ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ
ದ್ವೇಷ ಭಾಷಣ ಮಾಡುವ ಪ್ರಧಾನಿ ಮೋದಿ ದೇಶದ ಕ್ಷಮೆ ಯಾಚಿಸಲಿ ; ಹತಾಶ ಮೋದಿ ಏನೇನೋ ಮಾತನಾಡುತ್ತಿದ್ದಾರೆ
Team Udayavani, Apr 24, 2024, 7:10 AM IST
ಬೆಂಗಳೂರು: ಪ್ರಚೋದನಕಾರಿ ಭಾಷಣ ಮಾಡುತ್ತಿರುವ ಪ್ರಧಾನಿ ಮೋದಿ ದೇಶದ ಕ್ಷಮೆ ಯಾಚಿಸಬೇಕು. ಸಮಾಜ ಒಡೆಯುವ ಕೆಲಸಕ್ಕೆ ಕೈ ಹಾಕಬಾರದು. ಸಂಪತ್ತು ಹಂಚಿಕೆ ಮಾಡುತ್ತೇವೆ ಎಂದು ನಾವು ಎಲ್ಲಿ ಹೇಳಿದ್ದೇವೆ? ಹತಾಶರಾಗಿರುವ ಪ್ರಧಾನಿ ಏನೇನೋ ಮಾತನಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ “ಉದಯವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿ, ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಒಕ್ಕೂಟ ಎಲ್ಲ ರಂಗಗಳಲ್ಲೂ ವಿಫಲವಾಗಿರುವುದರಿಂದ ಸರಕಾರದ ವಿರುದ್ಧ ಜನಾಕ್ರೋಶ “ಗುಪ್ತ ಗಾಮಿನಿ’ಯಂತಿದೆ. 3ನೇ ಬಾರಿಗೆ ಮೋದಿ ಮತ್ತು ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಐಎನ್ಡಿಐಎ ಒಕ್ಕೂಟ ತಡೆಯಲಿದೆ ಎಂದು ಹೇಳಿದರು.
ಸಂದರ್ಶನದ ಪೂರ್ಣ ಪಾಠ ಇಲ್ಲಿದೆ…
ಕಾಂಗ್ರೆಸ್ ಪ್ರಣಾಳಿಕೆ ಕುರಿತು ಬಿಜೆಪಿ ಅದರಲ್ಲೂ ವಿಶೇಷವಾಗಿ ಪ್ರಧಾನಿ ಮೋದಿ ಕಟುವಾಗಿ ಟೀಕಿಸಿದ್ದಾರಲ್ಲ?
ಸಂಪತ್ತು ಹಂಚಿಕೆ ಮಾಡುತ್ತೇವೆಂದು ಎಲ್ಲಿ ಹೇಳಿದ್ದೇವೆ? ಜಾತಿ ಗಣತಿ ಮಾಡಿಸಿ ಪ್ರತಿಯೊಬ್ಬರ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿ ತಿಳಿದು ಕಲ್ಯಾಣ ಕಾರ್ಯಕ್ರಮ ರೂಪಿಸುತ್ತೇವೆಂದು ಹೇಳಿದ್ದೇವೆ. ತಲಾದಾಯ ತಿಳಿದು ನೀತಿ ರೂಪಿಸಲು ಸಾಧ್ಯವಾಗುತ್ತದೆ.
ಪ್ರಧಾನಿ ನೀಡಿರುವ ಹೇಳಿಕೆಗಳು ಅವರ ಹತಾಶೆಯನ್ನು ತೋರಿಸುತ್ತವೆ. ದ್ವೇಷ ಭಾಷಣ, ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿರುವ ಪ್ರಧಾನಿ ದೇಶದ ಜನರ ಕ್ಷಮೆ ಯಾಚಿಸಬೇಕು ಇಲ್ಲವೇ ಹೇಳಿದ್ದು ತಪ್ಪಾಯಿತೆಂದು ವಿಷಾದ ವ್ಯಕ್ತಪಡಿಸಬೇಕು. ಸಮಾಜ ಒಡೆಯುವ ಕೆಲಸಕ್ಕೆ ಕೈ ಹಾಕಬೇಡಿ ಎಂದು ಚುನಾವಣ ಆಯೋಗ ಪ್ರಧಾನಿಗೆ ಏಕೆ ಹೇಳುವುದಿಲ್ಲ? ಆಯೋಗ ಎಲ್ಲರನ್ನೂ ಸಮನಾಗಿ ಕಾಣಬೇಕು.
