ಭೈರವ ನನ್ನ ಆಂತರ್ಯದ ಪ್ರತಿಧ್ವನಿ
Team Udayavani, Nov 9, 2018, 6:00 AM IST
“ಟಗರು’ ಚಿತ್ರದಲ್ಲಿ ಡಾಲಿಯ ಪಾತ್ರದಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದ ನಟ ಧನಂಜಯ್ ಈಗ “ಭೈರವ’ನ ಅವತಾರದಲ್ಲಿ ತೆರೆಮೇಲೆ ಬರಲು ಸಿದ್ಧವಾಗುತ್ತಿದ್ದಾರೆ. ಸಹಜವಾಗಿಯೇ ಧನಂಜಯ್ ಖುಷಿಯಾಗಿದ್ದಾರೆ. ಖುಷಿಯ ಜೊತೆಗೆ ನಿರೀಕ್ಷೆಗಳು ಕೂಡಾ ಹೆಚ್ಚಿವೆ. ಭೈರವಗೀತ’ ಚಿತ್ರದ ಮೂಲಕ ಧನಂಜಯ್ ತೆಲುಗು ಚಿತ್ರರಂಗಕ್ಕೂ ಕಾಲಿಡುತ್ತಿದ್ದಾರೆ. ತೆಲುಗಿನಲ್ಲಿ ಧನಂಜಯ್ ಬೆನ್ನಿಗೆ ನಿಂತಿರೋದು ನಿರ್ದೇಶಕ ರಾಮ್ಗೋಪಾಲ್ ವರ್ಮಾ. “ಟಗರು’ ಚಿತ್ರದಲ್ಲಿನ ಧನಂಜಯ್ ನಟನೆ ನೋಡಿ ಫಿದಾ
ಆದ ವರ್ಮಾ, ತನ್ನ ಶಿಷ್ಯನ ನಿರ್ದೇಶನದ ಸಿನಿಮಾದಲ್ಲಿ ಅವಕಾಶ ಕೊಡುವ ಜೊತೆಗೆ ಧನಂಜಯ್ ಬಗ್ಗೆ ಮೆಚ್ಚುಗೆಯ ಮಾತು ಗಳನ್ನಾಡುತ್ತಾ, ತೆಲುಗಿನಲ್ಲಿ ನೆಲೆಯೂರಲು ಸಹಕರಿಸುತ್ತಿದ್ದಾರೆ. ಇವೆಲ್ಲವೂ ಧನಂಜಯ್ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ.
ಇತ್ತೀಚೆಗೆ “ಭೈರವಗೀತ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ನೋಡಿದವರಿಗೆ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಮೊದಲೇ ಹೇಳಿದಂತೆ ಈ ಚಿತ್ರವನ್ನು ರಾಮ್ ಗೋಪಾಲ್ ವರ್ಮಾ ಅವರ ಶಿಷ್ಯ ಸಿದ್ಧಾರ್ಥ್ ನಿರ್ದೇಶನ ಮಾಡಿದ್ದಾರೆ. ಸಿದ್ಧಾರ್ಥ್ ಈ ಸಿನಿಮಾ ಬಗ್ಗೆ ಖುಷಿಯಿಂದ ಮಾತನಾಡುತ್ತಾರೆ. “ನಮ್ಮ ಮಧ್ಯದಲ್ಲೆ ನಡೆದ ಮೇಲು-ಕೀಳು ತಾರತಮ್ಯ, ಜನಸಾಮಾನ್ಯರ
ಬದುಕು, ಹೋರಾಟ ಇನ್ನಿತರ ಸಂಗತಿಗಳನ್ನು ಇಟ್ಟುಕೊಂಡೆ ಈ ಚಿತ್ರ ಮಾಡಿದ್ದೇವೆ. ನೈಜ ಘಟನೆಯನ್ನು ಇಟ್ಟುಕೊಂಡು ಚಿತ್ರ ಮಾಡಿದ್ದರಿಂದ, ಸ್ವಲ್ಪ ರಗಡ್ ಆಗಿ ತೆರೆಮೇಲೆ ಬಂದಿದೆ. ಈ ಚಿತ್ರದಲ್ಲಿ ಧನಂಜಯ್ ಹೊಸತರ ಕಾಣುತ್ತಾರೆ’ ಎಂದರು.
ಶಿಷ್ಯನ ಕೆಲಸ ನೋಡಿ ರಾಮ್ಗೋಪಾಲ್ ವರ್ಮಾ ಕೂಡಾ ಥ್ರಿಲ್ ಆಗಿದ್ದಾರೆ. ಚಿತ್ರದ ಟ್ರೇಲರ್ ಬಿಡುಗಡೆಯ ವೇದಿಕೆಯಲ್ಲಿ ವರ್ಮಾ, ತಮ್ಮ ಶಿಷ್ಯನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. “ಆರಂಭದಲ್ಲಿ ನಾನೇನು ಕಥೆ ಕೇಳಿದ್ದೆನೊ, ಅದರಂತೆ ಟ್ರೇಲರ್ ಬಂದಿದೆ. ಈ ಚಿತ್ರದ ಮೂಲಕ ಧನಂಜಯ್ ಅಭಿನಯ ಚೆನ್ನಾಗಿದೆ. ಚಿತ್ರದ ಬಗ್ಗೆ ಭರವಸೆಯಿದೆ’ ಎಂದರು. ಇನ್ನು ಚಿತ್ರದಲ್ಲಿ ತಮ್ಮ ಪಾತ್ರದ
ಬಗ್ಗೆಯೂ ಧನಂಜಯ್ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿರುವುದು ಅವರ ಮಾತುಗಳಲ್ಲೇ ವ್ಯಕ್ತವಾಗುತ್ತಿತ್ತು.
