕೊಂಡು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಶಾಂತಿ ಮತ್ತು ಭ್ರಾತೃತ್ವದ ಸಂದೇಶವನ್ನು ಸಾರಲು ಮತ್ತು ಭಾರತವನ್ನು ಒಗ್ಗೂಡಿಸಲು ಯುವಕರು ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ರಾಹುಲ್ ಗಾಂಧಿ ಮನವಿ ಮಾಡಿದರು.
”ಯುವ ಜನಾಂಗ ನಮ್ಮ ದೇಶದ ಭವಿಷ್ಯ, ಅವರಿಗೆ ದ್ವೇಷ ಬೇಕಾಗಿಲ್ಲ, ಅವರಿಗೆ ಪ್ರೀತಿ ಬೇಕು, ಉದ್ಯೋಗ ಬೇಕು, ಇದರಿಂದ ಅವರು ತಮ್ಮ, ತಮ್ಮ ಕುಟುಂಬ ಮತ್ತು ದೇಶದ ಭವಿಷ್ಯವನ್ನು ರೂಪಿಸಬಹುದು. ಕೆಲವು ರಾಜಕೀಯ ಪಕ್ಷಗಳು ಈ ಯುವಕರನ್ನು ದಾರಿತಪ್ಪಿಸುತ್ತಿವೆ, ಅವರನ್ನು ನಿರುದ್ಯೋಗಿಗಳಾಗಿರಿಸುತ್ತಿವೆ, ತಮ್ಮ ದ್ವೇಷದ ರಾಜಕಾರಣ ಮಾಡುತ್ತಿವೆ” ಎಂದು ಹೇಳಿದರು.
“ನಾವು ಯುವಕರನ್ನು ದಾರಿ ತಪ್ಪದಂತೆ ಉಳಿಸಬೇಕು, ಅವರಿಗೆ ಉತ್ತಮ ನಾಳೆಯನ್ನು ಸೃಷ್ಟಿಸಬೇಕು, ಉತ್ತಮ ಶಿಕ್ಷಣ ಮತ್ತು ಉದ್ಯೋಗವನ್ನು ನೀಡಬೇಕು” ಎಂದರು.
ತಮ್ಮ ಸಂವಾದದ ಚಿತ್ರವನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡ ರಾಹುಲ್ ಗಾಂಧಿ, ”ನಮ್ಮ ಪ್ರೀತಿಯ ಭಾರತದಲ್ಲಿ ದ್ವೇಷಕ್ಕೆ ಅವಕಾಶವಿಲ್ಲ ಎಂದು ಈ ಯುವಕರು ಹೇಳುತ್ತಿದ್ದಾರೆ. ದೇಶದ ಜನರು ದ್ವೇಷದ ವಿರುದ್ಧ ಏಕೆ ಧ್ವನಿ ಎತ್ತುತ್ತಿದ್ದಾರೆ? ಅದು ನಿಮಗೆಲ್ಲರಿಗೂ ಗೊತ್ತು” ಎಂದು ಬರೆದಿದ್ದಾರೆ.
”ಕೆಲವು ವರ್ಷಗಳ ಹಿಂದೆ, ದೇಶದಲ್ಲಿ ಇಂದು ಇರುವಂತಹ ವಾತಾವರಣ ಇರಲಿಲ್ಲ.ಮೊದಲು ಸಹೋದರತ್ವವಿತ್ತು, ಪರಸ್ಪರ ಪ್ರೀತಿ ಇತ್ತು, ಆದರೆ ಇಂದು ಹಾಗಿಲ್ಲ. ಮತ್ತು ಇದು ‘ಭಾರತ್ ಜೋಡೋ’ ಯಾತ್ರೆಗೆ ಒಂದು ದೊಡ್ಡ ಕಾರಣ” ಎಂದು ಅವರು ಹಿಂದಿಯಲ್ಲಿ ಫೇಸ್ಬುಕ್ ಪೋಸ್ಟ್ನಲ್ಲಿ ಬರೆದಿದ್ದಾರೆ.
ತಿಪಟೂರಿನ ಕೆಬಿ ಕ್ರಾಸ್ ನಿಂದ ಬರಕನ ಹಾಳು ಗೇಟ್ ವರೆಗೆ ನಡೆದ ಯಾತ್ರೆಯಲ್ಲಿ ಮಕ್ಕಳು, ಮಹಿಳೆಯರು ಮತ್ತು ಸ್ಥಳೀಯರು ಸೇರಿದಂತೆ ಅನೇಕ ಜನರೊಂದಿಗೆ ರಾಹುಲ್ ಸಂವಾದ ನಡೆಸಿದರು.ಹಿರಿಯ ನಾಯಕ ಸಿದ್ದರಾಮಯ್ಯ ಮತ್ತು ಕೆ ಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಹಾಜರಿದ್ದರು.
ಚಿಕ್ಕನಾಯಕನಹಳ್ಳಿಯಲ್ಲಿ ಆದಿಕವಿ ವಾಲ್ಮೀಕಿ ಮಹರ್ಷಿಗಳ ಜಯಂತಿಯ ಅಂಗವಾಗಿ ರಾಹುಲ್ ಗಾಂಧಿ ಅವರು ವಾಲ್ಮೀಕಿ ಭಾವಚಿತ್ರಕ್ಕೆ ನಮಿಸಿ, ಗೌರವ ಸಮರ್ಪಿಸಿದರು.