ಸ್ಮಾರ್ಟ್ ಕಾಮಗಾರಿ ರಾಜ್ಯದಲ್ಲಿ ಪ್ರಗತಿಯಲ್ಲಿದೆ..
Team Udayavani, Jul 11, 2022, 6:10 AM IST
ರಾಜ್ಯದ ಬೆಂಗಳೂರು, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಶಿವಮೊಗ್ಗ, ತುಮಕೂರು ನಗರಗಳಲ್ಲಿ ಕೈಗೊಳ್ಳಲಾದ ಸ್ಮಾರ್ಟ್ಸಿಟಿ ಕಾಮಗಾರಿಗಳು ಕುಂಟುತ್ತಾ ಸಾಗಿವೆ. ಐದು ವರ್ಷ ಕಳೆದರೂ ಸ್ಮಾರ್ಟ್ಸಿಟಿ ಕಾಮಗಾರಿ ಪೂರ್ಣಗೊಂಡಿಲ್ಲ. ಈ ನಡುವೆ 2023ರ ಜೂನ್ ಒಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಕೇಂದ್ರ ಸರಕಾರ ಡೆಡ್ಲೈನ್ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಏಳು ನಗರಗಳ ಸ್ಮಾರ್ಟ್ ಸಿಟಿ ಕಾಮಗಾರಿಗಳು ಯಾವ ಹಂತದಲ್ಲಿವೆ? ಎಷ್ಟು ಕಾಮಗಾರಿ ಪೂರ್ಣವಾಗಿದೆ ಎಂಬುದರ ಚಿತ್ರಣ ಇಲ್ಲಿದೆ..
ಇನ್ನೂ ಸ್ಮಾರ್ಟ್ ಆಗದ ಕಾಮಗಾರಿ
ಕೇಂದ್ರ ಸರಕಾರದ ಸ್ಮಾರ್ಟ್ಸಿಟಿ ಯೋಜನೆಯ ಮೊದಲ ಹಂತದಲ್ಲೇ (2015) ಆಯ್ಕೆ ಯಾದ ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ನಗರದಲ್ಲಿ ಕಾಮಗಾರಿಯ ವೇಗ ಅಷ್ಟೊಂದು “ಸ್ಮಾರ್ಟ್’ ಆಗಲಿಲ್ಲ. ಆರಂಭದ ಕೆಲವು ವರ್ಷ ಕಾಮಗಾರಿಗಳು ಆಮೆಗತಿಯಲ್ಲಿ ಸಾಗಿದರೂ ಇದೀಗ ತುಸು ವೇಗ ಪಡೆದುಕೊಂಡಿರುವುದು ಸಮಾಧಾನಕರ ಸಂಗತಿ. ಈ ನಡುವೆ ಕೇಂದ್ರ ಸರಕಾರ 2023ರ ಜೂನ್ನಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಗಡುವು ನೀಡಿರುವುದರಿಂದ ಕಾಮಗಾರಿ ಇನ್ನಷ್ಟು ವೇಗ ಪಡೆದುಕೊಳ್ಳುವ ನಿರೀಕ್ಷೆಯಿದೆ. ಈಗಾಗಲೇ ನಡೆದ ಹಾಗೂ ಪ್ರಗತಿಯಲ್ಲಿರುವ ಕೆಲವು ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ. ಈಗ ಒಂದು ವರ್ಷದ ಗಡುವು ಇರುವುದರಿಂದ ತರಾತುರಿ ಯಲ್ಲಿ ಕೆಲಸ ಪೂರ್ಣಗೊಳಿಸುವ ಭರದಲ್ಲಿ ಕಾಮಗಾರಿ ಗುಣಮಟ್ಟ ಕುಸಿಯದಿರಲಿ ಎಂಬ ಅಪೇಕ್ಷೆ ಪ್ರಜ್ಞಾವಂತ ನಾಗರಿಕರದ್ದಾಗಿದೆ.
