UV Fusion: ಪೇಪರ್ ಬಾಯ್ಗೊಂದು ಸಲಾಂ
Team Udayavani, Sep 26, 2023, 10:25 AM IST
ಮಬ್ಬುಗತ್ತಲಲ್ಲಿ ಅಡ್ಡ ಬರುವ ಬೀದಿ ನಾಯಿಗಳು. ಮಳೆಗಾಲದಲ್ಲಿ ಪೇಪರ್ ಒದ್ದೆಯಾಗದಂತೆ ತಾನು ನೆನೆದು ಪೇಪರ್ ಚೀಲಕ್ಕೆ ಕೊಡೆ ಹಿಡಿದು ಗಲ್ಲಿ ಗಲ್ಲಿಯಲ್ಲಿ ಸಂಚಾರ. ಬಿರು ಬೇಸಿಗೆಯಲ್ಲಿ ಶ್ರಮದ ಬೆವರಿನ ಹನಿಗಳು ಸೂರ್ಯೋದಯದಲ್ಲಿ ಮಿಂಚುತ್ತಾತಾ ಕಾಣುವ ಕನಸಿಗೆ ಹನಿ ಹನಿ ಒಟ್ಟುಗೂಡಿಸಿ ಆಸೆಯಿಂದ ಕೊಂಡ ವಸ್ತುವಿನ ಮೇಲೆ ಈ ಉಪ ಕಸುಬಿನಿಂದ ಗಳಿಸಿದ ಧನ ಸಹಾಯ ಇದ್ದೇ ಇದೆ. ಕಾಯಕ ಯೋಗಿ ಈ ಪತ್ರಿಕೆ ವಿತರಕರು. ಇವರದು ಬಿಸಿಲು ಮಳೆ ಚಳಿಗೆ ರಜೆ ಇರದ ಕೆಲಸ.
ಪೇಪರ್ ಬಾಯ್ ಎಂದಾಕ್ಷಣ ಈಗಲೂ ಕೆಲವರಿಗೆ ಅಸಡ್ಡೆ ಇದೆ. ಇದೊಂದು ಕಿರಿಕ್ ಕೆಲಸವೆಂಬ ಮನೋಭಾವನೆ. ಹಿಂದೆಲ್ಲ ಜೀವನ ನಿರ್ವಹಣೆಗೆ, ಮನೆಗೆ ಅಳಿಲು ಸೇವೆಯನ್ನು ಸಲ್ಲಿಸಲು ಅಥವಾ ಪುಸ್ತಕ ಶಾಲಾ ಫೀಸ್ ಮುಂತಾದವುಗಳಿಗೆ ಪೋಷಕರಿಗೆ ಹೊರೆಯಾಗದಂತೆ ನೋಡಿಕೊಳ್ಳಲು ಬಾಲಕರು ಈ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಇಂದು ಮಕ್ಕಳು ಸುಖವಾಗಿರಲಿ ಎಂಬ ಮನೋಭಾವನೆಯಿಂದ ಪೋಷಕರೇ ತಮ್ಮ ಮಕ್ಕಳನ್ನು ಈ ಕೆಲಸಕ್ಕೆ ಕಳಿಸಲು ಹಿಂದೇಟು ಹಾಕುತ್ತಾರೆ.
ಕಬ್ಬಿಣವನ್ನು ಕಾಸಿದಾಗಲೇ ನಾವು ಬಯಸಿದ ಆಕಾರ ಮೂಡುವುದು. ಕಬ್ಬನ್ನು ಹಿಂಡಿ ರಸ ಕುದಿಸಿದಾಗಲೇ ಸಿಹಿಯಾದ ಬೆಲ್ಲದ ಹುಟ್ಟು. ಕೆಲಸ ಯಾವುದೇ ಇರಲಿ ತಲೆಯೆತ್ತುವಂತೆ ಇರಬೇಕೆ ಹೊರತು ತಲೆತಗ್ಗಿಸುವಂತೆ ಅಲ್ಲ. ಸೈಕಲ್ ಪೆಡಲ್ ತುಳಿದರೆ ಮಾತ್ರ ಇವರ ಬದುಕು ಚಕ್ರದಂತೆ ಮುಂದೆ ಹೋಗಲು ಸಾಧ್ಯ. ನಿಯತ್ತಾದ ಶಿಸ್ತುಬದ್ಧವಾದ ದಿನಚರಿಗೆ ಹಾಗೂ ದೇಹದ ಅವಯವಗಳು ಆರೋಗ್ಯಯುತವಾಗಿ ಕೆಲಸ ಮಾಡಲು ಈ ಉದ್ಯೋಗಕ್ಕಿಂತ ಬೇರೊಂದು ಇಲ್ಲ.
