ರಾಷ್ಟ್ರದ ಪ್ರಗತಿಯ ಪರಿಧಿಯಲ್ಲಿ ಮೂಲಭೂತ ಕರ್ತವ್ಯಗಳು


Team Udayavani, Mar 25, 2022, 12:50 PM IST

ರಾಷ್ಟ್ರದ ಪ್ರಗತಿಯ ಪರಿಧಿಯಲ್ಲಿ ಮೂಲಭೂತ ಕರ್ತವ್ಯಗಳು

ಸಮರ ಹಾಗೂ ಶಾಂತಿಯ ದಿನಗಳಲ್ಲಿ ರಾಷ್ಟ್ರೀಯ ಪರಿಕಲ್ಪನೆಯ ಪರಿಪಕ್ವತೆಯಲ್ಲಿ ದೇಶದ ಅಗಾಧ ಶಕ್ತಿಯ ಮೂಲ ಅಡಗಿದೆ. ಇದು ಪ್ರಚಲಿತ ವಿಶ್ವ ಕುಟುಂಬದ ತೆರೆದಿಟ್ಟ ನಿತ್ಯ ಸತ್ಯ. ಈ ನಿಟ್ಟಿನಲ್ಲಿಯೇ ಮೂಲಭೂತ ಹಕ್ಕುಗಳಷ್ಟೇ ಪ್ರಧಾನ ಭೂಮಿಕೆ ಮೂಲಭೂತ ಕರ್ತವ್ಯಗಳೂ ಪಡೆದುಕೊಳ್ಳುವಿಕೆಯನ್ನು ನಾವು ಗುರುತಿಸಬಹುದಾಗಿದೆ. ಹಕ್ಕು ಹಾಗೂ ಕರ್ತವ್ಯ ನಾಣ್ಯದ ಎರಡು ಮುಖಗಳಂತೆ. ಅದು ಕುಟುಂಬ ಜೀವನದ ಕಿರು ಪರಿಧಿಯಲ್ಲಿರಬಹುದು; ರಾಷ್ಟ್ರ ಜೀವನದ ವಿಶಾಲ ವರ್ತುಲದಲ್ಲಿರಬಹುದು. ನಮ್ಮ ಕರ್ತವ್ಯದ ಲೋಪ ಖಂಡಿತ ಸ್ವಾಗತಾರ್ಹವಲ್ಲ. ಏಕೆಂದರೆ ಪ್ರಜೆಗಳ ವ್ಯಕ್ತಿಗತ ಬದುಕು ರಾಷ್ಟ್ರ ಜೀವನದ ಸಾಮೂಹಿಕ ಭದ್ರತೆ. ಅಂತೆಯೇ ಪ್ರಗತಿಯ ಜತೆಗೆ ನೇರ ಸಂವಾದಿ ಎನಿಸುತ್ತದೆ. ಈ ಹಿನ್ನಲೆಯಲ್ಲೇ 75 ಸಂವತ್ಸರಗಳ ಪಥ ತುಳಿದ “ಆಜಾದೀ ಕಾ ಅಮೃತ ವರ್ಷ’ದ ಮೆಟ್ಟಲೇರಿದ “ಭಾರತದ ಪ್ರಜೆಗಳಾದ ನಾವು’ ನಮ್ಮ ಕರ್ತವ್ಯದ ತಿಳಿಬೆಳಕನ್ನು ಆಸ್ವಾದಿಸಬೇಕಾಗಿದೆ.