ಶೇ.70ರಷ್ಟು ಪ್ರಗತಿ: ಸ್ಮಾರ್ಟ್ಸಿಟಿ ಯೋಜನೆಯಡಿ ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿದೀಪ ಸೇರಿ ಇನ್ನಿತರ ಕ್ಷೇತ್ರಗಳಲ್ಲಿ ಮೂಲಸೌಲಭ್ಯ ಹೆಚ್ಚಿಸಲು, ಶಿಕ್ಷಣ, ಆರೋಗ್ಯ, ಸಾರಿಗೆ, ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಅಭಿವೃದ್ಧಿಗೊಳಿಸಲು ಒಟ್ಟು 1073 ಕೋಟಿ ರೂ.ಗಳಲ್ಲಿ 115 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈವರೆಗೆ 620 ಕೋಟಿ ರೂ. ವ್ಯಯಿಸಲಾಗಿದೆ. ಶೇ.70ರಷ್ಟು ಪ್ರಗತಿ ಸಾಧಿಸಲಾಗಿದೆ. ಇವುಗಳಲ್ಲಿ 352 ಕೋಟಿ ರೂ.ಗಳ 72 ಕಾಮಗಾರಿಗಳು ಪೂರ್ಣಗೊಂಡಿದ್ದು 721 ಕೋಟಿ ರೂ.ಗಳ 43 ಕಾಮಗಾರಿಗಳು ಪ್ರಗತಿಯಲ್ಲಿವೆ. ಇವುಗಳಲ್ಲಿ ಹೈಟೆಕ್ ಬಸ್ ನಿಲ್ದಾಣ, ಖಾಸಗಿ ಬಸ್ನಿಲ್ದಾಣ, ರಾಜಕಾಲುವೆ, ಬ್ಯಾರೇಜ್ ಪ್ರಮುಖವಾಗಿವೆ. ಇನ್ನು ಖಾಸಗಿ- ಸಾರ್ವಜನಿಕ ಸಹಭಾಗಿತ್ವದಲ್ಲಿ 43.87 ಕೋಟಿ ರೂ.ಗಳಲ್ಲಿ ಐದು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ 15.73 ಕೋಟಿ ರೂ.ಗಳ ಕಾಮಗಾರಿಗಳು ಪೂರ್ಣಗೊಂಡಿದ್ದರೆ, 28.14 ಕೋಟಿ ರೂ.ಗಳ ಕಾಮಗಾರಿ ಪ್ರಗತಿ ಹಂತದಲ್ಲಿವೆ. ಸ್ಮಾರ್ಟ್ ಸಿಟಿ ಯೋಜನೆಯ ಪೂರ್ಣ ಅನುಷ್ಠಾನದಿಂದ ಮಹಾನಗರದ ಮೂಲ ಸೌಕರ್ಯ ಹೆಚ್ಚಳವಾಗುವುದರಲ್ಲಿ ಎರಡು ಮಾತಿಲ್ಲ. ಆದರೆ ನಿಧಾನಗತಿಯ ಕಾರಣದಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗಿರುವ ಕಾಮಗಾರಿಗಳು ಗುಣಮಟ್ಟದೊಂದಿಗೆ ಶೀಘ್ರ ಪೂರ್ಣಗೊಳ್ಳಬೇಕಿದೆ.
“ವರ್ಕ್ ಇನ್ ಪ್ರೋಗ್ರೆಸ್’!
ಮಂಗಳೂರಿನ ಭವಿಷ್ಯದ ಅಭಿವೃದ್ಧಿಗೆ ಸ್ಮಾರ್ಟ್ಸಿಟಿ ಯೋಜನೆ ಹೊಸ ನಿರೀಕ್ಷೆ ಹುಟ್ಟುಹಾಕಿದೆ; ಆದರೆ ಕಾಲಮಿತಿಯೊಳಗೆ ಮುಗಿಯಬೇಕಾದ ಯೋಜನೆ ಮಾತ್ರ ಈಗಲೂ “ಪ್ರಗತಿಯಲ್ಲಿದೆ’!
ಮಂಗಳೂರು ನಗರವನ್ನು ಸ್ಮಾರ್ಟ್ಸಿಟಿಯನ್ನಾಗಿ ಕೇಂದ್ರ ಸರಕಾರವು “ಹಂತ-2’ರಲ್ಲಿ ಆಯ್ಕೆ ಮಾಡಿತ್ತು. 2017ರ ಎ.6ರಂದು “ಮಂಗಳೂರು ಸ್ಮಾರ್ಟ್ಸಿಟಿ ಕಂಪೆನಿ ಲಿ.’ ರಚನೆಯಾಗಿದೆ. ಅದರಂತೆ, ಅನುಮೋದನೆ ಯಾದ ಎಲ್ಲ ಕಾಮಗಾರಿಯನ್ನು 2022ರ ಮಾರ್ಚ್ನಲ್ಲಿ ಪೂರ್ಣಗೊಳಿ ಸಲು ಗಡುವು ಇತ್ತು. ಆದರೆ ಇನ್ನೂ ಹಲವು ಕಾಮಗಾರಿ ಪ್ರಗತಿಯಲ್ಲಿ ರುವ ಕಾರಣ ಕಾಲಮಿತಿ 2023ರ ಮಾರ್ಚ್ ತನಕ ವಿಸ್ತರಿಸಲಾಗಿದೆ. ಕೊರೊನಾ ಕಾರಣದಿಂದ ಕಾರ್ಮಿಕರಿಲ್ಲದೆ 2 ವರ್ಷ ಕಾಮಗಾರಿ ಸರಿಯಾಗಿ ನಡೆದಿರಲಿಲ್ಲ ಎಂಬುದು ಅಧಿಕಾರಿಗಳ ಸಮಜಾಯಿಷಿ.
