ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಮಡಿಕೇರಿಯ ತುಫೈಲ್ಗೆ ತೀವ್ರ ಶೋಧ
Team Udayavani, Nov 3, 2022, 9:26 AM IST
ಮಡಿಕೇರಿ : ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳ ಪತ್ತೆಗಾಗಿ ರಾಷ್ಟ್ರೀಯ ತನಿಖಾ ದಳ ತೀವ್ರ ಶೋಧ ಕಾರ್ಯ ಕೈಗೊಂಡಿದೆ.
ಎನ್ಐಎ ತಂಡ ನಾಲ್ವರು ಆರೋಪಿಗಳ ವಾಂಟೆಡ್ ಲಿಸ್ಟ್ ಬಿಡುಗಡೆ ಮಾಡಿದ್ದು, ಮಡಿಕೇರಿಯ ತುಫೈಲ್ ತಲೆಗೆ 5 ಲಕ್ಷ ರೂ. ಬಹುಮಾನ ಘೋಷಿಸಿದೆ. ಮಡಿಕೇರಿ ನಗರ ಪೊಲೀಸರ ಸಹಾಯದಿಂದ ಆತನ ಮನೆ ಸೇರಿದಂತೆ ಸುಮಾರು 40 ಕಡೆಗಳಲ್ಲಿ ವಾಂಟೆಡ್ ಪೋಸ್ಟರ್ ಅಂಟಿಸಲಾಗಿದೆ.
ತುಫೈಲ್ ಮೂಲತಃ ಕೊಡಗು ಜಿಲ್ಲೆ ಮಡಿಕೇರಿಯ ಗದ್ದಿಗೆ ಬಳಿಯ ನಿವಾಸಿಯಾಗಿದ್ದು, ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯನಾಗಿದ್ದ. ಜು. 26ರಂದು ಪ್ರವೀಣ್ ಹತ್ಯೆ ನಡೆದಿದ್ದು, ತನಿಖೆ ಕೈಗೆತ್ತಿಕೊಂಡ ಎನ್ಐಎ ತಂಡ ಸೆ. 6 ಮತ್ತು 22ರಂದು ತುಫೈಲ್ನ ಮನೆ ಸೇರಿದಂತೆ ಮಡಿಕೇರಿಯ ಸಾಕಷ್ಟು ಸ್ಥಳಗಳಲ್ಲಿ ಹುಡುಕಾಟ ನಡೆಸಿತ್ತು.