ಅಮೆರಿಕದಲ್ಲಿ ತಾಲಿಬಾನ್ ತಾಪ ವೃದ್ಧಿ
Team Udayavani, Aug 17, 2021, 6:30 AM IST
ವಾಷಿಂಗ್ಟನ್/ಕಾಬೂಲ್/ಹೊಸದಿಲ್ಲಿ: ಅಫ್ಘಾನಿಸ್ಥಾನ ಉಗ್ರರ ಕೈವಶವಾಗುತ್ತಲೇ, ಅಮೆರಿಕದಲ್ಲಿ ಬೈಡೆನ್ ಸರಕಾರದ ವಿರುದ್ಧ ಟೀಕಾ ಪ್ರಹಾರಗಳು ಶುರುವಾಗಿವೆ. ಯುದ್ಧಗ್ರಸ್ತ ರಾಷ್ಟ್ರದಿಂದ ಸೇನೆಯನ್ನು ವಾಪಸ್ ಪಡೆಯುವ ಮೂಲಕ ಜಾಗತಿಕ ಮಟ್ಟದಲ್ಲಿ ದೇಶದ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ. ಸದ್ಯ ಉಂಟಾಗಿರುವ ಸ್ಥಿತಿಗೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದ ವೇಳೆ ಕೈಗೊಂಡಿದ್ದ ನಿರ್ಧಾರಗಳೇ ಕಾರಣ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕೆಲ ದಿನಗಳ ಹಿಂದೆ ಆರೋಪಿಸಿದ್ದರು.
ಅದಕ್ಕೆ ತಿರುಗೇಟು ನೀಡಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಲಿ ಸರಕಾರದ ನಿರ್ಧಾರದಿಂದ ದೇಶದ ಇತಿಹಾಸ ದಲ್ಲಿಯೇ ಅತ್ಯಂತ ಹೀನಾಯ ಸೋಲು ಉಂಟಾಗಿದೆ. ಅಫ್ಘಾನಿಸ್ಥಾನಕ್ಕೆ ಸಂಬಂಧಿಸಿದಂತೆ ಹಾಲಿ ಅಧ್ಯಕ್ಷರು ಕೈಗೊಂಡಿರುವ ನಿರ್ಧಾರ ಮಹತ್ವವಾದದ್ದು ಎಂದು ಲೇವಡಿ ಮಾಡಿದ್ದಾರೆ. ಗಮನಾರ್ಹ ಅಂಶವೆಂದರೆ, ತಾಲಿಬಾನ್ ಉಗ್ರರ ಪ್ರಾಬಲ್ಯ ಹೆಚ್ಚುತ್ತಿದ್ದಂತೆ ಶ್ವೇತ ಭವನದಿಂದ ಯಾವುದೇ ರೀತಿಯ ಹೇಳಿಕೆ ಹೊರಬಿದ್ದಿಲ್ಲ. ವಿಶ್ವಸಂಸ್ಥೆಯಲ್ಲಿ ಅಮೆರಿಕದ ಮಾಜಿ ರಾಯಭಾರಿ, ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಕೂಡ “ಇದೊಂದು ಬೈಡೆನ್ ಸರಕಾರದ ದೊಡ್ಡ ವೈಫಲ್ಯ’ ಎಂದು ಟೀಕಿಸಿದ್ದಾರೆ. ನೀವು ಏನು ಮಾಡುತ್ತಿದ್ದೀರಿ ಎನ್ನುವುದು ಮುಖ್ಯವಲ್ಲ. ನಿರ್ಧಾರವನ್ನು ಯಾವ ರೀತಿ ಅನುಷ್ಠಾನ ಮಾಡುತ್ತೀರಿ ಎನ್ನುವುದು ಪ್ರಧಾನ ಎಂದಿದ್ದಾರೆ ನಿಕ್ಕಿ ಹ್ಯಾಲೆ.
