ಪಶ್ಚಿಮಬಂಗಾಳ: ಕೂಚ್ ಬೆಹರ್ ನಲ್ಲಿ ಹಿಂಸಾಚಾರ, ಭದ್ರತಾ ಪಡೆ ಗುಂಡಿನ ದಾಳಿಗೆ ಐವರ ಸಾವು
ಗುಂಡಿನ ದಾಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ವರದಿ ನೀಡುವಂತೆ ಚುನಾವಣಾ ಆಯೋಗ ಸೂಚಿಸಿದೆ.
Team Udayavani, Apr 10, 2021, 12:49 PM IST
ಕೋಲ್ಕತಾ(ಸಿಟಾಲ್ಕುಚಿ):ಪಶ್ಚಿಮಬಂಗಾಳದ 44 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಬಿರುಸುಗೊಂಡಿರುವ ನಡುವೆಯೇ ಸ್ಥಳೀಯರ ಗುಂಪೊಂದು ಹಲ್ಲೆ ನಡೆಸಲು ಮುಂದಾದ ಪರಿಣಾಮ ಸಿಐಎಸ್ ಎಫ್ (ಕೇಂದ್ರ ಕೈಗಾರಿಕಾ ಭದ್ರತಾ ಪಡೆ) ಗುಂಡಿನ ದಾಳಿ ನಡೆಸಿದ್ದು, ಐವರು ಸಾವನ್ನಪ್ಪಿರುವ ಘಟನೆ ಕೂಚ್ ಬೆಹರ್ ಜಿಲ್ಲೆಯಲ್ಲಿ ಶನಿವಾರ(ಏಪ್ರಿಲ್ 10) ನಡೆದಿದೆ.
ಸಿಟಾಲ್ಕುಚಿ ಮತಗಟ್ಟೆಯಲ್ಲಿ ಮತದಾನ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಈ ಘಟನೆ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಸಿಐಎಸ್ ಎಫ್ ಯೋಧರ ಬಳಿ ಇದ್ದ ರೈಫಲ್ಸ್ ಕಸಿದುಕೊಂಡು ಹಲ್ಲೆ ನಡೆಸಲು ಯತ್ನಿಸಿದಾಗ ಸಿಐಎಸ್ ಎಫ್ ಗುಂಡಿನ ದಾಳಿ ನಡೆಸಿದ್ದು, ಇದರಲ್ಲಿ ಐವರು ಸಾವನ್ನಪ್ಪಿರುವುದಾಗಿ ವಿವರಿಸಿದೆ.
ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಗಲಭೆ ಮತ್ತು ಗುಂಡಿನ ದಾಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ವರದಿ ನೀಡುವಂತೆ ಚುನಾವಣಾ ಆಯೋಗ ಸೂಚಿಸಿದೆ. ಇಂದು ಬೆಳಗ್ಗೆ ಕೂಚ್ ಬೆಹರ್ ಜಿಲ್ಲೆಯಲ್ಲಿ ಮತಗಟ್ಟೆ ಹೊರಭಾಗದಲ್ಲಿ ಮತದಾರನೊಬ್ಬನನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ನಡೆದಿತ್ತು.
ಪಶ್ಚಿಮಬಂಗಾಳದ 44 ವಿಧಾನಸಭಾ ಕ್ಷೇತ್ರಗಳಿಗೆ ನಾಲ್ಕನೇ ಹಂತದ ಮತದಾನ ನಡೆಯುತ್ತಿದ್ದು, 11.30ರವರೆಗೆ ದಾಖಲೆ ಪ್ರಮಾಣದ ಶೇ.33.98ರಷ್ಟು ಮತದಾನವಾಗಿದೆ. ಪಶ್ಚಿಮಬಂಗಾಳದ ಫಾಲ್ಕಾಟಾ ಕ್ಷೇತ್ರದಲ್ಲಿ 11.30ರ ಹೊತ್ತಿಗೆ ಬರೋಬ್ಬರಿ ಶೇ.40.45ರಷ್ಟು ದಾಖಲೆಯ ಮತದಾನವಾಗಿದೆ ಎಂದು ವರದಿ ತಿಳಿಸಿದೆ.