UV Fusion: ಹೃದಯ ಬಗ್ಗೆ ಇರಲಿ ಕಾಳಜಿ
Team Udayavani, Sep 4, 2023, 4:01 PM IST
ಇತ್ತೀಚಿನ ದಿನಗಳಲ್ಲಿ ಹದಿಹರೆಯದವರಲ್ಲೇ ಹೃದ್ರೋಗ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. 2025ರ ಹೊತ್ತಿಗೆ ಭಾರತವು ಪ್ರಪಂಚದ ಹೃದ್ರೋಗಿಗಳ ರಾಜಧಾನಿಯಾಗಲಿದೆ ಎಂಬ ತಜ್ಞರ ಮಾತಿನಂತೆ ವರ್ಷದಿಂದ ವರ್ಷಕ್ಕೆ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಏರುತ್ತಿದೆ. ಇದಕ್ಕೆ ಇಂದಿನ ಒತ್ತಡದ ಜೀವನ, ಆಹಾರ ವ್ಯವಸ್ಥೆ, ಪರಿಸರ ಹೀಗೆ ಕಾರಣಗಳು ಹತ್ತಾರು ಇರಬಹುದು. ಇವೆಲ್ಲವುಗಳ ನಡುವೆ ನಮ್ಮ ಹೃದಯವನ್ನು ಜೋಪಾನವಾಗಿಟ್ಟುಕೊಳ್ಳುವುದು ನಮ್ಮ ಪ್ರಥಮ ಆದ್ಯತೆಯಾಗಬೇಕಿದೆ.
ಹೃದಯ ರೋಗವು ದಿನ ಬೆಳಗಾಗುವುದರೊಳಗೆ ಉಂಟಾಗುವುದಿಲ್ಲ. ಹೃದ್ರೋಗ ಇರುವವರಲ್ಲಿ ಮುಂಚಿತವಾಗಿ ಕೆಳಗಿನ ಲಕ್ಷಣಗಳು ಕಂಡು ಬರಬಹುದು.
ಹೃದಯ ಬೇನೆ: ಹೃದಯ ಬೇನೆ ಹದಯಾಘಾತದ ಮುನ್ಸೂಚನೆಯಾಗಿ ಬರುವ ಕಾಯಿಲೆ. ಸೈಕಲ್ ತುಳಿಯುವಿಕೆ, ಓಡುವುದು, ಬೆಟ್ಟ ಹತ್ತುವುದು ಮುಂತಾದ ಕೆಲಸಗಳನ್ನು ಮಾಡಿದಾಗ ಹೃದಯದಲ್ಲಿ ನೋವು ಶುರುವಾಗುತ್ತದೆ. ಮಾಡುತ್ತಿರುವ ಕೆಲಸವನ್ನು ನಿಲ್ಲಿಸಿ ವಿಶ್ರಾಂತಿ ತೆಗೆದುಕೊಂಡಾಗ ನೋವು ಮಾಯವಾಗುತ್ತದೆ.
ಕಾಲು ಸೆಳೆತ, ಕಾಲು ನೋವು: ಕಾಲಿನ ಮಾಂಸಖಂಡಗಳಿಗೆ ರಕ್ತದ ಸರಬರಾಜು ಕುಂಠಿತಗೊಂಡು ಕಾಲಿನ ಮಾಂಸಖಂಡಗಳಲ್ಲಿ ತೀವ್ರ ತರಹದ ನೋವು, ಸ್ನಾಯು ಸೆಳೆತ ಕಾಣಿಸಿಕೊಳ್ಳಬಹುದು.
ಮಾನಸಿಕ ಅಸ್ವಸ್ಥತೆ: ಕಿರಿದಾದ ರಕ್ತನಾಳಗಳ ಮೂಲಕ ಮಿದುಳಿನ ಅಂಗಾಂಶಗಳಿಗೆ ರಕ್ತ ಸರಬರಾಜು ಸರಿಯಾಗಿ ಆಗದ ಕಾರಣ ಮಾನಸಿಕ ಅಸ್ವಸ್ಥತೆ ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ.