ಅಚ್ಚರಿಯಲ್ಲಿ ಬೈಡೆನ್ ಸರಕಾರ: ಹಂತ ಹಂತವಾಗಿ ಸೇನೆ ವಾಪಸಾತಿ ಮಾಡುತ್ತಿರುವಂತೆಯೇ, ಅಫ್ಘಾನಿಸ್ಥಾನದಲ್ಲಿ ಉಗ್ರರು ಮೇಲುಗೈ ಸಾಧಿಸಿದ್ದು ಹೇಗೆ ಎನ್ನುವುದು ಬೈಡನ್ ಸರಕಾರಕ್ಕೆ ಅಚ್ಚರಿ ಮೂಡಿಸಿದೆ. ಜತೆಗೆ ದೇಶದ ಒಳಗೆಯೇ ಸೇನೆ ವಾಪಸಾತಿ ನಿರ್ಧಾರದ ಬಗೆ ಟೀಕಾ ಪ್ರಹಾರಗಳೂ ಕೂಡ ಬೈಡೆನ್ ಅವರಿಗೆ ಸವಾಲಿನ ದಿನಗಳನ್ನು ತಂದೊಡ್ಡಲಿವೆ ಎಂದು ಹೇಳಲಾಗುತ್ತಿದೆ. ಸಿಎನ್ಎನ್ ಜತೆಗೆ ಮಾತನಾಡಿದ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್ “ಅಫ್ಘಾನ್ ಸೇನೆ ದೇಶವನ್ನು ರಕ್ಷಿಸಲು ಸಾಮರ್ಥ್ಯ ಹೊಂದಿಲ್ಲ. ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಕ್ಷಿಪ್ರವಾಗಿ ಉಗ್ರರು ಪ್ರಾಬಲ್ಯ ಸಾಧಿಸಿದ್ದಾರೆ’ ಎಂದರು. ಬೈಡೆನ್ ಅವರು ಕ್ಯಾಂಪ್ ಡೇವಿಡ್ನಲ್ಲಿ ಇದ್ದು ದಿನವಹಿ ಬೆಳವಣಿಗೆಗಳನ್ನು ಪಡೆಯುತ್ತಿದ್ದಾರೆ.
ತಮ್ಮವರನ್ನು ಕರೆಸಿಕೊಳ್ಳಲು ಯತ್ನ : ಯು.ಕೆ., ಆಸ್ಟ್ರೇಲಿಯಾ, ಸ್ವೀಡನ್, ನ್ಯೂಜಿಲೆಂಡ್, ಜರ್ಮನಿ ಸೇರಿದಂತೆ ಹಲವು ರಾಷ್ಟ್ರಗಳ ಸರಕಾರಗಳು ಯುದ್ಧಗ್ರಸ್ತ ರಾಷ್ಟ್ರದಲ್ಲಿರುವ ತಮ್ಮ ತಮ್ಮ ರಾಜತಾಂತ್ರಿಕ ಸಿಬಂದಿಯನ್ನು ವಾಪಸ್ ಕರೆಯಿಸಿಕೊಳ್ಳಲು ಶತ ಪ್ರಯತ್ನ ನಡೆಸಿವೆ. ಕಾಬೂಲ್ನಲ್ಲಿ ಕರ್ಫ್ಯೂ ಘೋಷಣೆ ಮಾಡಿರುವುದು ಎಲ್ಲ ರಾಷ್ಟ್ರಗಳಿಗೆ ತೊಂದರೆಯಾಗಿದೆ.
ಬಾಂಧವ್ಯಕ್ಕೆ ಸಿದ್ಧವೆಂದ ಚೀನ :
ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಉಗ್ರರ ನೇತೃತ್ವದ ಆಡಳಿತದ ಜತೆಗೆ ಬಾಂಧವ್ಯ ಹೊಂದಲು ಸಿದ್ಧ ಎಂದು ಚೀನ ವಿದೇಶಾಂಗ ಸಚಿವಾಲಯ ಸೋಮವಾರ ತಿಳಿಸಿದೆ. ತಾಲಿಬಾನ್ ವತಿಯಿಂದಲೂ ಕೂಡ ನಮ್ಮ ಜತೆಗೆ ಮಿತೃತ್ವ ಹೊಂದಲು ಪೂರಕ ಸ್ಪಂದನೆ ವ್ಯಕ್ತವಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಬೀಜಿಂಗ್ನಲ್ಲಿ ತಿಳಿಸಿದ್ದಾರೆ. ಉಗ್ರ ಸಂಘಟನೆ ಎಲ್ಲರನ್ನೂ ಒಳಗೊಂಡ ಸರಕಾರವನ್ನು ರಚಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯುದ್ಧಗ್ರಸ್ತ ರಾಷ್ಟ್ರದಲ್ಲಿರುವ ಚೀನೀಯರನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ಕಳೆದ ತಿಂಗಳಷ್ಟೇ ಬೀಜಿಂಗ್ನಲ್ಲಿ ಉಗ್ರರ ಸಂಘಟನೆಯ ನಿಯೋಗ ವಿದೇಶಾಂಗ ಸಚಿವ ವಾಂಗ್ ಇ ಅವರನ್ನು ಭೇಟಿಯಾಗಿತ್ತು.