ಎಐಸಿಸಿ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆ ಎದುರಿಸುತ್ತಿದ್ದೀರಿ, ಕರ್ನಾಟಕ ಸಹಿತ ದೇಶದಲ್ಲಿ ವಾತಾವರಣ ಹೇಗಿದೆ?
ಮೊದಲ ಮತ್ತು 2ನೇ ಹಂತದ ಚುನಾವಣ ಕ್ಷೇತ್ರಗಳಲ್ಲಿ ಸಾಕಷ್ಟು ಕಡೆ ಪ್ರಚಾರಕ್ಕೆ ಹೋಗಿ ಬಂದಿದ್ದೇನೆ. ಹೋದ ಕಡೆಯಲೆಲ್ಲ ನಮಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ಒಳಗೊಳಗೆ ಆಕ್ರೋಶ ಇರುವುದು ಕಂಡುಬರುತ್ತಿದೆ. ಈ ಆಕ್ರೋಶವೇ ಐಎನ್ಡಿಐಎಯ ಶಕ್ತಿ. ಐಎನ್ಡಿಐಎಯು ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಬಲ್ಲುದು ಎಂಬುದು ಈಗ ಜನರಿಗೆ ಅರ್ಥವಾಗುತ್ತಿದೆ. ಈ ಸಲ ನಮ್ಮ ಒಕ್ಕೂಟ ಮೋದಿ ಮತ್ತು ಬಿಜೆಪಿಯನ್ನು ಅಧಿಕಾರಕ್ಕೆ ಬರುವುದನ್ನು ತಡೆಯುವುದು ಗ್ಯಾರಂಟಿ.
ಮಮತಾ ಬ್ಯಾನರ್ಜಿ ಸಹಿತ ಹಲವು ಕಡೆ ನಿಮ್ಮ ಸ್ನೇಹಿತರು ಒಕ್ಕೂಟದಿಂದ ಹಿಂದೆ ಸರಿದಿರುವುದು ಹಿನ್ನಡೆ ಅಲ್ಲವೇ?
ಪಶ್ಚಿಮಬಂಗಾಲದಲ್ಲಿ ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ಜತೆ ನಾವು ಬರುವುದು ಕಷ್ಟವಾಗುತ್ತದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರಿಂದ ಸೀಟು ಹಂಚಿಕೆಗೆ ಒಪ್ಪಲಿಲ್ಲ. ಕೆಲವು ವಿಷಯಗಳಲ್ಲಿ ಅವರದೇ ಆದ ನಿಲುವುಗಳು- ಭಿನ್ನಾಭಿಪ್ರಾಯಗಳು ಇದ್ದುದರಿಂದ ಮೈತ್ರಿ ಆಗಲಿಲ್ಲ. ಆದರೂ ಮಮತಾ ಅವರು ಈಗಲೂ ಐಎನ್ಡಿಐಎ ಜತೆಗಿದ್ದಾರೆ. ಫಲಿತಾಂಶದ ಬಳಿಕ ನಮ್ಮ ಜತೆಗೆ ಬರುತ್ತಾರೆ, ಇರುತ್ತಾರೆ.
ಇಷ್ಟಾದರೂ ಪ್ರಧಾನಿ ಅಭ್ಯರ್ಥಿಯನ್ನು ಏಕೆ ಘೋಷಿಸಲಿಲ್ಲ, ಒಮ್ಮತ ಮೂಡಲಿಲ್ಲವೇ?
ನಮ್ಮ ಒಕ್ಕೂಟದಲ್ಲಿ ಯಾವುದೇ ಕಾರಣದಿಂದಲೂ ಒಡಕು ಸೃಷ್ಟಿಯಾಗಬಾರದು, ಸದಾ ಒಗ್ಗಟ್ಟು ಇರಬೇಕೆಂಬ ಉದ್ದೇಶದಿಂದ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಿಲ್ಲ. 2024ರ ಲೋಕಸಮರ ಫಲಿತಾಂಶಕ್ಕೆ ಮುನ್ನವೇ ಘೋಷಿಸಿದರೆ ನಮ್ಮಲ್ಲಿ ಒಡಕು ಮೂಡಿ ಗುರಿ ತಲುಪಲು ಆಗುವುದಿಲ್ಲ. ಹೀಗಾಗಿ ಗುರಿ ತಲುಪಲು ಸಹನೆ ಮತ್ತು ಒಗ್ಗಟ್ಟು ಇರಬೇಕೆಂಬ ಉದ್ದೇಶದಿಂದ ಪ್ರಧಾನಿ ಅಭ್ಯರ್ಥಿ ವಿಚಾರದಲ್ಲಿ ಯಾರೂ ತಲೆಕೆಡಿಸಿಕೊಂಡಿಲ್ಲ, ಈಗ ನಮ್ಮ ಮುಂದಿರುವ ಗುರಿಯೆಂದರೆ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದು. ಮಿತ್ರ ಪಕ್ಷಗಳ ಜತೆ ಸೀಟು ಹೊಂದಾಣಿಕೆ ಮಾಡಿಕೊಂಡದ್ದರಿಂದ ಕಾಂಗ್ರೆಸ್ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕಾಯಿತು.