“ಇಲ್ಲಿಯವರೆಗೆ ಸಿಕ್ಕಿರದ ಪಾತ್ರ ಈ ಚಿತ್ರದಲ್ಲಿ ಸಿಕ್ಕಿದೆ. ಒಂದು ಚಿತ್ರವನ್ನು ಹೇಗೆ ಮಾಡಬೇಕು, ಎಷ್ಟು ವೃತ್ತಿಪರವಾಗಿ ಮಾಡಬೇಕು ಮಾಡಬೇಕು ಎಂಬುದನ್ನು ಇದರಲ್ಲಿ ಕಲಿತಿದ್ದೇನೆ. ಸಿನಿಮಾದ ಬಗ್ಗೆ ಚಿತ್ರತಂಡ ಎಲ್ಲರೂ ಪ್ಯಾಷನೇಟ್ ಆಗಿದ್ದಾಗ ತೆರೆಮೇಲೆ ಹೇಗೆ ಬರುತ್ತದೆ ಎನ್ನುವುದಕ್ಕೆ ಈ ಚಿತ್ರ ಒಳ್ಳೆ ಉದಾಹರಣೆ. ನಿಜ ಜೀವನದಲ್ಲಿ ನನ್ನೊಳಗಿದ್ದ, ಆಕ್ರೋಶ, ಆವೇಶ ಎಲ್ಲದಕ್ಕೂ ಭೈರವಗೀತದ ನನ್ನ ಪಾತ್ರ ಧ್ವನಿಯಾಗಿತ್ತು. ಅಲ್ಲಿ ಕಾಣುವ ದೃಶ್ಯದ ಪ್ರತಿ ತುಣುಕಿನಲ್ಲೂ ನನ್ನ ಆಂತರ್ಯದ ಪ್ರತಿಧ್ವನಿ ಇದೆ. ಒಂದು ಪಾತ್ರವನ್ನು ಎಷ್ಟು ಪರಿಣಾಮಕಾರಿಯಾಗಿ ಪ್ರೇಕ್ಷಕರ ಮುಂದೆ ತರಬಹುದೋ, ಅಷ್ಟು ಪರಿಣಾಮಕಾರಿಯಾಗಿ ಈ ಚಿತ್ರದಲ್ಲಿ ತಂದಿದ್ದಾರೆ. ನನ್ನ
ವೃತ್ತಿ ಜೀವನದಲ್ಲಿ ಇದೊಂದು ಹೊಸತರದ ಚಿತ್ರ. ಜನಕ್ಕೆ ನಮ್ಮ ಪ್ರಯತ್ನ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ಧನಂಜಯ್.
ಚಿತ್ರದ ಬಗ್ಗೆ ಮಾತನಾಡಿದ ನಿರ್ಮಾಪಕ ರಾಶಿ ಭಾಸ್ಕರ್, “ಗುಣಮಟ್ಟದಲ್ಲಿ ಎಲ್ಲೂ ರಾಜಿಯಾಗದಂತೆ, ನೈಜ ಘಟನೆಯ ಕಥೆಯನ್ನು ಹಾಗೇ ತೆರೆಮೇಲೆ ತಂದಿದ್ದೇವೆ. ಚಿತ್ರದ ಕಲಾವಿದರು, ತಂತ್ರಜ್ಞರು ತುಂಬ ಅಚ್ಚುಕಟ್ಟಾಗಿ ತಮ್ಮ ಕೆಲಸವನ್ನು ನಿರ್ವಹಿಸಿದ್ದರಿಂದ, ಇಷ್ಟು ಚೆನ್ನಾಗಿ ಚಿತ್ರ ಬರಲು ಸಾಧ್ಯವಾಯಿತು. ಸದ್ಯ ಚಿತ್ರ ಸೆನ್ಸಾರ್ ಮುಂದಿದೆ. ಇದೇ ನ. 22ರಂದು ಏಕಕಾಲಕ್ಕೆ ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ಬಿಡುಗಡೆ ಮಾಡುವ ಆಲೋಚನೆ ಇದೆ’ ಎಂದರು. “ಭೈರವಗೀತ’ ಚಿತ್ರದಲ್ಲಿ ಧನಂಜಯ್ ಅವರಿಗೆ
ನಾಯಕಿಯಾಗಿ ಐರಾ ಜೋಡಿಯಾಗಿದ್ದಾರೆ. ಒಟ್ಟಾರೆ “ಭೈರವಗೀತ’ದ ಟ್ರೇಲರ್ಗಳು ಸಾಕಷ್ಟು ಭರವಸೆ ಮೂಡಿಸಿದ್ದು, ಮೈ ಜುಮ್ಮೆನುಸುವ ಆ್ಯಕ್ಷನ್, ಖಡಕ್ ಡೈಲಾಗ್ಸ್, ರೊಮ್ಯಾಂಟಿಕ್ ಲವ್, ಥೀಮ್ ಸಾಂಗ್ ಟ್ರೇಲರ್ನಲ್ಲಿ ಗಮನ ಸೆಳೆಯುತ್ತವೆ. ಚಿತ್ರ ಈ
ತಿಂಗಳಾಂತ್ಯಕ್ಕೆ ತೆರೆಕಾಣಲಿದೆ.
ಜಿ. ಎಸ್. ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Sandalwood; ‘ಫಾರೆಸ್ಟ್’ನಲ್ಲಿ ಚಿಕ್ಕಣ್ಣ & ಟೀಂ
Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ
Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್
Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್ ನಿರ್ದೇಶನದ ಸಿನಿಮಾ