ಸುರಕ್ಷೆಗೆ ಕ್ರಮ: ವಿದೇಶಾಂಗ ಇಲಾಖೆ :
ಯುದ್ಧಗ್ರಸ್ತ ರಾಷ್ಟ್ರದಲ್ಲಿನ ಬೆಳವಣಿಗೆ ಬಗ್ಗೆ ಸೋಮವಾರ ಪ್ರತಿಕ್ರಿಯೆ ನೀಡಿದ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಗಚಿ ಭಾರತೀಯರ ಸುರಕ್ಷತೆ ಬಗ್ಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಆ ದೇಶದಲ್ಲಿ ಉಂಟಾಗುತ್ತಿರುವ ಬೆಳವಣಿಗೆ ಬಗ್ಗೆ ನಿಗಾ ಇರಿಸಿದ್ದೇವೆ. ಅಲ್ಲಿ ಇರುವ ಸಿಖ್ ಮತ್ತು ಹಿಂದೂ ಸಮುದಾಯದ ಮುಖಂಡರ ಜತೆ ಸರಕಾರ ಮಾತುಕತೆ ನಡೆಸಿದೆ. ಅಫ್ಘಾನಿಸ್ಥಾನದಲ್ಲಿನ ಭದ್ರತಾ ಪರಿಸ್ಥಿತಿ ನಿಜಕ್ಕೂ ಕಳವಳಕಾರಿಯಾಗಿದೆ ಎಂದು ಹೇಳಿದ್ದಾರೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಯಾರನ್ನು ಸಂಪರ್ಕಿಸಬೇಕು ಎಂಬ ಬಗ್ಗೆ ದೂರವಾಣಿ ಸಂಖ್ಯೆಗಳನ್ನು ನೀಡಲಾಗಿದೆ ಎಂದು ಬಗಚಿ ವಿವರಿಸಿದರು.
ತಂದೆಯೇ ದಾಳಿಗೆ ಕುಮ್ಮಕ್ಕು ಕೊಟ್ಟರು :
ಯುದ್ಧಗ್ರಸ್ತ ರಾಷ್ಟ್ರದ ಘಜ್ನಿ ಪ್ರಾಂತ್ಯದ 33 ವರ್ಷದ ಖಟೀರಾ ಎಂಬ ಮಹಿಳೆ ತಾಲಿಬಾನಿಗಳ ಕ್ರೂರತೆಯ ಝಲಕ್ ಅನ್ನು ವಿವರವಾಗಿ ಬಹಿರಂಗಪಡಿಸಿದ್ದಾರೆ. ತಾಲಿಬಾನ್ ಉಗ್ರ ಸಂಘಟನೆಯಲ್ಲಿದ್ದ ಖಟೀರಾ ಅವರ ತಂದೆಯೇ ಅವರ ಮೇಲೆ ದಾಳಿಗೆ ಕುಮ್ಮಕ್ಕು ನೀಡಿದ್ದರಂತೆ. 2020ರ ನವೆಂಬರ್ನಿಂದ ಚಿಕಿತ್ಸೆಗಾಗಿ ಹೊಸದಿಲ್ಲಿಯಲ್ಲಿಯೇ ಇದ್ದಾರೆ. ಗಮನಾರ್ಹ ಅಂಶವೆಂದರೆ ಖಟೀರಾ ಪೊಲೀಸ್ ಇಲಾಖೆಯಲ್ಲಿ ಉದ್ಯೋಗಿಯೂ ಆಗಿದ್ದರು. ಕರ್ತವ್ಯದಿಂದ ಮರಳುತ್ತಿದ್ದ ವೇಳೆ ಮೂವರು ಉಗ್ರರು ಅವರ ಮೇಲೆ ದಾಳಿ ನಡೆಸಿದ್ದರು. ಅಲ್ಲಿ ಸಾಮಾನ್ಯರನ್ನು ತುಂಡರಿಸಿ ನಾಯಿಗಳಿಗೆ ನೀಡುತ್ತಾರೆ ಎಂದು ವಿವರಿಸಿದ್ದಾರೆ. ತಮ್ಮ ಬಳಿ ಹಣ ಇದ್ದ ಕಾರಣ ಭಾರತಕ್ಕೆ ಬರುವಂತಾಯಿತು ಎಂದು ಹೇಳಿದ ಅವರು, ಮಹಿಳೆಯರು ಪುರುಷ ಡಾಕ್ಟರ್ ಬಳಿಗೆ ಹೋಗಲು ಅವಕಾಶ ನೀಡುತ್ತಿಲ್ಲ. ಜತೆಗೆ ಮಹಿಳೆಯರು ಕೆಲಸ ಮಾಡುವಂತಿಲ್ಲ ಮತ್ತು ಶಿಕ್ಷಣ ಪಡೆಯುವಂತೆ ಇಲ್ಲ. ಉಗ್ರರ ವಿರುದ್ಧ ಮಾತನಾಡಿದವರು ರಸ್ತೆಯಲ್ಲಿಯೇ ಬಿದ್ದು ಸಾಯುತ್ತಾರೆ ಎಂದು “ನ್ಯೂಸ್18′ ಗೆ ವಿವರಿಸಿದ್ದಾರೆ.
ಹೊಟೇಲ್ನಲ್ಲಿ ಆಶ್ರಯ ಪಡೆದೆ :
ಆಘ್ಘನ್ನಲ್ಲಿ ಉಂಟಾಗಿರುವ ತೊಂದರೆಯ ಬಗ್ಗೆ ಭಾರತೀಯ ಪ್ರಜೆ ಗುರು ನಾಯ್ಕ ಎಂಬವರು ವಿಡಿಯೋ ಸಂದೇಶದ ಮೂಲಕ ವಿವರಿಸಿದ್ದಾರೆ. ಎನ್ಜಿಒ ಒಂದಕ್ಕಾಗಿ ಆರು ವರ್ಷಗಳಿಂದ ಕೆಲಸ ಮಾಡುವ ತಾವು, ಕಾಬೂಲ್ ವಿಮಾನ ನಿಲ್ದಾಣದ ಸಮೀಪ ಇರುವ ಹೊಟೇಲ್ ಒಂದರಲ್ಲಿ ಆಶ್ರಯ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ. ಭಾರತೀಯ ರಾಯಭಾರ ಕಚೇರಿಯ ಸೂಚನೆಯ ಅನ್ವಯ ಹೊಸದಿಲ್ಲಿಗೆ ಆಗಮಿಸಲು ಟಿಕೆಟ್ ಕಾಯ್ದಿರಿಸಿದ್ದೆ. ಆದರೆ ಬದಲಾದ ಪರಿಸ್ಥಿತಿಯಲ್ಲಿ ವಿಮಾನಗಳ ಪ್ರಯಾಣ ರದ್ದಾಗಿದೆ. ಕೇಂದ್ರ ಸರಕಾರ ಭಾರತೀಯರನ್ನು ಪಾರು ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ವಿಡಿಯೋ ಸಂದೇಶದಲ್ಲಿ ಒತ್ತಾಯಿಸಿದ್ದಾರೆ. ತಮ್ಮ ಜತೆಗೆ ಇನ್ನೂ ಹಲವರು ಏನು ಮಾಡಬೇಕು ಎಂದು ತೋಚದಂಥ ಸ್ಥಿತಿಯಲ್ಲಿದ್ದಾರೆ ಎಂದು ಭೀಕರತೆಯನ್ನು ವಿವರಿಸಿದ್ದಾರೆ.