ಅಂದಹಾಗೆ, ನಿಗದಿತ ಅವಧಿಗಿಂತ ತುಂಬ ತಡವಾಗಿ ಟೇಕಾಫ್ ಆದ ಯೋಜನೆ ಯನ್ನು ಕಾಲಮಿತಿಯೊಳಗೆ ಪೂರ್ಣ ಗೊಳಿಸುವ ಧಾವಂ ತ ದಲ್ಲಿ ಮಂಗಳೂರಿನ ಕೆಲವೆಡೆ ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆ ಆಗಿದೆ. ಪ್ರಧಾನ ರಸ್ತೆಗಳಲ್ಲಿ ಏಕಕಾಲದಲ್ಲಿ ಕಾಮಗಾರಿ ಶುರುವಾದ ಕಾರಣ ಪ್ರಯಾಣಿಕರಿಗೆ ಕಿರಿಕಿರಿ. ಕಾಂಕ್ರೀಟ್ ರಸ್ತೆ ಅಗೆಯುವುದು, ವಿವಿಧ ವೃತ್ತದಲ್ಲಿ “ಟ್ರಾಫಿಕ್ ಐಲ್ಯಾಂಡ್’ ಯೋಜನೆಗೆ ವಿರೋಧ ವ್ಯಕ್ತವಾಗಿದೆ.
ಪ್ರಗತಿಯಲ್ಲಿದೆ!: ರಾಷ್ಟ್ರೀಯ ಹೆದ್ದಾರಿ 66ರ ಜಪ್ಪುವಿನಿಂದ ಮಹಾಕಾಳಿ ಪಡು³ ರೈಲ್ವೇ ಕೆಳಸೇತುವೆ ಮುಖಾಂತರ ಮೋರ್ಗನ್ಸ್ಗೆàಟ್ ಜಂಕ್ಷನ್ವರೆಗೆ ಒಟ್ಟು 1,200 ಮೀ. ಉದ್ದದ 49.95 ಕೋ.ರೂ. ಅಂದಾಜು ವೆಚ್ಚದ (34.33 ಕೋ.ರೂ. ದಕ್ಷಿಣ ರೈಲ್ವೇಗೆ ಠೇವಣಿ ಕೊಡುಗೆ ಸೇರಿ)ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲಲ್ಲಿ ಕೆಲವು “ಸ್ಮಾರ್ಟ್ ರಸ್ತೆ’ಗಳ ಕಾಮಗಾರಿ ನಡೆಯುತ್ತಿದೆ. 24.94 ಕೋ.ರೂ ವೆಚ್ಚದಲ್ಲಿ ಎಮ್ಮೆಕೆರೆಯಲ್ಲಿ ಅಂತಾರಾಷ್ಟ್ರೀಯ ಈಜುಕೊಳ, 21.07 ಕೋ.ರೂ. ವೆಚ್ಚದಲ್ಲಿ ಉರ್ವ ಮಾರುಕಟ್ಟೆ ಬಳಿ ಒಳಾಂಗಣ ಕ್ರೀಡಾಂಗಣ, 48.83 ಕೋ.ರೂ. ವೆಚ್ಚದಲ್ಲಿ ವೆನ್ಲಾಕ್ ಆಸ್ಪತ್ರೆಯ ಉನ್ನತೀಕರಣ ಹಾಗೂ ಸರ್ಜಿಕಲ್ ಬ್ಲಾಕ್ ಕಟ್ಟಡ, 79.05 ಕೋ.ರೂ. ವೆಚ್ಚದಲ್ಲಿ ಹಂಪನಕಟ್ಟ ಹಳೆ ಬಸ್ನಿಲ್ದಾಣದ ಪ್ರದೇಶ ದಲ್ಲಿ ವಾಣಿಜ್ಯ ಸಂಕೀರ್ಣ, ಪಡೀಲ್-ಪಂಪ್ವೆಲ್ ರಸ್ತೆ ವಿಸ್ತರಣೆ ಕಾಮ ಗಾರಿ ಪ್ರಗತಿಯಲ್ಲಿದೆ. ಹಂಪನಕಟ್ಟದಲ್ಲಿ ಪಾದಚಾರಿಗಳಿಗೆ ಅಂಡರ್ಪಾಸ್, ಲಾಲ್ಬಾಗ್ ಪಾಲಿಕೆ ಕಟ್ಟಡದ ಪಕ್ಕ ಹೆಚ್ಚುವರಿ ಕಟ್ಟಡ, ತುಂಬೆ ವೆಂಟೆಡ್ ಡ್ಯಾಂ ಬಳಿ ಕುಸಿದ ತಡೆಗೋಡೆ ಕಾಮಗಾರಿ ವೇಗ ಪಡೆಯುತ್ತಿದೆ.
