Nijjar ಹತ್ಯೆ; ಶಂಕಿತರಿಬ್ಬರು ಕೆಲವೇ ವಾರಗಳಲ್ಲಿ ಕೆನಡಾ ಪೊಲೀಸರ ಬಲೆಗೆ: ವರದಿ
ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ತೀವ್ರ ಸ್ವರೂಪದಲ್ಲಿ ಹದಗೆಟ್ಟಿವೆ.
Team Udayavani, Dec 28, 2023, 7:19 PM IST
ಒಟ್ಟಾವಾ: ಜೂನ್ನಲ್ಲಿ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಮೇಲೆ ಮಾರಣಾಂತಿಕ ಗುಂಡಿನ ದಾಳಿ ನಡೆಸಿ ಹತ್ಯೆಗೈದ ಇಬ್ಬರನ್ನು ಕೆನಡಾ ಪೊಲೀಸರು ವಾರದೊಳಗೆ ಬಂಧಿಸಬಹುದು ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ದಿ ಗ್ಲೋಬ್ ಮತ್ತು ಮೇಲ್ ಪತ್ರಿಕೆಯ ಪ್ರಕಾರ, ಶಂಕಿತರು ಪ್ರಸ್ತುತ ಪೊಲೀಸ್ ಕಣ್ಗಾವಲಿನಲ್ಲಿದ್ದು ‘ಕೆಲವೇ ವಾರಗಳಲ್ಲಿ’ ಬಂಧಿಸುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಪತ್ರಿಕೆ ಉಲ್ಲೇಖಿಸಿದ ಮೂರು ಅನಾಮಧೇಯ ಮೂಲಗಳ ಪ್ರಕಾರ, ಇಬ್ಬರು ಶಂಕಿತ ಹಂತಕರು ನಿಜ್ಜರ್ ಹತ್ಯೆಯ ನಂತರ ಕೆನಡಾವನ್ನು ತೊರೆದಿಲ್ಲ ಮತ್ತು ತಿಂಗಳುಗಳಿಂದ ಪೊಲೀಸ್ ಕಣ್ಗಾವಲಿನಲ್ಲಿದ್ದಾರೆ.
ಜೂನ್ 18 ರಂದು ಸರ್ರೆ ನಗರದ ಗುರುದ್ವಾರದ ಹೊರಗೆ ಖಲಿಸ್ಥಾನಿ ಪ್ರತ್ಯೇಕತಾವಾದಿ ನಿಜ್ಜರ್ನ ಹತ್ಯೆಯಲ್ಲಿ ಭಾರತೀಯ ಏಜೆಂಟರ ‘ಸಂಭಾವ್ಯ’ ಪಾಲ್ಗೊಳ್ಳುವಿಕೆಯ ಬಗ್ಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಸೆಪ್ಟೆಂಬರ್ನಲ್ಲಿ ಆರೋಪ ಮಾಡಿದ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ತೀವ್ರ ಸ್ವರೂಪದಲ್ಲಿ ಹದಗೆಟ್ಟಿವೆ.