ಗುರುದ್ವಾರದಲ್ಲಿ ಹಲವರ ಆಶ್ರಯ :
ಹಿಂದೂಗಳು ಮತ್ತು ಸಿಖ್ ಸಮುದಾಯದ 50 ಮಂದಿ ಹಿಂದೂಗಳು ಮತ್ತು 270ಕ್ಕಿಂತಲೂ ಅಧಿಕ ಮಂದಿ ಸಿಖ್ ಸಮುದಾಯದವರು ಕಾಬೂಲ್ನ ಕರ್ತೆ ಪರ್ವಾನ್ ಗುರುದ್ವಾರದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ ಅಧ್ಯಕ್ಷ ಮಂಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ. ಕಾಬೂಲ್ನಲ್ಲಿರುವ ಗುರುದ್ವಾರ ಸಮಿತಿಯ ಮುಖ್ಯಸ್ಥರ ಜತೆಗೆ ನಿಕಟ ಸಂಪರ್ಕದಲ್ಲಿ ಇರುವುದಾಗಿಯೂ ತಿಳಿಸಿದ್ದಾರೆ. ತಾಲಿಬಾನ್ ಸಂಘಟನೆಯ ಮುಖಂಡರು ಅವರನ್ನು ಭೇಟಿಯಾಗಿದ್ದಾರೆ ಮತ್ತು ಅವರಿಗೆ ತೊಂದರೆ ನೀಡದೆ, ರಕ್ಷಣೆ ಕೊಡವುದಾಗಿ ಹೇಳಿದ್ದಾರೆ ಎಂದು ಸಿರ್ಸಾ ತಿಳಿಸಿದ್ದಾರೆ. ಎರಡೂ ಸಮುದಾಯಗಳ ಜನರು ಅಲ್ಲಿನ ರಾಜಕೀಯ ಸಂದಿಗ್ಧ ಪರಿಸ್ಥಿತಿಯ ಹೊರತಾಗಿಯೂ ನೆಮ್ಮದಿಯಿಂದ ಜೀವನ ಮಾಡಲು ಸಾಧ್ಯವಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಇದುವೇ ನಮ್ಮ ಮಾತೃಭೂಮಿ :
ಭಾರತವೇ ನಮ್ಮ ಮಾತೃಭೂಮಿ. ಇದನ್ನು ಬಿಟ್ಟು ನಾವೆಲ್ಲಿಗೆ ಹೋಗಬೇಕು? ಹೀಗೆಂದು ಪ್ರಶ್ನೆ ಮಾಡಿದ್ದು ಆ ದೇಶದಿಂದ ವಾಪಸಾಗಿರುವ ಅಭಿಷೇಕ್. ಅವರು ಸೋಲಾರ್ ಪ್ಯಾನೆಲ್ ಅಳವಡಿಸುವ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. “ವಿಮಾನ ನಿಲ್ದಾಣಕ್ಕೆ ಬರಲು ತುಂಬ ಹೊತ್ತಾಯಿತು. ತಾಲಿಬಾನ್ ಉಗ್ರರನ್ನು ನಾವು ನೋಡದೇ ಇದ್ದರೂ, ಅವರು ಎಲ್ಲವನ್ನೂ ವಶಪಡಿಸಿಕೊಂಡಿದ್ದಾರೆ ಎಂಬ ಮಾಹಿತಿ ಗೊತ್ತಾಯಿತು’ ಎಂದರು. ಮತ್ತೂಬ್ಬ ಪ್ರಯಾಣಿಕರಾದ ಸೋಹಿ° ಸರ್ಕಾರ್ ಪ್ರತಿಕ್ರಿಯೆ ನೀಡಿ, “ವಿಮಾನಗಳಲ್ಲಿ ಸುರಕ್ಷಿತ ಸ್ಥಳಕ್ಕೆ ತೆರಳಲು ಜನರು ಗುಂಪಾಗಿ ಬರುತ್ತಿದ್ದಾರೆ. ಎಲ್ಲಾ ವಿಮಾನಗಳ ಟಿಕೆಟ್ಗಳು ಭರ್ತಿಯಾಗಿವೆ’ ಎಂದಿದ್ದಾರೆ. ಸಯ್ಯದ್ ಹಸನ್ ಪಖೀ¤ವಾಲ್ ಮತ್ತು ಅಬ್ದುಲ್ ಖಾದರ್ ಝಝೈ ಎಂಬ ಇಬ್ಬರು ಸಂಸದರೂ ಭಾನುವಾರ ಸಂಜೆ ಕಾಬೂಲ್ನಿಂದ ಹೊಸದಿಲ್ಲಿಗೆ ಆಗಮಿಸಿದ್ದರು.