ಅರ್ಧಂಬರ್ಧ ಸ್ಮಾರ್ಟ್!
ಕುಂದಾನಗರಿ ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಪೂರ್ಣಗೊಳಿಸಲು ಕೇಂದ್ರ ಸರಕಾರ ನೀಡಿರುವ ಗಡುವು ಮುಗಿಯಲು ಇನ್ನೊಂದು ವರ್ಷ ಮಾತ್ರ ಬಾಕಿ ಉಳಿದಿದ್ದು, ಸದ್ಯ ಶೇ.50ರಷ್ಟು ಮಾತ್ರ ಕಾಮಗಾರಿ ಮುಗಿದಿದೆ. ಇನ್ನೂ ಅರ್ಧದಷ್ಟು ಕೆಲಸ ಆಗಬೇಕಾಗಿದೆ. 2020ರ ಮಾರ್ಚ್ದಿಂದ 2021ರ ವರೆಗೆ ಸ್ಮಾರ್ಟ್ ಸಿಟಿ ಕೆಲಸಗಳು ನಡೆಯಲೇ ಇಲ್ಲ. ಕೋವಿಡ್ ಲಾಕ್ಡೌನ್ದಿಂದ ಕೆಲಸ ವಿಳಂಬವಾ ಗಿದೆ. ಕೆಲವು ಕೆಲಸಗಳಿಗೆ ಮಳೆಯೂ ಅಡ್ಡಿ ಯಾಗಿದೆ. ಪ್ರಗತಿ ಹಂತದಲ್ಲಿರುವ ಕಾಮಗಾರಿ ಗಳನ್ನು ನಿಗದಿತ ಅವ ಧಿಯಲ್ಲಿ ಮುಗಿಸುವ ಇರಾದೆಯನ್ನು ಅ ಧಿಕಾರಿಗಳು ಹೊಂದಿದ್ದಾರೆ.
ಬಿರುಕು ಬಿಟ್ಟ ರಸ್ತೆಗಳು: ಮೂಲ ಗುತ್ತಿಗೆದಾರರು ಇಲ್ಲದೇ ಬಹುತೇಕ ಕಾಮಗಾರಿಗಳನ್ನು ಉಪ ಗುತ್ತಿಗೆದಾರರೇ ಮಾಡುತ್ತಿದ್ದಾರೆ. ಇದರಿಂದ ಕೆಲವು ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊ ಳ್ಳುವಲ್ಲಿ ಸಾಧ್ಯವಾಗುತ್ತಿಲ್ಲ. ಕೆಲವು ರಸ್ತೆಗಳು ಕಳಪೆ ಮಟ್ಟದ್ದಾಗಿವೆ. ಸಿಮೆಂಟ್ ರಸ್ತೆ ಎಂದರೆ ಸುಮಾರು 20 ವರ್ಷ ಬಾಳಿಕೆ ಬರಬೇಕು. ಆದರೆ ಒಂದೆರಡು ರಸ್ತೆಗಳು ಈಗಲೇ ಬಿರುಕು ಬಿಡುತ್ತಿವೆ. ಕಾಂಗ್ರೆಸ್ ರಸ್ತೆ, ಕೆಪಿಟಿಸಿಎಲ್ ರಸ್ತೆ, ಕೊಲ್ಲಾಪುರ ರಸ್ತೆಗಳಲ್ಲಿ ಮಳೆಗಾಲದ ವೇಳೆ ತಗ್ಗು ಬೀಳುತ್ತಿವೆ ಎಂದು ಜನ ದೂರಿದ್ದಾರೆ.
930 ಕೋಟಿ ರೂ. ಒಟ್ಟು ಅನುದಾನ
392 ಕೋಟಿ ರೂ. ಕೇಂದ್ರ ಸರಕಾರದ ಅನುದಾನ
413 ಕೋಟಿ ರೂ. ರಾಜ್ಯ ಸರಕಾರದ ಅನುದಾನ
103 ಒಟ್ಟು ಕಾಮಗಾರಿ
192 ಕೋಟಿ ರೂ. ಮುಗಿದ 50 ಕಾಮಗಾರಿ ವೆಚ್ಚ
53 ಪ್ರಗತಿ ಹಂತದಲ್ಲಿ 738 ಕೋಟಿ ರೂ. ಕಾಮಗಾರಿ ವೆಚ್ಚ
ಗಡುವಿನಲ್ಲಿ ಯೋಜನೆ ಪೂರ್ಣಗೊಳ್ಳುವುದು ಅನುಮಾನ
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಸ್ಮಾರ್ಟ್ಸಿಟಿ ಅಡಿಯಲ್ಲಿ ಬೆಂಗಳೂರಿನಲ್ಲಿ ಕೈಗೊಳ್ಳಲಾಗಿರುವ 51 ಯೋಜನೆಗಳ ಪೈಕಿ ಈವರೆಗೆ ಕೇವಲ 14 ಯೋಜನೆಗಳು ಮಾತ್ರ ಪೂರ್ಣಗೊಂಡಿವೆ, ಇನ್ನೂ 37ಯೋಜನೆಗಳ ಕಾಮಗಾರಿ ಚಾಲ್ತಿಯಲ್ಲಿವೆ.
