ಸಾಜಿತ್ ಪ್ರೇಮದಾಸಗೆ ಅಧ್ಯಕ್ಷ ಪಟ್ಟ? ಶ್ರೀಲಂಕಾ ಪ್ರಮುಖ ವಿಪಕ್ಷದ ಅಭ್ಯರ್ಥಿಯಾಗುವ ಸಾಧ್ಯತೆ
Team Udayavani, Jul 13, 2022, 6:30 AM IST
ಕೊಲಂಬೊ: ಶ್ರೀಲಂಕಾದ ರಾಜಧಾನಿ ಕೊಲಂಬೋದ ಸಂಸದರಾದ ಸಾಜಿತ್ ಪ್ರೇಮದಾಸ ಅವರನ್ನು ಅಧ್ಯಕ್ಷ ಪಟ್ಟಕ್ಕೆ ಕೂರಿಸಲು, ಶ್ರೀಲಂಕಾ ಸಂಸತ್ತಿನ ಪ್ರಮುಖ ವಿಪಕ್ಷವಾದ ಸಮಗಿ ಜನ ಬಲವೇಗಯಾ (ಎಸ್ಜೆಬಿ) ನಿರ್ಧರಿಸಿದೆ.
ಜು. 13ರಂದು ಹಾಲಿ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದ್ದು, ರಾಜೀನಾಮೆ ಸಲ್ಲಿಕೆಯಾದ ತತ್ಕ್ಷಣ ಅಧ್ಯಕ್ಷ ಸ್ಥಾನಕ್ಕೆ ಸಾಜಿತ್ ಅವರ ಹೆಸರನ್ನು ಶಿಫಾರಸು ಮಾಡಲು ಎಸ್ಜೆಬಿ ನಿರ್ಧರಿಸಿದೆ.
ಪಕ್ಷದ ಕಾರ್ಯದರ್ಶಿಯಾದ ರಂಜಿತ್ ಮದ್ದುಮ ಬಂಡಾರ ಅವರು ಈ ಕುರಿತಂತೆ ಪ್ರಸ್ತಾವನೆಯೊಂದನ್ನು ಸಿದ್ಧಪಡಿಸಿದ್ದು, ಅದಕ್ಕೆ ಪಕ್ಷದ ಅಧ್ಯಕ್ಷ ಫೀಲ್ಡ್ ಮಾರ್ಷಲ್ ಸರತ್ ಫೊನ್ಸೆಕಾ ನೇತೃತ್ವದ ಸಂಸದೀಯ ಸಮಿತಿಯು ಸಹಿ ಹಾಕಿದೆ ಎಂದು ಮೂಲಗಳು ತಿಳಿಸಿವೆ.
ಅಧ್ಯಕ್ಷರಾಗಿ ಚುನಾಯಿತರಾಗಲು 113 ಸಂಸದರ ಬೆಂಬಲ ಬೇಕು. ಸದ್ಯಕ್ಕೆ ಎಸ್ಜೆಪಿ ಪಕ್ಷವು 50 ಸಂಸದರನ್ನು ಹೊಂದಿದ್ದು, ಸಮಾನ ಮನಸ್ಕ ಇತರ ಪಕ್ಷಗಳ ಬೆಂಬಲ ಸಿಕ್ಕರೆ ಪ್ರೇಮದಾಸ ಅವರು ಅಧ್ಯಕ್ಷರಾಗುವ ಹಾದಿ ಸುಗಮವಾಗುತ್ತದೆ. ಸಾಜಿತ್ ಪ್ರೇಮದಾಸ ಅವರು, 2015ರಲ್ಲಿ ಮೈತಿಪಾಲ ಸಿರಿಸೇನಾ ಅವರ ಅಧ್ಯಕ್ಷರಾಗಿದ್ದಾಗ ಅವರ ಮಂತ್ರಿಮಂಡಲದಲ್ಲಿ ವಸತಿ ಸಚಿವ ರಾಗಿ ಕಾರ್ಯನಿರ್ವಹಿಸಿದ್ದರು. ಇವರು, ಶ್ರೀಲಂಕಾದ 3ನೇ ಅಧ್ಯಕ್ಷರಾಗಿದ್ದ ದಿ. ರಣಸಿಂಘೆ ಪ್ರೇಮದಾಸ ಅವರ ಪುತ್ರ.
ಬಾಸಿಲ್ ರಾಜಪಕ್ಸಗೆ ಮುಜುಗರ: ಶ್ರೀಲಂಕಾದ ಆರ್ಥಿಕ ದುಸ್ಥಿತಿ ಹಾಗೂ ಇತ್ತೀಚೆಗೆ ಸಂಭವಿಸಿದ ಜನರ ದಂಗೆ ಘಟನೆಗಳಿಂದ ವಿಚಲಿತರಾಗಿರುವ ಅಲ್ಲಿನ ಮಾಜಿ ಹಣಕಾಸು ಸಚಿವ ಬಾಸಿಲ್ ರಾಜಪಕ್ಸ ಅವರು ದೇಶ ತೊರೆದು ದುಬಾೖಗೆ ಹೋಗಲು ಮಾಡಿದ ಪ್ರಯತ್ನ ವ್ಯರ್ಥವಾಗಿದೆ.
ಹಾಲಿ ಅಧ್ಯಕ್ಷ ಗೋಟಬಯ ರಾಜಪಕ್ಸ ಸಹೋದರರಾದ ಬಾಸಿಲ್, ದುಬಾೖಗೆ ತೆರಳುವ ಉದ್ದೇಶದಿಂದ ಕುಟುಂಬ ಸಮೇತ ಶುಕ್ರವಾರ ಕೊಲಂಬೊ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ ಅವರನ್ನು ಗುರುತು ಹಿಡಿದ ಜನ ಅವರನ್ನು ತಡೆದು ಗಲಾಟೆ ಮಾಡಿದ್ದಾರೆ. ಹಾಗಾಗಿ, ಬಾಸಿಲ್ವುನೆಗೆ ವಾಪಸ್ ಹೋಗಿದ್ದಾರೆ. ಮತ್ತೂಂದೆಡೆ, ರಾಷ್ಟ್ರಾಧ್ಯಕ್ಷ ರಾಜಪಕ್ಸ ಅವರು ಶ್ರೀಲಂಕಾದಿಂದ ದುಬೈಗೆ ಹೋಗಲು ವಿಫಲರಾಗಿದ್ದಾರೆ. ಏರ್ಬೇಸ್ನಿಂದ ಹೊರಡುವಾಗ ಅಲ್ಲಿನ ಸಿಬಂದಿಯು ತೀವ್ರವಾಗಿ ವಿರೋಧಿಸಿದ್ದರಿಂದ ಪ್ರಯಾಣ ರದ್ದಾಯಿತು ಎನ್ನಲಾಗಿದೆ.