ಪತ್ರಿಕಾ ಸಂಸ್ಥೆ ಹಾಗೂ ಓದುಗರ ನಡುವೆ ಬೆಸೆಯುವ ಸಂಬಂಧಕ್ಕೆ ಕೊಂಡಿಯಾಗಿರುವವರು ಈ ವಿತರಕರು. ದಿನಬೆಳಗ್ಗೆ ಪೇಪರ್ ಬರುವಿಕೆಗಾಗಿ ಕಾಯುವ ತವಕ ಓದುಗನಿಗೆ. ಸ್ವಲ್ಪ ತಡವಾದರೂ ಮುನಿಸು. ಇವಕ್ಕೂ ಮಿಗಿಲಾಗಿ ಓದುಗರ ವಿತರಕರ ನಡುವೆ ಆತ್ಮೀಯತೆ ಹೇಗೆ ಇರುತ್ತದೆ ಅಂದರೆ ಶುಭಕಾರ್ಯ ಆಮಂತ್ರಣ ಇವರಿಗೆ ಇದ್ದೇ ಇರುತ್ತದೆ. ಹಬ್ಬ ಹರಿದಿನಗಳಲ್ಲಿ ಮಾಡಿದ ಪ್ರಸಾದ ಸಿಹಿತಿಂಡಿಗಳು ಇವರಿಗಾಗಿ ಕಾದಿರುತ್ತದೆ. ಮಕ್ಕಳೆಲ್ಲ ಬೇರೆ ಬೇರೆ ಊರುಗಳಲ್ಲಿ ನೆಲಸಿ ಒಂಟಿಯಾಗಿರುವ ಹಿರಿಯ ಜೀವಿಗೆ ಓದು ಸಮಯ ಕೊಲ್ಲುವ ಸಾಧನವಾದರೆ, ಪುಸ್ತಕ ಪತ್ರಿಕೆ ವಿತರಕರು ಕುಶಲೋಪಚಾರ ಮಾತಾಡಿ ಅವರು ಒಂಟಿತನ ನೀಗಿಸುವ ಅವರ ಬಗ್ಗೆ ಕಾಳಜಿ ತೋರಿಸುವ ವ್ಯಕ್ತಿಯಾಗಿ ಅಂತವರು ಜನಮಾನಸದಲ್ಲಿ ನೆಲೆಸಿದ್ದಾರೆ.
ಇದು ಡಿಜಿಟಲ್ ಯುಗವಾಗಿದೆ. ಸುದ್ದಿಗಳು ಕ್ಷಣದಲ್ಲಿ ಮೊಬೈಲ್ನಲ್ಲಿ ಸಿಗುತ್ತದೆ. ಅಕ್ಷರ ಮಾಧ್ಯಮ ಸೊರಗುತ್ತಿದೆ. ಇದರ ನಡುವೆ ಆಶಾದಾಯಕ ವಿಷಯವೇನೆಂದರೆ ಬೆಳಗಿನ ಪತ್ರಿಕೆಗಾಗಿ ಹಾತೊರೆಯುವ ಜನಗಳು ಈಗಲೂ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಗಳೇನೇ ಇದ್ದರು, ಮಾನಸಿಕವಾಗಿ ಸಂತೋಷ ನೀಡುವುದು ಓದು ಮಾತ್ರ. ಓದು ಹವ್ಯಾಸವಾದಾಗ ಮಾತ್ರವೇ ನಿಜವಾದ ಆನಂದ ನಮಗಾಗುತ್ತದೆ. ಎಷ್ಟೋ ವಿದ್ಯಾರ್ಥಿಗಳು ಕಲಾಂ ಅವರಂತೆ ಕಣ್ಣಲ್ಲಿ ಕನಸು ಹೊತ್ತು ಬೆಳಗ್ಗೆ ಪೇಪರ್ ಹಾಕುವವರು ಇದ್ದಾರೆ. ಪರೋಕ್ಷವಾಗಿ ಅವರ ಕನಸನ್ನು ಸಹಕಾರ ಗೊಳಿಸುವ ಅವಕಾಶ ಓದುಗರಿಗೆ ಇದೆ.
ಬ್ರೇಕಿಂಗ್ ನ್ಯೂಸ್ಗೆ ಸಡ್ಡು ಹೊಡೆದು, ನೈಜತೆ ಹಾಗೂ ವಸ್ತುಸ್ಥಿತಿಗೆ ಒತ್ತು ಕೊಟ್ಟು ಜನರಲ್ಲಿ ವಿಷಬೀಜ ಬಿತ್ತದೆ ಸಾಮಾಜಿಕ ಕಳಕಳಿಯ ಹೊತ್ತು ಪತ್ರಿಕೆಯನ್ನು ಜನರ ಬಾಗಿಲಿಗೆ ತಲುಪಿಸಿ ಈ ಸಮಾಜಕ್ಕೆ ಅಳಿಲು ಸೇವೆ ಸಲ್ಲಿಸುವ ಪೇಪರ್ ಬಾಯ್ಗಳಿಗೆ ನಮ್ಮದೊಂದು ಸಲಾಂ.
–ವಿದ್ಯಾ ಶೆಣೈ
ಕುಂದಾಪುರ