ದೇಶದ ನಗರಗಳನ್ನು ಸ್ಮಾರ್ಟ್ ಆಗಿಸುವ ಸಲುವಾಗಿ ಕೇಂದ್ರ ಸರಕಾರ ಸ್ಮಾರ್ಟ್ಸಿಟಿ ಯೋಜನೆ ಜಾರಿಗೊಳಿಸಿದೆ. 2015ರಿಂದ ಸ್ಮಾರ್ಟ್ಸಿಟಿ ಮಿಷನ್ ಆರಂಭಿಸಲಾಗಿತ್ತು. ಆದರೆ ಬೆಂಗಳೂರು ನಗರವನ್ನು 2017ರ ಜೂನ್ ತಿಂಗಳಲ್ಲಿ ಸ್ಮಾರ್ಟ್ಸಿಟಿ ಮಿಷನ್ಗೆ ಆಯ್ಕೆ ಮಾಡಲಾಯಿತು. ಅದಾದ ಅನಂತರ 2017ರ ಅಕ್ಟೋಬರ್ನಲ್ಲಿ ಕೇಂದ್ರ ಸರಕಾರ ಯೋಜನೆ ಜಾರಿಗೆ ವಿಶೇಷ ಉದ್ದೇಶ ವಾಹಕ ಸ್ಥಾಪನೆಗೆ ಆದೇಶಿಸಿದ್ದು, 2018ರ ಜನವರಿಯಲ್ಲಿ ಬೆಂಗಳೂರು ಸ್ಮಾರ್ಟ್ಸಿಟಿ ಲಿಮಿಟೆಡ್ ರಚಿಸಲಾಯಿತು. ಅದಾದ ಅನಂತರದಿಂದ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ಗುತ್ತಿಗೆ ಸಂಸ್ಥೆ ನೇಮಕ ಮಾಡಲಾಗಿದೆ. ಒಟ್ಟು 51 ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದ್ದು, 2023ರ ಮಾರ್ಚ್ ಒಳಗೆ ಯೋಜನೆ ಪೂರ್ಣಗೊಳಿಸಲು ಅಂತಿಮ ಗಡುವಾಗಿದೆ. ಸದ್ಯ ಅಂದಾಜಿನ ಪ್ರಕಾರ ಶೇ. 70 ಪ್ರಮಾಣದ ಕಾಮಗಾರಿ ಪೂರ್ಣಗೊಂಡಿದೆ. ಅದರಲ್ಲಿ ಕೆಲವು ಯೋಜನೆಗಳ ಕೆಲಸ ಈವರೆಗೆ ಆರಂಭವಾಗಿಲ್ಲ. ಹೀಗಾಗಿ ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಳ್ಳುವುದು ಅನುಮಾನ ಎನ್ನುವಂತಾಗಿದೆ.
ಯಾವೆಲ್ಲ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ
ರಸ್ತೆಗಳ ಅಭಿವೃದ್ಧಿ, ಕಟ್ಟಡಗಳ ನಿರ್ಮಾಣ, ಉದ್ಯಾನಗಳ ಅಭಿವೃದ್ಧಿ, ನಗರದ ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ಬಲಪಡಿಸುವುದು, ಸಾರಿಗೆ ವ್ಯವಸ್ಥೆಯಲ್ಲಿ ಬದಲಾವಣೆ, ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ತರುವಂತಹ ಯೋಜನೆಗಳು.