ಕಾಂಗ್ರೆಸ್ ಘೋಷಿಸಿರುವ 25 ಗ್ಯಾರಂಟಿಗಳ ಜಾರಿಗೆ ಸಂಪನ್ಮೂಲ ಕ್ರೋಡೀಕರಣ ಹೇಗೆ?
ಕರ್ನಾಟಕದಲ್ಲಿ 5 ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ, ಎಷ್ಟೇ ತೊಂದರೆಯಾದರೂ ಅವುಗಳನ್ನು ನಿಭಾಯಿಸಿಕೊಂಡು ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಅದೇ ರೀತಿ ಹಿಮಾಚಲಪ್ರದೇಶ, ತೆಲಂಗಾಣದಲ್ಲೂ ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ಈಗ ಇದನ್ನೇ ಬೇರೆ ರಾಜ್ಯಗಳು ನಿರೀಕ್ಷೆ ಮಾಡುತ್ತಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶದಲ್ಲಿ ಪಕ್ಷಕ್ಕೆ ತುಸು ಹಿನ್ನೆಡೆಯಾಗಿದ್ದರೂ ಈಗ ಉತ್ತಮ ಫಲಿತಾಂಶ ಬರುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ನಮ್ಮ ಗ್ಯಾರಂಟಿಗಳನ್ನು ಜನ ನಂಬಿದ್ದಾರೆ. ನಾವು ಕೊಟ್ಟಿರುವ ಗ್ಯಾರಂಟಿಗಳ ಜಾರಿಗೆ ಅಗತ್ಯವಿರುವ ಸಂಪನ್ಮೂಲ ಸಂಗ್ರಹ ಹೇಗೆ ಮಾಡಬಹುದು ಎಂಬುದರ ಬಗ್ಗೆ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಆ ಸಮಿತಿಯಲ್ಲಿ ಸಲ್ಮಾನ್ ಖುರ್ಷಿದ್, ಜೈರಾಮ್ ರಮೇಶ್ ಮತ್ತಿತರರು ಇದ್ದಾರೆ.
ಈ ಸಲದ ಚುನಾವಣ ವಿಷಯಗಳೇನು?
ನಿರುದ್ಯೋಗ, ಹಣದುಬ್ಬರ, ಕನಿಷ್ಠ ಬೆಂಬಲ ಬೆಲೆ ಸೇರಿ ರೈತರ ಸಮಸ್ಯೆ, ಪರಿಶಿಷ್ಟರು, ಮಹಿಳೆಯರ ಮೇಲಿನ ದೌರ್ಜನ್ಯಗಳು, ದ್ವೇಷ ಭಾಷಣ, ಸಂವಿಧಾನ ಬದಲಾವಣೆ ಮಾತುಗಳು, ಪ್ರಜಾಸತ್ತಾತ್ಮಕ ಸಂಸ್ಥೆಗಳ ಸ್ವಾಯತ್ತೆ ರದ್ದುಪಡಿಸಿ ದುರ್ಬಲಗೊಳಿಸಿರುವುದು, ನ್ಯಾಯಾಂಗದಲ್ಲಿ ಹಸ್ತಕ್ಷೇಪ, ಆಡಳಿತ ವೈಫಲ್ಯಗಳು ಹಾಗೂ ದುರಾಡಳಿತವನ್ನು ದೇಶದ ಜನರ ಮುಂದಿಡುತ್ತಿದ್ದೇವೆ.
ಈ ಬಾರಿ ಬಿಜೆಪಿ/ಎನ್ಡಿಎ 400 ಸ್ಥಾನ ಗೆಲ್ಲುತ್ತದೆ, ಕಾಂಗ್ರೆಸ್ ಕಳೆದ ಸಲ ಗೆದ್ದಿದ್ದ 57 ಸ್ಥಾನ ಉಳಿಸಿಕೊಳ್ಳಲಿ ನೋಡೋಣ ಎಂಬ ಸವಾಲಿದೆ, ಹೇಗೆ ಸ್ವೀಕರಿಸುತ್ತೀರಿ?