ವಾಸ್ತವಿಕವಾಗಿ, ನಮ್ಮ ರಾಷ್ಟ್ರದ ಮೂಲ ಸಂವಿಧಾನದಲ್ಲಿನ ಮೂರನೇ ವಿಭಾಗದಲ್ಲಿ ಮೂಲಭೂತ ಹಕ್ಕುಗಳ ಒಕ್ಕಣೆ ಇದೆ. ಆದರೆ ಮೂಲಭೂತ ಕರ್ತವ್ಯಗಳ ಬಗ್ಗೆ ಪ್ರಸ್ತಾವವಿರಲಿಲ್ಲ. ಮುಂದೆ 1976ರಲ್ಲಿ ಸರ್ದಾರ್‌ ಸ್ವರಣ್‌ಸಿಂಗ್‌ ಸಮಿತಿ ವರದಿ ಆಧರಿಸಿ, ತುರ್ತು ಪರಿಸ್ಥಿತಿ ಸಂದರ್ಭದಲ್ಲೇ ಇಂದಿರಾ ಗಾಂಧಿ ಪ್ರಧಾನಿ ಆಗಿದ್ದಾಗ 42ನೇ ತಿದ್ದುಪಡಿಯ ಮೂಲಕ ಇದನ್ನು ಸೇರ್ಪಡೆಗೊಳಿಸಲಾಯಿತು. ಭಾರತ ಸಂವಿಧಾನಕ್ಕೆ ಭಾಗ 4ಎ ಸೇರಿಸಿ, 51ಎ ಎಂಬ ನೂತನ ವಿಧಿಯ ಮೂಲಕ ಭಾರತದ ಪ್ರಜೆಯ 10 ಆದ್ಯ ಕರ್ತವ್ಯಗಳನ್ನು ಹೆಣೆದು ನಾಡಿನ ಮುಂದಿಡಲಾಯಿತು. ಮುಂದೆ 2002ರಲ್ಲಿ 86ನೇ ತಿದ್ದುಪಡಿಯ ಮೂಲಕ ಎಳೆಯ ಮಕ್ಕಳ ಶಿಕ್ಷಣದಲ್ಲಿ ಹೆತ್ತವರ ಪಾತ್ರವನ್ನು ನಿಖರವಾಗಿ ಗುರುತಿಸುವ ಕರ್ತವ್ಯದ ಗೆರೆ ಪಡಿ ಮೂಡಿಸಲಾಯಿತು.

51ಎ ವಿಧಿಯ ಮೂಲಕ ಸಂವಿಧಾನದಲ್ಲಿ ಮುತ್ತಿನಂತಹ ಹನ್ನೊಂದು  ಕರ್ತವ್ಯಗಳು, ಜನಮನದಂಗಳಕ್ಕಾಗಿ ತೆರೆದುಕೊಂಡ ಬಗೆ ಹೀಗಿದೆ. ಪ್ರತಿಯೋರ್ವ ಭಾರತೀಯನೂ:

  • ರಾಷ್ಟ್ರದ ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು ಹಾಗೂ ಅದರ ಆದರ್ಶಗಳಿಗೆ, ಸಂಸ್ಥೆಗಳಿಗೆ, ರಾಷ್ಟ್ರ ಧ್ವಜಕ್ಕೆ, ರಾಷ್ಟ್ರಗೀತೆಗೆ ಗೌರವ ಸಲ್ಲಿಸಬೇಕು.
  • ಈ ನಾಡಿನ ಸ್ವಾತಂತ್ರ್ಯ ಹೋರಾಟದ ಆದರ್ಶಗಳನ್ನು ಅರಿತುಕೊಳ್ಳಬೇಕು ಹಾಗೂ ಅನುಸಂಧಾನಗೊಳಿಸಬೇಕು.