ಸ್ಮಾರ್ಟ್ ಸಿಟಿಗೆ 7ನೇ ಸ್ಥಾನ
ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ತುಮಕೂರು ಸ್ಮಾರ್ಟ್ ಸಿಟಿ ದಕ್ಷಿಣ ಭಾರತದಲ್ಲಿಯೇ ಉತ್ತಮ ಕೆಲಸ ಮಾಡಿರುವ ಸ್ಮಾರ್ಟ್ ಸಿಟಿಯಾಗಿ ಹೊರಹೊಮ್ಮಿದ್ದು ದೇಶದ 100 ಸ್ಮಾರ್ಟ್ ಸಿಟಿಗಳ ಪೈಕಿ ತುಮಕೂರು ಸ್ಮಾರ್ಟ್ ಸಿಟಿೆ ಟಾಪ್ 7ನೇ ಸ್ಥಾನ ಪಡೆದು ರಾಜ್ಯದ ಲ್ಲಿಯೇ ಮೊದಲನೇ ಸ್ಥಾನದಲ್ಲಿದೆ. ತುಮಕೂರಿನಲ್ಲಿ 2017ರಲ್ಲಿ 930 ಕೋಟಿ ರೂ. ವೆಚ್ಚ ದಲ್ಲಿ ಕಾಮಗಾರಿ ಆರಂಭಗೊಂಡಿತು. ಈ ಯೋಜನೆಯಲ್ಲಿ 151 ಅಭಿವೃದ್ಧಿ ಯೋಜನೆಗಳು ಚಾಲನೆಯಲ್ಲಿವೆ. ಇದರ ಜತೆಗೆ 27 ಯೋಜನೆಗಳು ಟೆಂಡರ್ ಹಂತದಲ್ಲಿದ್ದು, ಒಟ್ಟು 178 ಯೋಜನೆಗಳು ಸುಮಾರು 930 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿವೆ. ನಗರದ ಮಧ್ಯ ಭಾಗದಲ್ಲಿರುವ ಬಡಾವಣೆಗಳನ್ನು ಅಭಿವೃದ್ಧಿಪಡಿಸುವುದೇ ಸ್ಮಾರ್ಟ್ಸಿಟಿ ಯೋಜನೆಯ ಮುಖ್ಯ ಉದ್ದೇಶವಾಗಿದೆ. ನಗರದ ಹೃದಯ ಭಾಗವನ್ನು ಸ್ಮಾರ್ಟ್ಸಿಟಿ ಯೋಜನೆಗೆ ಆಯ್ಕೆ ಮಾಡಲಾಗಿತ್ತು. ಈ ಯೋಜನೆಯಲ್ಲಿ ವಿಶೇಷವಾಗಿ ಅಮಾನಿಕೆರೆಯ ಅಭಿವೃದ್ಧಿಗಾಗಿಯೇ 70-80 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಶೇ.70 ಸ್ಮಾರ್ಟ್ ಕಾಮಗಾರಿ ಪೂರ್ಣ
ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ಸಿಟಿ ಯೋಜನೆಗಳ ಪೈಕಿ ಶೇ.70 ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಮಯದ ಗಡುವು ಹಾಕಿಕೊಳ್ಳಲಾಗಿದೆ. ಕೋವಿಡ್, ಟೆಂಡರ್ ಪ್ರಕ್ರಿಯೆಗಳ ಗೊಂದಲಗಳಿಂದಾಗಿ ಸ್ಮಾರ್ಟ್ಸಿಟಿ ಯೋಜನೆಯ ಕೆಲವು ಕಾಮಗಾರಿಗಳು ಇಂದಿಗೂ ಪ್ರಗತಿಯಲ್ಲಿವೆ. ಯೋಜನೆಯ 1,000 ಕೋಟಿ ರೂ.ಗಳಲ್ಲಿ 64 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಇವುಗಳಲ್ಲಿ 44 ಕಾಮಗಾರಿ ಪೂರ್ಣಗೊಂಡಿದ್ದು, 19 ಕಾಮಗಾರಿಗಳು ಪ್ರಗತಿಯಲ್ಲಿವೆ. 1 ಯೋಜನೆ ಪಿಪಿಪಿ ಮಾದರಿಯಲ್ಲಿ ಮಲ್ಟಿ ಲೇವಲ್ ಕಾರ್ ಪಾರ್ಕಿಂಗ್ ನಿರ್ಮಾಣ ಕೂಡ ನಡೆಯುತ್ತಿದೆ. ಶೇ. 70 ಕಾಮಗಾರಿಗಳು ಪೂರ್ಣಗೊಂಡಂತಾಗಿವೆ. ಯೋಜನೆಯ 1 ಸಾವಿರ ಕೋಟಿ ರೂ.