ಧಾರವಾಡ ಕೃಷಿ ವಿವಿಗೆ ಐಸಿಎಆರ್ ಪ್ರಶಸ್ತಿ ಗರಿ
Team Udayavani, Feb 19, 2017, 3:45 AM IST
ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯವು ನವದೆಹಲಿಯ ಭಾರತೀಯ ಅನುಸಂಧಾನ ಪರಿಷತ್ ನೀಡುವ ಐಸಿಎಆರ್ನ “ಕಿರಿಯ ಸಂಶೋಧನಾ ಶಿಷ್ಯವೇತನ-2016’ರ ದ್ವಿತೀಯ ಸ್ಥಾನಕ್ಕೆ ಪಾತ್ರವಾಗಿದೆ.
ಫೆ.14ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಐಸಿಎಆರ್ನ ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳ ಸಮ್ಮೇಳನದಲ್ಲಿ ಕುಲಪತಿ ಡಾ|ಡಿ.ಪಿ. ಬಿರಾದಾರ ವಿವಿ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು. ಕೇಂದ್ರದ ಕೃಷಿ ಸಚಿವ ರಾಧಾಮೋಹನ ಸಿಂಗ್, ಪುರುಷೋತ್ತಮ್ ರುಪಾಲ, ಸುದರ್ಶನ್ ಭಗತ್ ಹಾಗೂ ಐಸಿಎಆರ್ನ ಮಹಾ ನಿರ್ದೇಶಕ ಡಾ|ತ್ರಿಲೋಚನ ಮೊಹಪಾತ್ರ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸ್ನಾತಕ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಧಾರವಾಡದ ಕೃಷಿ ವಿವಿ ವಿದ್ಯಾರ್ಥಿಗಳು ಅತಿ ಹೆಚ್ಚು ರ್ಯಾಂಕ್ ಗಳಿಸಿರುವುದಕ್ಕೆ ಈ ಪ್ರಶಸ್ತಿ ಲಭಿಸಿದೆ. ಶಿಕ್ಷಣ ನಿರ್ದೇಶಕರಾದ ಡಾ|ಬಿ.ಎಸ್. ಜಾನಗೌಡರ, ಡೀನ್ (ಕೃಷಿ) ಡಾ|ಆರ್. ಎಸ್. ಗಿರಡ್ಡಿ ಇದ್ದರು.