ಬಾ ಕವಿತಾ!
Team Udayavani, Aug 4, 2019, 5:21 AM IST
ಇತ್ತೀಚೆಗೆ ಕಿರುತೆರೆಯಿಂದ ಹಿರಿತೆರೆಯತ್ತ ಮುಖ ಮಾಡುತ್ತಿರುವ ನಟಿಮಣಿಯರ ಸಂಖ್ಯೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿದೆ. ಕಿರುತೆರೆಯಲ್ಲಿ ಕೊಂಚ ಜನಪ್ರಿಯತೆ ಪಡೆಯುತ್ತಿದ್ದಂತೆ, ಬಹುತೇಕ ನಟಿಯರ ಚಿತ್ತ ಹರಿಯುವುದೇ ಹಿರಿತೆರೆಯತ್ತ. ಹೀಗೆ ಕಿರುತೆರೆಯಿಂದ ಹಿರಿತೆರೆಯತ್ತ ಮುಖ ಮಾಡಿರುವ ನಟಿ ಕವಿತಾ ಗೌಡ. ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಚಿನ್ನು ಪಾತ್ರದ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡ ಕವಿತಾ ಬಳಿಕ ವಿದ್ಯಾ ವಿನಾಯಕ, ನೀಲಿ ಮೊದಲಾದ ಧಾರಾವಾಹಿಗಳ ಮೂಲಕ ಕಿರುತೆರೆಯಲ್ಲಿ ತನ್ನದೇ ಆದ ಅಭಿಮಾನಿಗಳನ್ನು ಸಂಪಾದಿಸಿಕೊಂಡಾಕೆ. ನಂತರ ನಿಧಾನವಾಗಿ ಧಾರಾವಾಹಿಗಳಿಂದ ರಿಯಾಲಿಟಿ ಶೋಗಳತ್ತ ಮುಖ ಮಾಡಿದ ಕವಿತಾ “ಬಿಗ್ಬಾಸ್’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ “ಬಿಗ್ಬಾಸ್’ ಮನೆಯನ್ನು ಪ್ರವೇಶಿಸಿದರು.
ಇವೆಲ್ಲದರ ನಡುವೆ ಕವಿತಾ ಸದ್ದಿಲ್ಲದೆ ಹಿರಿತೆರೆಗೂ ಪದಾರ್ಪಣೆ ಮಾಡಿದ್ದ ಕವಿತಾ, ಮೊದಲು ಆರ್.ಜೆ. ರಾಜೇಶ್ ಅಭಿನಯದ ಫಸ್ಟ್ಲವ್ ಚಿತ್ರದಲ್ಲಿ ನಾಯಕಿಯಾಗಿ ಸಾಕಷ್ಟು ನಿರೀಕ್ಷೆಯೊಂದಿಗೆ ಬೆಳ್ಳಿತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದರು. ಕವಿತಾ ನಾಯಕಿಯಾಗಿ ಅಭಿನಯಿಸಿದ್ದ ಮೊದಲ ಚಿತ್ರ ಫಸ್ಟ್ಲವ್ ಬಾಕ್ಸಾಫೀಸ್ನಲ್ಲಿ ಅಷ್ಟಾಗಿ ಸೌಂಡ್ ಮಾಡದಿದ್ದರೂ, ಕವಿತಾ ಅವರ ಅಭಿನಯದ ಬಗ್ಗೆ ಚಿತ್ರರಂಗದಿಂದ ಮತ್ತು ಸಿನಿಪ್ರಿಯರಿಂದ ಮೆಚ್ಚುಗೆಯ ಮಾತುಗಳು ಕೇಳಿಬಂದವು. ಅದಾದ ಬಳಿಕ ಶ್ರೀನಿವಾಸ ಕಲ್ಯಾಣ ಸೇರಿದಂತೆ ಕೆಲ ಚಿತ್ರಗಳಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ಮಾಡಿದ್ದು ಬಿಟ್ಟರೆ, ಬೇರೆಲ್ಲೂ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ.
ಈಗ ಕವಿತಾ ಮತ್ತೂಂದು ಚಿತ್ರ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎನ್ನುವ ಚಿತ್ರದ ಮೂಲಕ ಮತ್ತೂಮ್ಮೆ ಸಿನಿಪ್ರಿಯ ಮುಂದೆ ಬರುತ್ತಿದ್ದಾರೆ. ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್ ಬಿ. ಶೆಟ್ಟಿ ಅವರಿಗೆ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಕವಿತಾ ಸಾಫ್ಟ್ವೇರ್ ಹುಡುಗಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪಕ್ಕಾ ಔಟ್ ಆ್ಯಂಡ್ ಔಟ್ ಕಾಮಿಡಿ ಶೈಲಿಯಲ್ಲಿ ಮೂಡಿಬರುತ್ತಿರುವ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡುವ ಕವಿತಾ, ಈ ಬಾರಿ ಗುಬ್ಬಿ ಕೈ ಹಿಡಿಯುವುದು ಗ್ಯಾರೆಂಟಿ ಎಂಬ ವಿಶ್ವಾಸದಲ್ಲಿದ್ದಾರೆ. ಸದ್ಯ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರ ಇದೇ ತಿಂಗಳು ತೆರೆಗೆ ಬರುತ್ತಿದ್ದು, ಕವಿತಾ ಅವರಿಗೆ ಈ ಚಿತ್ರವಾದರೂ ಗೆಲುವಿನ ನಗು ತಂದುಕೊಡುತ್ತದೆಯಾ ಅನ್ನೋದು ಶೀಘ್ರದಲ್ಲಿಯೇ ಗೊತ್ತಾಗಲಿದೆ.