ಅಪಧಮನಿಗಳು ಪೆಡಸಾದಾಗ, ಸಂಕುಚಿತಗೊಂಡು ಅವುಗಳಲ್ಲಿ ರಕ್ತದ ಒತ್ತಡ ಹೆಚ್ಚಾದಾಗ ಅವು ಒಡೆಯುವ ಸಾಧ್ಯತೆಗಳಿರುತ್ತವೆ. ಹೀಗಾದಾಗ ವ್ಯಕ್ತಿ ಒಂದೋ ಪಾರ್ಶ್ವವಾಯುವಿಗೆ ತುತ್ತಾಗಬಹುದು ಅಥವಾ ಸಾವಿಗೀಡಾಗಬಹುದು.
ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ವಯಸ್ಕರು ಸಾಮಾನ್ಯವಾಗಿ ಬೆಳಗ್ಗಿನ ಉಪಹಾರದ ಬದಲಿಗೆ ಜ್ಯೂಸ್ ಅಥವಾ ಕಾಫಿ ಮಾತ್ರ ಸೇವಿಸುತ್ತಾರೆ. ಸರಿಯಾದ ಸಮಯಕ್ಕೆ ಸರಿಯಾದ ಆಹಾರ ಸೇವಿಸದಿದ್ದರೆ ಹೃದಯ ಸಂಬಂಧಿ ರೋಗಗಳು ಬರುತ್ತವೆ. ಧೂಮಪಾನ, ಮದ್ಯಪಾನ, ತಂಬಾಕು ಸೇವನೆಯಿಂದ ದೂರವಿರಿ. ಜಂಕ್ ಫುಡ್, ಕರಿದ ಪದಾರ್ಥಗಳ ಸೇವನೆ ಕಡಿಮೆ ಮಾಡಬೇಕು. ಸ್ಟ್ರಾಬೆರಿ ಮತ್ತು ಬ್ಲೂಬೇರಿ ಹಣ್ಣುಗಳು, ಟೊಮೇಟೊ, ಬೆಳ್ಳುಳ್ಳಿ, ಜೀವಸತ್ವ ಇರುವ ಧಾನ್ಯಗಳು, ಗೋಧಿ, ರಾಗಿ ಇವೆಲ್ಲವು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ನಿಯಮಿತ ವ್ಯಾಯಾಮ ಉತ್ತಮ. ಉಪ್ಪು, ಕೊಬ್ಬಿನಾಂಶವಿರುವ ಸಕ್ಕರೆ ಮತ್ತು ಆಹಾರಗಳನ್ನು ಮಿತವಾಗಿ ಬಳಸಬೇಕು.
ಅಧಿಕ ಒತ್ತಡಕ್ಕೊಳಗಾಗಬಾರದು. ಸಣ್ಣಪುಟ್ಟ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸದಿರಿ. ಯಾವಾಗಲೂ ಮನಸ್ಸು ಪ್ರಶಾಂತತೆಯಿಂದ ಕೂಡಿರಬೇಕು. ತರಕಾರಿಗಳು, ಮೊಳಕೆ ಕಾಳುಗಳನ್ನು ಸೇವಿಸಬೇಕು.
ಹೃದಯಾಘಾತ ಆಗುವ ಸಂದರ್ಭದಲ್ಲಿ ಎದೆಯು ಬಿಗಿಯಾದಂತೆ, ಹಿಸುಕಿದ ಅನುಭವ ಅಥವಾ ಭಾರವಾದಂತೆ ಅನುಭವವಾಗುತ್ತದೆ. ಹೃದಯಾಘಾತ ಸಂಭವಿಸುವ ಮುನ್ನ ಎಚ್ಚರಿಕೆ ಗಂಟೆಯಂತೆ ಈ ನೋವು 15 ನಿಮಿಷದಿಂದ ಒಂದು ಗಂಟೆಗಳ ಕಾಲ ಕಾಣಿಸಿಕೊಳ್ಳುತ್ತದೆ. ನಿರ್ಲಕ್ಷಿಸದೆ ತಕ್ಷಣ ಹೃದಯ ತಜ್ಞರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು.
-ರೇಣುಕಾರಾಜ್
ಹಾರನಹಳ್ಳಿ