  • ರಾಷ್ಟ್ರದ ಸಾರ್ವಭೌಮತೆ, ಏಕತೆ ಹಾಗೂ ಸಮಗ್ರತೆಯನ್ನು ಎತ್ತಿ ಹಿಡಿಯಬೇಕು.
  • ರಾಷ್ಟ್ರರಕ್ಷಣೆಗೆ ಮುಂದಾಗಬೇಕು ಹಾಗೂ ರಾಷ್ಟ್ರೀಯ ಸೇವೆಗೆ ಕರೆ ಬಂದಾಗಲೆಲ್ಲ ಸಹಕರಿಸಬೇಕು.
  • ಧರ್ಮ, ಭಾಷೆ, ಪ್ರಾದೇಶಿಕತೆ ಅಥವಾ ಗುಂಪುತನದಿಂದ ಮೇಲೆದ್ದು ಉತ್ತಮ ಬಾಂಧವ್ಯ ಹಾಗೂ ಪರಸ್ಪರ ಸಹೋದರ ಭಾವ ಸ್ಪಂದನ ಹೊಂದಬೇಕು ಹಾಗೂ ಮಹಿಳೆಯರ ಗೌರವಕ್ಕೆ ಚ್ಯುತಿ ಎನಿಸುವ ಪದ್ಧತಿಗಳನ್ನು ತ್ಯಜಿಸಬೇಕು.
  • ಭಾರತದ ಶ್ರೀಮಂತ ಪರಂಪರೆ ಹಾಗೂ ಸಂಯುಕ್ತ ಸಂಸ್ಕೃತಿಯ ಮೌಲ್ಯವರ್ಧನಗೊಳಿಸಬೇಕು.
  • ಕಾಡುಗಳು, ಸರೋವರಗಳು, ನದಿಗಳು, ವನ್ಯಜೀವಿಗಳನ್ನು ಸಂರಕ್ಷಿಸುವುದು ಮತ್ತು ಅಭಿವೃದ್ಧಿಗೊಳಿಸುವುದು, ಜೀವ ರಾಶಿಯ ಬಗೆಗೆ ದಯಾಪರತೆ ಹೊಂದುವಂತಿರಬೇಕು.
  • ವೈಜ್ಞಾನಿಕ ದೃಷ್ಟಿಕೋನ, ಮಾನವೀಯತೆ ಹಾಗೂ ವಿಚಕ್ಷಣ ಆಸಕ್ತಿ, ಅಂತೆಯೇ ಸುಧಾರಣ ಮನೋಭಾವ ಬೆಳೆಸಬೇಕು.
  • ಸಾರ್ವಜನಿಕ ಆಸ್ತಿಪಾಸ್ತಿ ಸಂರಕ್ಷಣೆಗೆ ಮುಂದಾಗಬೇಕು ಹಾಗೂ ಹಿಂಸೆಯನ್ನು ತ್ಯಜಿಸಬೇಕು.
  • ಎಲ್ಲ ವ್ಯಕ್ತಿಗತ ಹಾಗೂ ಸಾಮೂಹಿಕ ಪ್ರಕ್ರಿಯೆಗಳಲ್ಲಿ ಅತ್ಯು ತ್ತಮಿಕೆಯನ್ನು ಹೊಂದುವ ಮೂಲಕ ಸಮಗ್ರ ರಾಷ್ಟ್ರ ಪ್ರಯತ್ನ ಹಾಗೂ ಸಾಧನೆಯ ಎತ್ತರದ ಮಜಲುಗಳನ್ನು ಮುಟ್ಟುವಂತೆ ಶ್ರಮಿಸಬೇಕು.
  • 6 ರಿಂದ 14 ವಯಸ್ಸಿನ ವರೆಗೆ ಎಲ್ಲ ಮಕ್ಕಳಿಗೆ ಹೆತ್ತವರು ಅಥವಾ ರಕ್ಷಕರು ಶಿಕ್ಷಣದ ಸೌಲಭ್ಯಗಳನ್ನು ಕಲ್ಪಿಸುವುದು ಕರ್ತವ್ಯ ಎನಿಸುತ್ತದೆ.