ಯುದ್ಧ ಮುಕ್ತಾಯ :
ರಾಜಧಾನಿ ಕಾಬೂಲ್ ಅನ್ನು ವಶಪಡಿಸಿಕೊಳ್ಳುತ್ತಲೇ ತಾಲಿಬಾನ್ ಉಗ್ರ ಸಂಘಟನೆ “ಅಫ್ಘಾನಿಸ್ಥಾನದಲ್ಲಿನ ಯುದ್ಧ ಕೊನೆಗೊಂಡಿದೆ’ ಎಂದು ಘೋಷಣೆ ಮಾಡಿದೆ. “20 ವರ್ಷಗಳ ತ್ಯಾಗಕ್ಕೆ ಮನ್ನಣೆ ಸಿಕ್ಕಿದೆ. ದೇಶದಲ್ಲಿದ್ದ ವಿದೇಶಿ ಶಕ್ತಿಗಳು ಹೊರಹೋಗಿವೆ. ಈ ದಿನ ಅತ್ಯಂತ ಮಹತ್ವದ್ದು. ದೇಶದಲ್ಲಿ ಯಾವ ರೀತಿಯ ಸರಕಾರ ಇರಬೇಕು ಎನ್ನುವುದನ್ನು ಶೀಘ್ರವೇ ನಿರ್ಧರಿ ಸಲಾಗುತ್ತದೆ ಎಂದಿದೆ. ಭಾನುವಾರ ರಾತ್ರಿಯೇ ಅಧ್ಯಕ್ಷರ ಅರಮನೆ, ಭಾರತ ನಿರ್ಮಿತ ಸಂಸತ್ ಭವನ ಸೇರಿದಂತೆ ಹಲವು ಪ್ರಮುಖ ಸರ್ಕಾರಿ ಕಟ್ಟಡಗಳು ಉಗ್ರರ ವಶವಾಗಿವೆ.
ಜನರು ಭೀತಿಗೆ ಒಳಗಾಗಿದ್ದಾರೆ: ತಿರುಮೂರ್ತಿ :
ಅಫ್ಘಾನಿಸ್ಥಾನದ ಮಹಿಳೆಯರು ಮತ್ತು ಮಕ್ಕಳು ಹೆದರಿಕೆಯಲ್ಲಿಯೇ ಬದುಕುವಂತಾಗಿದೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ರಾಯಭಾರಿ ಟಿ.ಎಸ್.ತಿರುಮೂರ್ತಿ ಆತಂಕ ವ್ಯಕ್ತಪಡಿಸಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಮಾತನಾಡಿದ ಅವರು, ಅಫ್ಘಾನ್ನ ನೆರೆಯ ದೇಶವಾಗಿರುವ ನಾವು, ಅಲ್ಲಿನ ಸ್ಥಿತಿಯ ಬಗ್ಗೆ ಕಳವಳ ಹೊಂದಿದ್ದೇವೆ. ಈ ಬಿಕ್ಕಟ್ಟು ಉಂಟಾಗುವ ಮೊದಲು ಭಾರತ 34 ಪ್ರಾಂತ್ಯಗಳೊಂದಿಗೆ ಅಭಿವೃದ್ಧಿ ಯೋಜನೆಗಳನ್ನು ಜಾರಿ ಮಾಡುವ ಹೊಣೆಯನ್ನು ಹೊತ್ತುಕೊಂಡಿತ್ತು. ಆ ದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಂಬಂಧಿತರು ಸೂಕ್ತ ಕ್ರಮಕ್ಕೆ ಮುಂದಾಗಬೇಕಾಗಿದೆ ಎಂದು ತಿರುಮೂರ್ತಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ
Road Mishap; ಬೈಕ್-ಪಿಕ್ ಅಪ್ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು
Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