ಗಳಲ್ಲಿ ಇಲ್ಲಿಯವರೆಗೆ ಆಡಳಿತ ಕಾರ್ಯನಿರ್ವಹಣ ವೆಚ್ಚ, ಯೋಜನೆ ಗಳು ಸೇರಿ 560 ಕೋಟಿ ರೂ. ಖರ್ಚಾಗಿದೆ. ಇಂಟಿಗ್ರೇಟೆಡ್ ಕಮಾಂಡಿಂಗ್ ಕಂಟ್ರೋಲ್ ಸೆಂಟರ್-45 ಕೋಟಿ ರೂ., ಕೈಗಾರಿಕೆ ವಸಾಹತು ಪ್ರದೇಶದ ರಸ್ತೆ-33 ಕೋಟಿ ರೂ., ಮಹಾತ್ಮಾಗಾಂಧಿ ಉದ್ಯಾನ ಅಭಿವೃದ್ಧಿ-20 ಕೋಟಿ ರೂ., ತೋಳನಕೆರೆ ಉದ್ಯಾನ-20 ಕೋಟಿ ರೂ., ಸ್ಮಾರ್ಟ್ ರೋಡ್ ಪ್ಯಾಕೇಜ್ 5-27 ಕೋಟಿ ರೂ., ಗ್ರೀನ್ ಮೊಬೆಲಿಟಿ ಕಾರಿಡಾರ್-8 ಕೋಟಿ ರೂ., ಮಹಾನಗರ ಪಾಲಿಕೆಗೆ ಆಟೋ ಟಿಪ್ಪರ್ ಹಾಗೂ ಜೆಟ್ಟಿಂಗ್ ಯಂತ್ರಗಳು-2.5 ಕೋಟಿ ರೂ. ಸೇರಿ ಒಟ್ಟು 44 ಕಾಮಗಾರಿಗಳು ಪೂರ್ಣಗೊಂಡಿವೆ. ದೊಡ್ಡ ಕಾಮಗಾರಿಗಳ ಪೈಕಿ 165 ಕೋಟಿ ರೂ. ವೆಚ್ಚದ ನ್ಪೋರ್ಟ್ಸ್ ಕಾಂಪ್ಲೆಕ್ಸ್ ಟೆಂಡರ್ ಪ್ರಕ್ರಿಯೆ ಗೊಂದಲಕ್ಕೆ ತೆರೆಬಿದ್ದು, ಟೆಂಡರ್ ಪ್ರಕ್ರಿಯೆ ಮುಗಿದು ಕಾರ್ಯಾದೇಶ ನೀಡಲಾಗಿದೆ. ಇನ್ನೂ ಉಣಕಲ್ಲ ನಾಲಾ ಹಸುರು ಪಥ ನಿರ್ಮಾಣ-88 ಕೋಟಿ ರೂ. ಸೇರಿ ಸಣ್ಣಪುಟ್ಟ ಕಾಮಗಾರಿಗಳು ಬಾಕಿ ಉಳಿದಿದೆ.
ಕಾಮಗಾರಿಗಳಿಗೆ ಹಿನ್ನಡೆ
ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿದ್ದು ಅಕ್ಟೋಬರ್ 2016ರಂದು, ಕಂಪೆನಿ ಆಯ್ಕೆಯಾಗಿದ್ದು ಫೆ. 25, 2017ರಂದು. ಅಧಿಕೃತವಾಗಿ ಆರಂಭವಾಗಿದ್ದು ಮೇ 2017ರಂದು. ಕೆಲಸ ಶುರುವಾಗಿ 5 ವರ್ಷ ಕಳೆದಿದ್ದು ಈ ಅವಧಿಯಲ್ಲಿ ಕೋವಿಡ್, ಲಾಕ್ಡೌನ್, ಹುಣಸೋಡು ಸ್ಫೋಟದ ಅನಂತರ ಕಚ್ಚಾ ಸಾಮಗ್ರಿಗಳ ಕೊರತೆ, ಕಾರ್ಮಿಕರ ಕೊರತೆ, ದರ ಏರಿಕೆ, ವಿವಿಧ ಇಲಾಖೆಗಳ ಜತೆ ಸಮನ್ವಯ ಕೊರತೆ ಹೀಗೆ ಅನೇಕ ಕಾರಣಗಳಿಗೆ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಂಡಿಲ್ಲ.
ಸ್ಮಾರ್ಟ್ ಕಾಮಗಾರಿಗಳ ವಿವರ: ಸ್ಮಾರ್ಟ್ಸಿಟಿಯ ಬಹುಪಾಲು ಹಣ ಮೀಸಲಾಗಿರುವುದು ರಸ್ತೆಗಳ ಅಭಿವೃದ್ಧಿ, ಡಾಂಬರ್ ರಸ್ತೆ, ಫುಟ್ಪಾತ್ಗಳ ಅಭಿವೃದ್ಧಿ, ಕನ್ಸ್ರ್ವೆನ್ಸಿಗಳ ಅಭಿವೃದ್ಧಿ, ಇ- ಟಾಯ್ಲೆಟ್, ಹಸುರೀಕರಣ, ಸರಕಾರಿ ಆಸ್ಪತ್ರೆಗೆ ವೈದ್ಯಕೀಯ ಉಪಕರಣಗಳ ಪೂರೈಕೆ, ಪಾರ್ಕ್ಗಳ ಅಭಿವೃದ್ಧಿ, ಶಾಲೆಗಳಲ್ಲಿ ಸ್ಮಾರ್ಟ್ ಲೈಬ್ರ ರಿಗೆ ಮೂಲಸೌಕರ್ಯ, 45 ಸರಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಶಿಕ್ಷಣ ಪರಿಕರಗಳ ಪೂರೈಕೆ, ಸರ ಕಾರಿ ಶಾಲೆಗಳ ಕಟ್ಟಡ ಅಭಿವೃದ್ಧಿ, ಚರಂಡಿಗಳ ಅಭಿವೃದ್ಧಿ, ಕ್ರೀಡಾಂಗಣ ಅಭಿವೃದ್ಧಿ, ಎಲ್ಇಡಿ ವಿದ್ಯುತ್ ದೀಪಗಳ ಅಳವಡಿಕೆ, ಬಸ್ನಿಲ್ದಾಣಗಳ ಆಧುನೀಕರಣ, ಪಾರಂಪರಿಕ ಕಟ್ಟಡಗಳ ಅಭಿವೃದ್ಧಿ, ಸ್ಮಾರ್ಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸೇರಿ ಅನೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಕೆಲವು ಅನುಷ್ಠಾನ ಹಂತದಲ್ಲಿವೆ.