ಈ ಸುಂದರ 11 ಕರ್ತವ್ಯಗಳ ಪರಿಧಿಯಲ್ಲಿ ಭಾರತದ ಮಹೋನ್ನತಿಯ ಸಾಧ್ಯತೆಯ ಹೊಳಪು ಇದೆ. ನಮ್ಮ ವ್ಯಕ್ತಿಗತ ಹಾಗೂ ಸಾಮೂಹಿಕ ಬದುಕಿಗೆ ಮನದಲ್ಲಿ ಆವಿರ್ಭವಿಸುವ ಪೂರಕ, ಪ್ರೇರಕ ಧನಾತ್ಮಕ ಚಿಂತನೆಗಳೇ ಮೂಲ ಇಂಧನ.

1947ರಿಂದ ಪ್ರಚಲಿತ ಕಾಲಘಟ್ಟದ ವರೆಗೆ ಕ್ರಮಿಸಿದ 75 ಸಂವತ್ಸರಗಳ  ಪಥದ ಮೈಲಿಗಲ್ಲುಗಳನ್ನೊಮ್ಮೆ ಹಿಂದಿರುಗಿ ನಾವು ನೋಡಬೇಕಾಗಿದೆ. ಮನುಜನ ಬದುಕು ಎಂಬುದು ಎಂದೂ ನೇರ ರೇಖೆಯಂತಿಲ್ಲ. ಅದೇ ತೆರನಾಗಿ ನಮ್ಮ ವಿಶಾಲ ಭಾರತದ ರಾಷ್ಟ್ರ ಜೀವನ ನೇರ ಸರಳರೇಖೆಯಂತಿಲ್ಲ. ಮಾನವ ನಿರ್ಮಿತ ದುರಂತಗಳು, ಅಂತೆಯೇ ನಿಸರ್ಗದ ಮುನಿಸು ಅಥವಾ ಪ್ರಕೃತಿಯ ಪ್ರಕೋಪಗಳ ಸರಮಾಲೆ ಕಳೆದ ನಿನ್ನೆಗಳ‌ನ್ನು ಸಾಕಷ್ಟು ಕಬಂಧಬಾಹುಗಳಿಂದ ಈ ತಾಯ್ನೆಲವನ್ನು ಅಪ್ಪಿದ ವಿಚಾರ ಗತ ಇತಿಹಾಸ. ಅದೇ ರೀತಿ ಬರಲಿರುವ ನಾಳೆಗಳ ಗರ್ಭದಲ್ಲಿ, ಈ ನಮ್ಮ ಮಾತೃಭೂಮಿಗೆ ಬರಸಿಡಿಲಿನಂತೆ ಬಂದೆರಗಬಹುದಾದ ಎಡರುತೊಡರುಗಳನ್ನು ಕರಾರುವಕ್ಕಾಗಿ ಅರಿಯುವಂತೆಯೇ ಇಲ್ಲ. ಅದೇ ರೀತಿ  ಭವಿಷ್ಯದ ರಾಷ್ಟ್ರಪಥ ಏರುತಗ್ಗು, ಕಲ್ಲುಮುಳ್ಳುಗಳ ಹಾದಿಯಲ್ಲ ಎನ್ನುವಂತಿಲ್ಲ. ಹೀಗಾಗಿ ರಾಷ್ಟ್ರದ ವಿಶಾಲ ಜನಮನದ ಕರ್ತವ್ಯ ಪ್ರಜ್ಞೆಯಲ್ಲೇ ಪ್ರಗತಿಯ ಸೋಪಾನವಿದೆ ಎಂಬ ಸಾರ್ವಕಾಲಿಕ ಸತ್ಯಕ್ಕೆ ನಾವು ತೆರೆದುಕೊಳ್ಳಬೇಕಾಗಿದೆ.

ಈ ಮೇಲಿನ ಹನ್ನೊಂದು ಮೂಲಭೂತ ಕರ್ತವ್ಯಗಳಲ್ಲಿ ಕೆಲವೊಂದು ಹೃದಯದ ಭಾಷೆಗೇ ನೇರವಾಗಿ ಅನ್ವಯಿಸುವಂತಹುದು. ಮಾನವೀಯತೆ, ಪ್ರಾಣಿವರ್ಗಗಳ ಬಗೆಗೆ ದಯಾಪರತೆ, ಹಿಂಸಾತ್ಯಾಗ, ಹಿರಿಯ ಪರಂಪರೆಯ ಬಗೆಗೆ ಗೌರವ, ಸ್ವಾತಂತ್ರ್ಯ ಹೋರಾಟದ ದಿನಗಳ ತ್ಯಾಗ, ದೇಶ ಸೇವೆಯ ಮೌಲ್ಯಗಳ ಸಂಸ್ಮರಣೆ, ಸಹೋದರತೆ ಭಾವ- ಇವೆಲ್ಲ ಹೃದಯದ ತಂತಿ ಮಿಡಿಯುವ, ಭಾವ ತರಂಗದ, ಭೋಧನೆಯ ಸಿಂಚನ. ಇನ್ನು ವೈಜ್ಞಾನಿಕ ದೃಷ್ಟಿಕೋನ, ಮಾನವ ಸಂಪನ್ಮೂಲದ ಸದುಪಯೋಗ, ಪ್ರಗತಿಶೀಲ ಮನೋಭೂಮಿಕೆ ಇವೆಲ್ಲ ಬುದ್ಧಿಗೆ ಗ್ರಾಸ ನೀಡುವ ಕರ್ತವ್ಯದ ಕರೆಗಳು. ಇನ್ನು  ರಾಷ್ಟ್ರದ ಸಂವಿಧಾನ, ಧ್ವಜ ಹಾಗೂ ರಾಷ್ಟ್ರಗೀತೆಗೆ ಗೌರವ, ನಾಡಿನ ಸಾರ್ವಭೌಮತೆ, ಏಕತೆ, ಸಮಗ್ರತೆ ಜೋಪಾನವಾಗಿಸಲು ದೀಕ್ಷಾ ಬದ್ಧತೆ, ಪ್ರಕೃತಿ ಅಥವಾ ಸುಂದರ ಪರಿಸರದ ಸರ್ವಮೂಲಗಳ ಯಥಾವತ್ತಾದ ಸಂರಕ್ಷಣೆ, ಸಾಮಾಜಿಕ ಆಸ್ತಿಪಾಸ್ತಿಗಳ ಸಂರಕ್ಷಣೆ- ಇವೆಲ್ಲ ದೇಶದ ಎಲ್ಲ ಪ್ರಜೆಗಳ ಸಾಮೂಹಿಕ ಬದುಕಿನ ಹೆಗಲೇರಿದ ಹೊಣೆಗಾರಿಕೆ. ಅದೇ ರೀತಿ ಎಳೆಯ ಪೀಳಿಗೆಯ ಶಿಕ್ಷಣದ ಜವಾಬ್ದಾರಿ ಕೌಟುಂಬಿಕ ಕರ್ತವ್ಯ.