ದಿನೇದಿನೆ ಐಎನ್ಡಿಐಎ ಒಕ್ಕೂಟ ಬಲಿಷ್ಠ ಆಗುತ್ತಿರುವುದರಿಂದ ಅವರಿಗೆ ಹೊಟ್ಟೆ ಉರಿ ಬಂದಿದೆ. ಭ್ರಷ್ಟರು, ಇ.ಡಿ., ಸಿಬಿಐ ತನಿಖೆ ಎದುರಿಸುತ್ತಿರುವವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಅವರು ಸಾಚಾ ಇದ್ದರೆ ಭ್ರಷ್ಟರ ಮೇಲೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ. ಎಎಪಿ, ಟಿಎಂಸಿ ಮತ್ತಿತರ ಪಕ್ಷಗಳಿಂದ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ರೋಡ್ ಶೋ ಮಾಡುತ್ತಿದ್ದಾರೆ. ವಿವಿಧ ಪಕ್ಷಗಳಿಂದ ಇದುವರೆಗೆ 444 ಶಾಸಕರನ್ನು ಪಕ್ಷಾಂತರ ಮಾಡಿಸಿಕೊಂಡಿದ್ದಾರೆ. ಬಿಜೆಪಿ ಸೇರಿದ ಬಳಿಕ ಹಲವು ಸಚಿವರ ಸಹಿತ 23 ಮಂದಿಗೆ ವಿವಿಧ ಪ್ರಕರಣಗಳಲ್ಲಿ ಕ್ಲೀನ್ ಚಿಟ್ನೀಡಿದ್ದಾರೆ. ಫಲಿತಾಂಶ ಬರಲಿ, ಯಾರಿಗೆ ಎಷ್ಟು ಸೀಟು ಬರುತ್ತದೆ ಎಂಬುದು ಗೊತ್ತಾಗುತ್ತದೆ.
ಈ ಸಲ ಖರ್ಗೆ ಅವರು ಚುನಾವಣ ಕಣದಿಂದ ದೂರ ಉಳಿಯಲು ಕಾರಣ?
ಕಲಬುರಗಿ ನನಗೆ ಪ್ರೀತಿಪಾತ್ರವಾದ ಕ್ಷೇತ್ರ. ನನ್ನ 53 ವರ್ಷಗಳ ರಾಜಕೀಯ ಜೀವನದಲ್ಲಿ ಒಮ್ಮೆ ಮಾತ್ರ ಸೋತಿರುವೆ. ಎಐಸಿಸಿ ಅಧ್ಯಕ್ಷನಾಗಿ ನನಗೆ ನನ್ನದೇ ಆದ ಜವಾಬ್ದಾರಿಗಳಿವೆ. ಒಂದು ಕ್ಷೇತ್ರಕ್ಕೆ ಸೀಮಿತವಾಗಬಾರದೆಂಬ ಉದ್ದೇಶದಿಂದ ಸ್ಪರ್ಧಿಸಿಲ್ಲ. ಹಲವು ರಾಜ್ಯಗಳಲ್ಲಿ 40 ಪ್ರಚಾರ ಸಭೆಗಳನ್ನು ಮಾಡಿದ್ದೇನೆ. ದೇಶವ್ಯಾಪಿ ಪ್ರವಾಸ, ಪ್ರಚಾರ ಮಾಡಬೇಕಿದೆ. ನನಗೆ ಕೊಟ್ಟ ಜವಾಬ್ದಾರಿಗಳನ್ನು ಅತ್ಯಂತ ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ನಿರ್ವಹಿಸಿದ್ದೇನೆ. ನನ್ನ ಅಧಿಕಾರಾವಧಿಯಲ್ಲಿ ರಾಜ್ಯ – ದೇಶಕ್ಕೆ ಕೆಟ್ಟ ಹೆಸರು ತಂದಿಲ್ಲ. ರಾಜ್ಯಕ್ಕೆ ಗೌರವ ತಂದಿದ್ದೇನೆ. ನನ್ನ ಮೇಲೆ ಯಾವುದೇ ಕಳಂಕವೂ ಇಲ್ಲ.
- ಎಂ.ಎನ್. ಗುರುಮೂರ್ತಿ