1,483 ಕೋಟಿ ರೂ. ವೆಚ್ಚದ ಕಾಮಗಾರಿ
ಸ್ಮಾರ್ಟ್ಸಿಟಿಯಲ್ಲಿ ಮೂರು ಹಂತದ ಕಾಮಗಾರಿಗಳನ್ನು ಕೈಗೊಳ್ಳಲಾ ಗಿದ್ದು ಎಸ್ಸಿಎಂ (ರಸ್ತೆ, ಇತರ) 68 ಕಾಮಗಾರಿಗಳಿಗೆ 882 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದರಲ್ಲಿ 142 ಕೋಟಿ ರೂ. ವೆಚ್ಚದ 39 ಕಾಮಗಾರಿಗಳು ಪೂರ್ಣಗೊಂಡಿದ್ದು 739.88 ಕೋಟಿ ರೂ. ವೆಚ್ಚದ ಕಾಮಗಾರಿಗಳು ಅನುಷ್ಠಾನ ಹಂತದಲ್ಲಿವೆ. ಪಿಪಿಪಿ ಮಾದರಿಯಲ್ಲಿ ಎಲ್ಇಡಿ ಬೀದಿದೀಪ, ಕಾಲುವೆಗೆ ಸೋಲಾರ್ ಪ್ಯಾನಲ್ ಹಾಕುವ ಕಾಮಗಾರಿ ಕೈಗೊಳ್ಳಲಾಗಿದ್ದು ಎಲ್ಇಡಿ ಬೀದಿದೀಪದ 45.66 ಕೋಟಿ ರೂ. ಮೊತ್ತದ ಕಾಮಗಾರಿ ಅನುಷ್ಠಾನ ಹಂತದಲ್ಲಿದೆ. 140.10 ಕೋಟಿ ರೂ. ವೆಚ್ಚದ ತುಂಗಾ ಕಾಲುವೆಗೆ ಸೋಲಾರ್ ಪ್ಲೇಟ್ಗಳನ್ನು ಅಳವಡಿಸುವ ಕಾಮಗಾರಿ ಟೆಂಡರ್ ಹಂತದಲ್ಲಿದೆ. ಇನ್ನು 333.23 ಕೋಟಿ ಮೊತ್ತದ ಕನ್ವರ್ಜೆನ್ಸ್ ಕಾಮಗಾರಿಗಳು (24/7 ಕುಡಿವ ನೀರು, ಮೆಸ್ಕಾಂ ಕಾಮಗಾರಿಗಳು, ಇತರ) ಅನುಷ್ಠಾನ ಗೊಳ್ಳುತ್ತಿದ್ದು 197 ಕೋಟಿ ರೂ. ಮೊತ್ತದ 30 ಕಾಮಗಾರಿ ಪೂರ್ಣಗೊಂಡಿದ್ದು, 135.40 ಕೋಟಿ ಮೊತ್ತದ ಒಂದು ಯೋಜನೆ ಅನುಷ್ಠಾನ ಹಂತದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಸೀಟಿಗಾಗಿ ಮಹಿಳೆಯರ ಕಿತ್ತಾಟ: ರಸ್ತೆಯಲ್ಲೇ ನಿಂತ ಬಸ್
Lok Sabha Election: ರಾಯ್ಬರೇಲಿಯಿಂದ ರಾಹುಲ್, ಅಮೇಥಿಯಿಂದ ಕೆ.ಎಲ್. ಶರ್ಮ ಕಣಕ್ಕೆ
Bengaluru: ರಸ್ತೆಯಲ್ಲೇ 10 ಬಾರಿ ಇರಿದು ಪತ್ನಿಯ ಕೊಂದ ಪತಿ!
Mumbai: 45 ದಿನದಲ್ಲಿ 300 ಐಸ್ಕ್ರೀಂ ಆರ್ಡರ್ ಮಾಡಿದ!
Daily Horoscope: ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಆರೋಗ್ಯ ಉತ್ತಮ