ಹೀಗೆ ಎಲ್ಲ ಮೂಲಭೂತ ಕರ್ತವ್ಯಗಳ ಬಗೆಗೆ ಕ್ಷಕಿರಣ ಹಾಯಿಸಿದಾಗ, ಸರಕಾರ ಕೆಲವೊಂದು ಕಾನೂನು ಕಟ್ಟಳೆಗಳನ್ನು ಪ್ರಜೆಗಳ ಬಾಹ್ಯ ಚಟುವಟಿಕೆಗಳ ನಿಯಂತ್ರಣದ ಮೂಲಕ ಹೇರಬಹುದು ಅಷ್ಟೇ. ಅರ್ಥಾತ್‌, ಪ್ರಜಾ ಸಮುದಾಯದ ರಾಷ್ಟ್ರೀಯ, ಸಾಮೂಹಿಕ ಪ್ರಕ್ರಿಯೆಗಳಲ್ಲಿ ಕರ್ತವ್ಯದ ಗೆರೆಗಳನ್ನು, ವಿಧಿ ನಿಷೇಧಾತ್ಮಕವಾಗಿ ಮೂಡಿಸಬಹುದು. ಆದರೆ ಮನದ ಮೂಲ ಚಿಂತನೆಯ ಬಗೆಗೇ ನಿರ್ದೇಶನದ ಬಿಗಿ ನಿಯಮ ಹೇರುವಂತಿಲ್ಲ. ಈ ಅಂಶ ಇದೀಗ ಭಾರತದ ಸರ್ವೋಚ್ಚ ನ್ಯಾಯಾಲಯದ ಮುಂದೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ರೂಪದಲ್ಲಿ ತಲುಪಿದೆ. ಈ ಬಗ್ಗೆ ಜನಪ್ರತಿನಿಧಿಗಳೇ ಕಾನೂನುಗಳ ಸಾಧ್ಯತೆಯನ್ನು ಚರ್ಚಿಸಿ, ನಿರ್ಧಾರ ಹೊಂದುವಿಕೆ ಅಧಿಕಾರ ವಿಭಜನೆ ಸೂತ್ರದನ್ವಯ ಸೂಕ್ತ ಎಂಬ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾದ ನ್ಯಾ| ಸಂಜಯ್‌ ಕಿಶನ್‌ ಹಾಗೂ ನ್ಯಾ| ಎಂ.ಎಂ.ಸುಂದರೇಶ್‌ ವ್ಯಕ್ತಪಡಿಸಿದರಾದರೂ ಹಿರಿಯ ನ್ಯಾಯವಾದಿ ರಂಜಿತ್‌ ಕುಮಾರ್‌ ಇದರ ಬಗ್ಗೆ ವಿಶೇಷ ಒತ್ತಡ ಹೇರಿದ ಬಳಿಕ ಈ ಅಹವಾಲು ಈಗ ಸ್ವೀಕೃತಗೊಂಡಿದೆ. “ಈ ಮೂಲಭೂತ ಕರ್ತವ್ಯಗಳ ಕಡ್ಡಾಯದ ಬಗ್ಗೆ ನಿಖರವಾದ ಕಾನೂನಿನ್ವಯ ಸಾಧ್ಯವೇ?’ ಎನ್ನುವ ಬಗೆಗೆ ಅಭಿಪ್ರಾಯ ಕೋರಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಈಗಾಗಲೇ ನೋಟಿಸ್‌ ನೀಡಲಾಗಿದೆ. ಈ ನೆಲೆಯಲ್ಲಿ ಕರ್ತವ್ಯಗಳ ಬಗ್ಗೆ ಹೊಸಬೆಳಕು ಚೆಲ್ಲುವಂತಾಗಬೇಕಾಗಿದೆ.

 

-ಡಾ| ಪಿ.ಅನಂತಕೃಷ್ಣ ಭಟ್‌, ಮಂಗಳೂರು

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.